ಪುತ್ತೂರು: ಈ ಬಾರಿ ಮುಂಗಾರು ಮಳೆ ಒಂದು ವಾರದ ಮುಂಚೆಯೇ ಆಗಮಿಸಿದ್ದು ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಅನೇಕ ಕಡೆ ಹಾನಿಯುಂಟಾಗಿದೆ. ಹಾನಿಗೊಳಗಾದ ಸ್ಥಳಗಳಿಗೆ ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಸ್ಪಂದನೆ ನೀಡುವುದರ ಜೊತೆ 24 ಗಂಟೆಯೂ ಅಲರ್ಟ್ ಆಗಿರಬೇಕು ಎಂದು ಶಾಸಕ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು “ಮಳೆಗಾಲಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಹಿಂದೆಯೇ ಸೂಚನೆಯನ್ನು ನೀಡಲಾಗಿದೆ. ಬೇಕಾದ ಎಲ್ಲಾ ಸಿದ್ದತೆಗಳನ್ನು ಇಲಾಖೆ ಮಾಡಿಕೊಂಡಿದೆ. ಗಾಳಿ ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮುರಿದು ಬಿದ್ದ ಕಂಬಗಳ ಮರು ಜೋಡಣೆ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಮೆಸ್ಕಾಂ ಇಲಾಖೆಗೆ ಖಡಕ್ ಸೂಚನೆಯನ್ನು ನೀಡಿದ್ದೇನೆ. ಎಲ್ಲೆಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆಯೋ ಅದನ್ನು ಕೂಡಲೇ ದುರಸ್ಥಿ ಮಾಡಿ ವಿದ್ಯುತ್ ಪೂರೈಕೆ ಮಾಡುವಂತೆ ತಿಳಿಸಿದ್ದೇನೆ. ಮಳೆ ನೀರು ಸರಾಗವಾಗಿ ಹರಿದು ಹೋಗುವಲ್ಲಿ ಜನರ ಸಹಕಾರವೂ ಅಗತ್ಯವಾಗಿದೆ. ಕೌಪೌಂಡ್ ವಾಲ್ ಕಟ್ಟುವಾಗ ಮಳೆ ನೀರು ಸಂಗ್ರಹಣೆಯಾಗಿ ಪಕ್ಕದ ಮನೆಯವರಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ನೀರನ್ನು ತಡೆಯಲು ಸಾಧ್ಯವಿಲ್ಲದ್ದರಿಂದ ಅದು ಹರಿದು ಹೋಗುವುವುದಕ್ಕೆ ನಾವು ತಡೆಯನ್ನು ಮಾಡಬಾರದು ಎಂದು ಶಾಸಕರು ತಿಳಿಸಿದರು.
ಹಾನಿಯಾದಲ್ಲಿ ತಕ್ಷಣ ತೆರಳಬೇಕು
ಗ್ರಾಮೀಣ ಭಾಗದಲ್ಲಿ ಮಳೆಗೆ ಮನೆಗೆ ಅಥವಾ ಇನ್ಯಾವುದೇ ರೀತಿಯ ಹಾನಿಯಾದಲ್ಲಿ ಗ್ರಾಮಕರಣಿಕರು ತಕ್ಷಣ ಅಲ್ಲಿಗೆ ಭೇಟಿ ನೀಡಬೇಕು. ರಾತ್ರಿ ಘಟನೆ ನಡೆದರೂ ರಾತ್ರಿಯೇ ಭೇಟಿ ನೀಡಬೇಕು. ನೊಂದವರಿಗೆ ಏನೆಲ್ಲಾ ಸಹಾಯ ಬೇಕೋ ಅದೆಲ್ಲವನ್ನೂ ಇಲಾಖೆಯಿಂದ ಮಾಡಬೇಕು. ಪರಿಹಾರ ಕೊಡುವ ವಿಚಾರದಲ್ಲಿಯೂ ಕಂದಾಯ ಅಧಿಕಾರಿಗಳು ತಕ್ಷಣ ಜಾಗೃತರಾಗಿರಬೇಕು ಎಂದು ಸೂಚನೆಯನ್ನು ನೀಡಿದರು. ಅಪಾಯಕಾರಿ ಮನೆಗಳಿದ್ದಲ್ಲಿ ಅಲ್ಲಿಂದ ಆ ಕುಟುಂಬವನ್ನು ಸ್ಥಳಾಂತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಒಟ್ಟಿನಲ್ಲಿ ಜನರಿಗೆ ತೊಂದರೆಯಾಗದಂತೆ ಇಲಾಖಾ ಅಧಿಕಾರಿಗಳು ಸ್ಪಂದನೆಯನ್ನು ನೀಡಬೇಕು ಎಂದು ಶಾಸಕರು ತಿಳಿಸಿದರು.