ಪುತ್ತೂರು: ಆಪರೇಷನ್ ಸಿಂಧೂರ್ ಯಶಸ್ವಿಯ ಬಳಿಕ ರಜೆಯಲ್ಲಿ ಊರಿಗೆ ಮರಳಿದ ಬೆಳ್ಳಿಪ್ಪಾಡಿ ಮಲುವೇಲು ಕುಟುಂಬದ ಯೋಧರೊಬ್ಬರಿಗೆ ಕುಟುಂಬದವರೇ ಸೇರಿ ಗೌರವ ಸನ್ಮಾನ ಮಾಡಿದ್ದಾರೆ.
ಕಾಕತಾಳಿಯವೆಂದರೆ ತುಳುನಾಡಿನ ಅನೇಕ ವಿಶಿಷ್ಠ ಆಚರಣೆಗಳಲ್ಲಿ ಒಂದಾದ ದೈವಗಳಿಗೆ ವಾರ್ಷಿಕ ಅಗೇಲು ಸೇವೆಯ ಸಂದರ್ಬದಲ್ಲಿ ಕುಟುಂಬ ಸದಸ್ಯರೆಲ್ಲರೂ ಸೇರುವ ದಿನವೇ ಈ ಕಾರ್ಯಕ್ರಮ ನಡೆದಿದೆ.
ಕೆಮ್ಮಾಯಿ ನಿವಾಸಿಯಾಗಿದ್ದು, ಬೆಳ್ಳಿಪ್ಪಾಡಿ ಮಲುವೇಲು ತರವಾಡು ಮನೆಯ ಹಿರಿಯ ಸದಸ್ಯ ಪದ್ಮನಾಭ ಗೌಡ ಅವರು ಬಿ.ಎಸ್.ಎಫ್ ಟೀಮ್ ಕಮಾಡೆಂಡ್ ಆಗಿ ಪಂಜಾಬ್ನಲ್ಲಿ ಆಪರೇಷನ್ ಸಿಂಧೂರ್ನಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದರು. ಪಂಜಾಬ್, ಅಮೃತಸರದಲ್ಲಿ ಪಾಕಿಸ್ತಾನ ದಾಳಿಗೆ ಯತ್ನಿಸಿತ್ತಾದರೂ ಎದುರಾಳಿಗಳಿಗೆ ಸರಿಯಾದ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದ ತಂಡದಲ್ಲಿಯೂ ಇದ್ದರು . ಆಪರೇಷನ್ ಸಿಂಧೂರ್ ಯಶಸ್ವಿಯಾದ ಬಳಿಕ ಇದೀಗ ರಜೆಯಲ್ಲಿ ಊರಿಗೆ ಮರಳಿದ್ದಾರೆ.
ಮೇ.25ರಂದು ಅವರು ಊರಿಗೆ ಬಂದ ದಿನವೇ ಮಲುವೇಲು ಮನೆಯಲ್ಲಿ ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಅಗೇಲು ಕಾರ್ಯಕ್ರಮ ನಡೆದಿದೆ. ಈ ಸಂದರ್ಭ ತರವಾಡಿನ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಯೋಧ ಪದ್ಮನಾಭ ಗೌಡ ಅವರನ್ನು ಸನ್ಮಾನಿಸಲಾಯಿತು.

ಕುಟುಂಬದ ಹಿರಿಯ ಸದಸ್ಯ ಜಿನ್ನಪ್ಪ ಗೌಡ ಮಲುವೇಲು ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಳ್ಯ ಶಾರದಾ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಅವರು ಅಭಿನಂದನಾ ಭಾಷಣ ಮಾಡಿದರು. ಎವಿಜಿ ಇಂಗ್ಲೀಷ್ ಮಿಡಿಯಂ ಸ್ಕೂಲ್ನ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಗೌಡ ಮಲುವೇಲು ಸ್ವಾಗತಿಸಿ, ನಿವೃತ್ತ ಶಿಕ್ಷಕಿ ಯಶೋಧ ವಂದಿಸಿದರು.