ಉಪ್ಪಿನಂಗಡಿ: ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್ ಉದ್ಘಾಟನೆ

0

ತಳಮಟ್ಟದ ಶಿಕ್ಷಣ ಉತ್ತಮವಾಗಿದ್ದರೆ ಉತ್ತಮ ಭವಿಷ್ಯ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಒಂದು ಕಟ್ಟಡಕ್ಕೆ ಫೌಂಡೇಶನ್ ಎಷ್ಟು ಮುಖ್ಯವೋ? ಮಕ್ಕಳ ಭವಿಷ್ಯ ರೂಪಿಸಲು ಅವರಿಗೆ ತಳಮಟ್ಟದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಕೂಡಾ ಅಷ್ಟೇ ಮುಖ್ಯ. ಆದ್ದರಿಂದ ಉಪ್ಪಿನಂಗಡಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಿಬಿಎಸ್‌ಇ ಶಾಲೆಯೊಂದರ ಅವಶ್ಯಕತೆಯಿತ್ತು. ಆ ಸ್ಥಾನವನ್ನು ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನಿಂದ ತುಂಬುವ ಕೆಲಸವಾಗಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಈ ಬಾರಿಯ ಶೈಕ್ಷಣಿಕ ವರ್ಷದಿಂದ ಉಪ್ಪಿನಂಗಡಿಯಲ್ಲಿ ಆರಂಭಗೊಳ್ಳಲಿರುವ ಸಿಬಿಎಸ್‌ಇ ನವದೆಹಲಿಗೆ ಸಂಯೋಜಿತಗೊಂಡ ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್ ಅನ್ನು ಇಲ್ಲಿನ ಎಚ್.ಎಂ. ಅಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಶಾಲೆಯೆಂದು ಕೇವಲ ಹೆಸರಿಗೆ ಮಾತ್ರ ಹೇಳಲು ಆಗುವುದಿಲ್ಲ. ಬೇರೆ ದೇಶಗಳಲ್ಲಿಯೂ ಶಾಲೆಗಳು ಇರಬೇಕು. ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜು ದುಬೈ ಮತ್ತು ಆಫ್ರಿಕಾದಲ್ಲಿಯೂ ಇರುವುದು ಹೆಮ್ಮೆಯ ವಿಷಯವಾಗಿದೆ. ಇದರ ಸಂಸ್ಥಾಪಕರಾಗಿರುವ ಮೊಹಮ್ಮದ್ ಅಶ್ರಫ್‌ರವರು ನನ್ನದು ೨೫ ವರ್ಷಗಳ ಗೆಳೆತನ. ಅವರು ಕೇವಲ ಉದ್ಯಮ ಮಾತ್ರ ಮಾಡಿದವರಲ್ಲ. ಬಡ ಜನರ ಬಗ್ಗೆ ಅಪಾರ ಕಾಳಜಿ ಇರುವ ಅವರು ಉದ್ಯಮದೊಂದಿಗೆ ಸಮಾಜ ಸೇವಾ ಚಟುವಟಿಕೆಗಳಲ್ಲೂ ಗುರುತಿಸಿಕೊಂಡವರು ಎಂದರಲ್ಲದೆ, ನಾವು ಮಕ್ಕಳನ್ನು ಬೆಳೆಸುವ ವ್ಯವಸ್ಥೆ ಮಕ್ಕಳ ಬದುಕನ್ನು ರೂಪಿಸುತ್ತದೆ. ಆದ್ದರಿಂದ ಶಾಲೆಯಲ್ಲಿ ಅಲ್ಲದೇ ಶೇ.60 ಶಿಕ್ಷಣವನ್ನು ಮನೆಯಲ್ಲಿ ಕಲಿಸಬೇಕು. ಶಾಲೆಗಳಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡುವುದಲ್ಲದೆ, ಕ್ರೀಡೆಯೊಂದಿಗೆ ಮಕ್ಕಳ ಆರೋಗ್ಯ ಬೆಳೆಸುವ ಕೆಲಸವಾಗಬೇಕು ಎಂದರು.


ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ನಂದೀಶ್ ವೈ.ಡಿ. ಮಾತನಾಡಿ, ಮನಸ್ಸುಗಳನ್ನು ಶುದ್ಧಗೊಳಿಸುವ, ವ್ಯಕ್ತಿತ್ವಗಳನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳು ನಮ್ಮ ಸಮಾಜಕ್ಕೆ ಅಗತ್ಯವಿದೆ. ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನಿಂದ ಈ ಕೆಲಸ ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ. ಶಾಲೆಗಳು ಎಲ್ಲವನ್ನೂ ಹೇಳಿಕೊಡುತ್ತವೆ ಎಂಬ ಭ್ರಮೆಯಿಂದ ಮೊದಲು ಪೋಷಕರು ಹೊರಬರಬೇಕು. ಶಾಲೆಗಳು ಕೂಡಾ ಕೇವಲ ಗ್ರೇಡ್‌ಗಳಿಗೆ ಜೋತು ಬೀಳದೆ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣದ ಕೆಲಸವನ್ನೂ ಮಾಡಬೇಕು ಎಂದರು.


ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ನಿರ್ದೇಶಕರಾದ ಮೊಹಮ್ಮದ್ ಅಶ್ರಫ್ ಮಾತನಾಡಿ, ಸುಮಾರು 16 ವರ್ಷದ ಹಿಂದೆ ಬಡ ಮಹಿಳೆಯೋರ್ವರಿಗೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕಾಗಿ ನಾನು ಉಪ್ಪಿನಂಗಡಿಗೆ ಆಗಮಿಸಿದ್ದೆ. ಆಗ ಗ್ರಾ.ಪಂ. ಅಧ್ಯಕ್ಷರಾಗಿದ್ದ ಅಬ್ದುರ್ರಹ್ಮಾನ್ ಕೆ. ಅವರನ್ನು ಭೇಟಿಯಾಗಿದ್ದೆ. ಅವರ ಪರಿಚಯ ಸ್ನೇಹಕ್ಕೆ ತಿರುಗಿ ಒಂದು ಮನೆ ನಿರ್ಮಿಸಿಕೊಡಲು ಬಂದ ನಾನು ೨೩ ಮನೆಗಳನ್ನು ಇಲ್ಲಿ ನಿರ್ಮಿಸಿದ್ದೇನೆ. ಸೌದಿ ಅರೇಬಿಯಾದ ಜುಬೈಲ್, ಆಫ್ರಿಕಾದ ಚೀಬೂತಿ, ಮಂಗಳೂರಿನ ಅಡ್ಯಾರ್ ನಮ್ಮ ಶಿಕ್ಷಣ ಸಂಸ್ಥೆಗಳಿದ್ದು, ಈಗ ಉಪ್ಪಿನಂಗಡಿಯಲ್ಲಿಯೂ ನಮ್ಮ ಶಿಕ್ಷಣ ಸಂಸ್ಥೆ ಆರಂಭವಾಗಲಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯೆಯೊಂದಿಗೆ ಮಾನವೀಯ ಗುಣಗಳನ್ನು ಮಕ್ಕಳಿಗೆ ಕಲಿಸಿಕೊಡುವ ಕಾರ್ಯ ನಡೆಯುತ್ತಿದೆ. ಒಂದು ಶಿಕ್ಷಣ ಸಂಸ್ಥೆ ಮಾಡಿ ಕೆಲವೊಂದು ವಿಷಯಗಳನ್ನು ಮಕ್ಕಳಿಗೆ ಕಲಿಸಿಕೊಡಬಹುದು. ಆದರೆ ಪರಿಪೂರ್ಣ ಶಿಕ್ಷಣ ನೀಡಬೇಕಾದರೆ ಅದರಲ್ಲಿ ಶಿಕ್ಷಣ ಸಂಸ್ಥೆ, ಮಕ್ಕಳು ಹಾಗೂ ಪೋಷಕರು ಸಹಭಾಗಿತ್ವ, ಸಹಕಾರವೂ ಅಗತ್ಯ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಒಳ್ಳೆಯ ವಾತಾವರಣ ಕಲ್ಪಿಸಿಕೊಡುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಮಕ್ಕಳಲ್ಲಿ ಶಿಕ್ಷಣದೊಂದಿಗೆ ಬದುಕಿನಲ್ಲಿ ಪ್ರಾಮಾಣಿಕತೆ, ದಾನ, ಧರ್ಮ, ನೀತಿ, ನಿಯಮಗಳನ್ನು ಕಲಿಸಿಕೊಟ್ಟು ಅವರನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವ ಕಾರ್ಯ ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು.


ಉಪ್ಪಿನಂಗಡಿಯ ಗೈಡೆನ್ಸ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ, ಮಕ್ಕಳ ಬದುಕನ್ನು ರೂಪಿಸುವ ಶಿಕ್ಷಣ ಸಂಸ್ಥೆಯೊಂದು ಉಪ್ಪಿನಂಗಡಿಯಲ್ಲಿ ಇರಬೇಕು ಎಂಬುದು ನಮ್ಮ ಕನಸಾಗಿತ್ತು. ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರು ತನ್ನ ಉದ್ಯಮದೊಂದಿಗೆ ಸಮಾಜಸೇವೆಯನ್ನೂ ಮಾಡಿಕೊಂಡು ಬಂದವರು. ಅವರ ಬೆಳೆದು ಬಂದ ರೀತಿ, ಅವರ ದಾನ- ಧರ್ಮಾದಿ ಕಾರ್ಯಗಳು ನಮಗೆಲ್ಲಾ ಸ್ಫೂರ್ತಿಯಾಗಿವೆ. ಆದ್ದರಿಂದಲೇ ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್ ಅನ್ನು ಉಪ್ಪಿನಂಗಡಿಯಲ್ಲಿ ಆರಂಭಿಸಲು ಕಾರಣವಾಯಿತು. ಇದರ ಹಿಂದೆ ಕೆಲವು ಸಮಾನ ಮನಸ್ಕರ ಶ್ರಮ ಇದೆ. ಮಂಗಳೂರಿನ ಅಡ್ಯಾರ್‌ನಲ್ಲಿರುವ ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸುಮಾರು 1500 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಉಪ್ಪಿನಂಗಡಿಯಲ್ಲೂ ಕೂಡಾ ಈ ಶಾಲೆಗೆ ಎರಡು ಎಕರೆ ಜಾಗ ಖರೀದಿ ಮಾಡಲಾಗಿದ್ದು, ಅಲ್ಲಿ ಕಟ್ಟಡದ ಕೆಲಸ ನಿರ್ಮಾಣವಾಗಲಿದೆ. ಈಗ ಇಲ್ಲಿನ ಮದರಸ ಕಟ್ಟಡವೊಂದರಲ್ಲಿ ಬಾಡಿಗೆ ನೆಲೆಯಲ್ಲಿ ಶಾಲೆ ಕಾರ್ಯಾರಂಭ ಮಾಡಲಿದೆ. ಶಾಲೆಯ ಕುರಿತು ಕೆಲವರು ಸಮಾಜದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಆದರೆ ಎಲ್ಲಾ ಅನುಮತಿ ಪಡೆದುಕೊಂಡು, ಕಾನೂನು, ನಿಯಮಾನುಸಾರವಾಗಿಯೇ ಈ ಶಾಲೆ ಆರಂಭವಾಗಲಿದೆ. ಇದರ ಹಿಂದೆ ಲಾಭದ ಉದ್ದೇಶವಿಲ್ಲ. ಇದೊಂದು ಸಾರ್ವಜನಿಕ ಸೇವೆ ಎಂದರು.


ವೇದಿಕೆಯಲ್ಲಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಅಲಿ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಝೀಝ್ ಬಸ್ತಿಕ್ಕಾರ್, ನೆಕ್ಕಿಲಾಡಿಯ ಉಮರುಲ್ ಫಾರೂಕ್ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ನೆಕ್ಕಿಲಾಡಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷರಾದ ಯು.ಟಿ. ತೌಸೀಫ್, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶಬ್ಬೀರ್ ಕೆಂಪಿ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ನಝೀರ್ ಎಂ.ಬಿ., ಮಂಗಳೂರು ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಅರೇಬಿಕ್ ಪ್ರಾಂಶುಪಾಲರಾದ ಹನೀಫ್ ಬೋಳಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ಗೈಡೆನ್ಸ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಅಬ್ದುಲ್ ರಝಾಕ್ ಆರ್.ಪಿ., ದಾವೂದ್ ಬೆಂಗಳೂರು, ಅಬ್ದುಲ್ ಗಫೂರ್ ಬೆಂಗಳೂರು, ಅಬ್ದುಲ್ ರಹೀಂ ಎಂ.ಜಿ., ಶರೀಫ್ ಕ್ಲಾಸಿಕ್ ಬೆಳ್ತಂಗಡಿ, ಅಬ್ದುಲ್ ಲತೀಫ್, ಮುನ್ನ ಎಂಎಂಎಸ್., ಸಲೀಂ ಬೆಂಗಳೂರು, ಮುಹಮ್ಮದ್ ಜಾಬೀರ್ ಬೆಂಗಳೂರು ಹಾಗೂ ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.


ಉಪ್ಪಿನಂಗಡಿಯ ಗೈಡೆನ್ಸ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ನೌಫಲ್ ಕೊಕ್ಕಡ ಸ್ವಾಗತಿಸಿದರು. ನಜ್‌ಮುನ್ನೀರ ಕಿರಾಅತ್ ಪಠಿಸಿದರು. ಮುಹಮ್ಮದ್ ರಝೀನ್ ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನಂಗಡಿ ಬರಕಹ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲೆ ನೈನಾ ಫಾತಿಮಾ ಸಹಕರಿಸಿದರು.

LEAVE A REPLY

Please enter your comment!
Please enter your name here