ಕುಣಿತ ಭಜನೆ, ಸಿಂಗಾರಿ ಮೇಳದೊಂದಿಗೆ ಮೆರವಣಿಗೆ
ಮೆರವಣಿಗೆಯು ಕುಣಿತ ಭಜನಾ ತಂಡ ಮತ್ತು ಮಣಿಕಂಠ ಚೆಂಡೆ ಮೇಳದದೊಂದಿಗೆ ಆಕರ್ಷಕವಾಗಿ ನಡೆಯಿತು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ದೇವರ ಛಾಯಾಬಿಂಬವಿದ್ದ ವಾಹನವನ್ನೂ ಮೆರವಣಿಗೆ ಮೂಲಕ ಸಾಗಿಸಲಾಯಿತು.
ನಾಳೆ ಛಾಯಾಬಿಂಬ ಪ್ರತಿಷ್ಟೆ
ಮೇ.30ರಂದು ಬೆಳಿಗ್ಗೆ 9.0ರ ವೃಷಭ ಲಗ್ನದಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ಛಾಯಾಬಿಂಬ ಪ್ರತಿಷ್ಟೆ ನಡೆಯಲಿದೆ. ಸಂಜೆ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ಕಲ್ಪೋಕ್ತ ಪೂಜೆ, ರಂಗಪೂಜೆ ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಧ್ಯಾಹ್ನ ‘ಶ್ರೀ ದೇವಿ ಶಾಂಭವಿ’ ಯಕ್ಷಗಾನ ತಾಳಮದ್ದಳೆ ನಡೆದು ರಾತ್ರಿ ವಿಜಯಕುಮಾರ್ ಕೊಡಿಯಾಲ್ ಬೈಲು ತಂಡದ ಚಾರಿತ್ರಿಕ ನಾಟಕ ‘ಛತ್ರಪತಿ ಶಿವಾಜಿ’ ನಡೆಯಲಿದೆ.
ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಲೋಕಾರ್ಪಣೆ, ದೇವರ ಛಾಯಾಬಿಂಬ ಪ್ರತಿಷ್ಟಾ ಮಹೋತ್ಸವದ ಅಂಗವಾಗಿ ಹಸಿರುವಾಣಿ ಮೆರವಣಿಗೆ ಹಾಗೂ ಛಾಯಾಬಿಂಬ ಮೆರವಣಿಗೆ ಮೇ.29ರಂದು ಬೆಳಿಗ್ಗೆ ಜರಗಿತು.

ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಹಸಿರುವಾಣಿ ಮೆರವಣಿಗೆಗೆ ಅಯ್ಯಪ್ಪ ಭಜನಾ ಮಂದಿರದ ಸಂಚಾಲಕ ಕೃಷ್ಣಪ್ಪ ಗುರುಸ್ವಾಮಿ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಈ ವೇಳೆ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ ಶುಭ ಹಾರೈಸಿದರು.
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಪ್ರಗತಿಪರ ಕೃಷಿಕ ಅನಿತಾ ಕೂವೆಂಜ, ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಜಯ ಕುಮಾರ್ ಎಂ., ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ರವಿನಾಥ ಕೋನಡ್ಕ ಗೌರವ ಉಪಸ್ಥಿತರಿದ್ದರು.

ಮಂದಿರಕ್ಕೆ ಹಸಿರುವಾಣಿ ಆಗಮಿಸಿದ ಬಳಿಕ ಉಗ್ರಾಣ ಮುಹೂರ್ ವನ್ನು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ, ಕರ್ನಪ್ಪಾಡಿ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ನೆರವೇರಿಸಿದರು. ಈ ವೇಳೆ ಪ್ರಗತಿಪರ ಕೃಷಿಕರಾದ ಗಣೇಶ್ ರೈ ಆನಡ್ಕ, ಶೇಷಪ್ಪ ರೈ ಚೆಲ್ಯಡ್ಕ, ರಘುನಾಥ ರೈ ಸೂರಂಬೈಲು, ಮಹಾಲಿಂಗೇಶ್ವರ ಭಜನಾ ಸಂಘದ ಮಾಜಿ ಅಧ್ಯಕ್ಷ ರಮೇಶ್ ಗೌಡ ಬಳ್ಳಿತ್ತಡ್ಡ, ಒಡಿಯೂರು ಗ್ರಾಮ ವಿಕಾಸ ಯೋಜನೆ ಕುಂಬ್ರ ವಲಯಾಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ನಾಗರಾಜನ್ ತಲೆಪ್ಪಾಡಿ, ರಾಜರಾಮ ಭಟ್ ನಾಕುಡೇಲು ಮತ್ತಿತರರು ಉಪಸ್ಥಿತರಿದ್ದರು.
ಗಣ್ಯರ ಭೇಟಿ
ಕಾರ್ಯಕ್ರಮಕ್ಕೆ ಪಳ್ಳತ್ತಡ್ಕ ಹೊಸಮ್ಮ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್. ಬಿ. ಜಯರಾಮ ರೈ ಬಳಜ್ಜ ಭೇಟಿ ನೀಡಿ ಶುಭಹಾರೈಸಿದರು. ಶ್ರೀ ಸಿದ್ದಿವಿನಾಯಕ ಸೇವಾ ಸಂಘ ಹಾಗೂ ಪುನರ್ ನಿರ್ಮಾಣ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಊರಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡರು. ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.

ಧ್ವಜಸ್ತಂಭ ಉದ್ಘಾಟನೆ
ಕೇಸರಿ ಮಿತ್ರವೃಂದ ಕೇಸರಿನಗರ ಮಿತ್ತಡ್ಕ ಇವರು ಮಂದಿರಕ್ಕೆ ಕೊಡುಗೆಯಾಗಿ ಸಮರ್ಪಿಸಿದ ಭಗವಧ್ವಜಸ್ತಂಭವನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಕೇಸರಿ ಮಿತ್ರವೃಂದದ ಅಧ್ಯಕ್ಷ ರಾಧಾಕೃಷ್ಣ ಗೌಡ ಮಿತ್ತಡ್ಕ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.