ಬಡಗನ್ನೂರು: ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು, ಪಟ್ಟೆ ಮಾತೃ ಸಂಸ್ಥೆ: ದ್ವಾರಕಾ ಪ್ರತಿಷ್ಠಾನ ಪುತ್ತೂರು ಶ್ರೀಕೃಷ್ಣ ಆಂಗ್ಲ ಮಾಧ್ಯಮ ಶಾಲೆ ಲೋಕಾರ್ಪಣೆ ಮತ್ತು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಮೇ. 29 ರಂದು ಪಟ್ಟೆ ಶ್ರೀ ಕೖಷ್ಣ ವಿದ್ಯಾ ಸಂಸ್ಥೆಗಳ ವಠಾರದಲ್ಲಿ ನಡೆಯಿತು.

ಗ್ರಾಮಾಂತರ ಪ್ರದೇಶದಲ್ಲಿಯೂ ಗುಣಮಟ್ಟದ ಶಿಕ್ಷಣ ಗುರಿ -ಗೋಪಾಲಕೃಷ್ಣ ಭಟ್
ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ದ್ವಾರಕ ಪ್ರತಿಷ್ಠಾನ ಪುತ್ತೂರು ಇದರ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು ಇಟ್ಟುಕೊಂಡು ಶ್ರಮಿಸುತ್ತಿರುವ ಪಟ್ಟೆ ವಿದ್ಯಾಸಂಸ್ಥೆಗಳಲ್ಲಿ ಈ ವರ್ಷದಿಂದ ನೂತನವಾಗಿ ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯು ಪ್ರಾರಂಭ ಮಾಡಲಾಗಿದೆ ಷೋಷಕರು ತಮ್ಮ ಮಕ್ಕಳನ್ನು ವಿದ್ಯಾಸಂಸ್ಥೆಗೆ ಸೇರಿಸುವ ಮೂಲಕ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವಂತೆ ಹೇಳಿ ಶುಭ ಹಾರೖೆಸಿದರು.
ಭಾಷೆ ಮತ್ತು ಶಿಕ್ಷಣಕ್ಕೆ ಸಂಬಂಧ ಇಲ್ಲ- ವಿಘ್ನೇಶ್ ಹಿರಣ್ಯ
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕ ವಿಘ್ನೇಶ್ ಹಿರಣ್ಯ ಮಾತನಾಡಿ, ಶಿಕ್ಷಣ ಮಕ್ಕಳಿಗೆ ಬದುಕು ಕಟ್ಟಿಕೊಡುತ್ತದೆ ಈ ನಿಟ್ಟಿನಲ್ಲಿ ಶಿಕ್ಷಕರಾದ ನಮ್ಮ ಜವಾಬ್ದಾರಿ ಹೆಚ್ಚಿದೆ.ಶ್ರೀ ಕೖಷ್ಣ ಆಂಗ್ಲಮಾಧ್ಯಮ ಶಾಲೆ ಉದ್ಘಾಟನೆಗೊಂಡು ಲೋಕಾರ್ಪಣೆಗೊಂಡಿದೆ. ಭಾಷೆ ಮತ್ತು ಶಿಕ್ಷಣಕ್ಕೆ ಸಂಬಂಧ ಇಲ್ಲ, ಜಾಗತಿಕರಣದ ನಂತರ ಏಕ ಭಾಷೆಗೆ ಹೆಚ್ಚು ಒತ್ತು ನೀಡಿದೆ.ಇಂಗ್ಲಿಷ್ ಭಾಷೆ ಬದುಕಿಗೆ ಅನಿವಾರ್ಯವಾಗಿದೆ. ಪ್ರಾಂತ್ಯ, ಭಾಷೆ ಸಾಂಸ್ಕೃತಿಕದ ಪ್ರತಿಕಾ. ಅದನ್ನು ಗೌರವಿಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಗೊತ್ತಿಲ್ಲ ಅನ್ನುವ ದೖಷ್ಟಿಯಿಂದ ಉದ್ಯೋಗಕ್ಕಾಗಿ ಹೊರ ರಾಜ್ಯಕ್ಕೆ ಹೋಗದೇ ಇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಂಗ್ಲ ಭಾಷಾ ಶಿಕ್ಷಣ ಆರಂಭಿಸಲಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ಸಲಕರಣೆಗಳು ಮತ್ತು ಆಟಿಕೆ ಸಾಮಾಗ್ರಿಗಳ ವ್ಯವಸ್ಥೆ ಮಾಡಲಾಗಿದೆ. ಪೋಷಕರು ಆಡಳಿತ ಮಂಡಳಿಯ ಸೂಚನೆಗಳನ್ನು ಪಾಲಿಸುವ ಮೂಲಕ ಶಿಕ್ಷಕರ ಜತೆ ಪೋಷಕರ ಸಹಕಾರ ನೀಡಿದಾಗ ಮಕ್ಕಳ ಬೆಳವಣಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲು ಸಹಕಾರಿ ಆಗುತ್ತದೆ. ಎಂದ ಅವರು ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಎರಡು ಬಸ್ಸು ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಸ್ಥೆಯ ಮುಖ್ಯ ಧ್ಯೇಯ ಶಿಸ್ತು :
ಸಂಸ್ಥೆಯ ಮುಖ್ಯ ಧ್ಯೇಯವೇ ಶಿಸ್ತು ಆಮೇಲೆ ಶಿಕ್ಷಣ, ಶಿಸ್ತು ಇದ್ದರೆ ಅಲ್ಲಿ ಶಿಕ್ಷಣ ತನ್ನಿಂದ ತಾನಾಗಿ ವೃದ್ದಿಗೊಳ್ಳುತ್ತದೆ ಎಂದು ಸಂಚಾಲಕ ವಿಘ್ನೇಶ್ ಹಿರಣ್ಯ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷೆ ಅಮೃತ ಕೃಷ್ಣ, ನಿರ್ದೇಶಕ ಗಣರಾಜ ಕುಂಬ್ಳೆ, ಅಮೃತ ಎ ಶಾನುಭಾಗ್, ವೆಂಕಟ ಕೃಷ್ಣ ಶರ್ಮ,ಪರಮೇಶ್ವರ ಭಟ್, ಪ್ರತಿಭಾ ಪ್ರೌಢಶಾಲೆ ಎಸ್ ಡಿ ಎಂಸಿ ಅಧ್ಯಕ್ಷ ಲಿಂಗಪ್ಪಗೌಡ ಮೋಡಿಕೆ, ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ, ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ,ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜಗೋಪಾಲ ಎನ್ ಉಪಸ್ಥಿತರಿದರು.
ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ:
ವಿದ್ಯಾರ್ಥಿಗಳನ್ನು ಬ್ಯಾಂಡ್ ವಾಧ್ಯಘೋಷದ ಮೂಲಕ ಮೆರವಣಿಗೆಯೊಂದಿಗೆ ಆರತಿ, ತಿಲಕ ಇಟ್ಟು ಸಿಹಿ ತಿಂಡಿಯನ್ನು ನೀಡಿ ಸ್ವಾಗತಿಸಲಾಯಿತು.
ಪುಸ್ತಕ ವಿತರಣೆ
ಸರಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕವನ್ನು ಕನ್ನಡ ಮಾಧ್ಯಮದ ಒಂದನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ರಾಜಗೋಪಾಲ ಪ್ರಾಸ್ತಾವಿಕ ಮಾತುಗಳಿಂದ ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಜ್ಯೋತಿಕುಮಾರಿ ರೈ ವಂದಿಸಿದರು. ಇಂಗ್ಲಿಷ್ ಶಿಕ್ಷಕಿ ಶೈಲಶ್ರೀ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೃಷ್ಣ ಆಂಗ್ಲ ಮಾಧ್ಯಮ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರತಿಭಾ ಪ್ರೌಢಶಾಲೆಯ ಶಿಕ್ಷಕರು ವಿವಿಧ ಕಾರ್ಯಕ್ರಮವನ್ನು ನಿರ್ವಹಿಸಿ ಸಹಕರಿಸಿದರು.