ವಿಟ್ಲ: ರಸ್ತೆಯಲ್ಲಿ ನಿಲ್ಲಿಸಿದ್ದ ಮಣ್ಣು ಸಾಗಾಟದ ಲಾರಿಯೊಂದರ ಹಿಂಬಾಗಕ್ಕೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಸವಾರರಿಬ್ಬರ ಪೈಕಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಮೇ.29ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳಪದವು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಒಕ್ಕೆತ್ತೂರು ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇರ್ಫಾನ್ ( 19ವ.) ಮೃತ ದುರ್ದೈವಿ. ಸಹಸವಾರ ಒಕ್ಕೆತ್ತೂರು ನಿವಾಸಿ ಪುತ್ತು ಎಂಬವರ ಪುತ್ರ ಫಾರೀಸ್ ಗಂಭೀರ ಗಾಯಗೊಂಡವರಾಗಿದ್ದಾರೆ.
ಕನ್ಯಾನ ಕಡೆಯಿಂದ ಬಾಕ್ಸೆಟ್ ಮಣ್ಣು ಸಾಗಾಟದ ಲಾರಿಯನ್ನು ಅದರ ಚಾಲಕ ಮಂಗಳಪದವು ಎಂಬಲ್ಲಿ ರಸ್ತೆಯಲ್ಲಿಯೇ ನಿಲ್ಲಿಸಿದ್ದರು. ಈ ವೇಳೆ ಆ ದಾರಿಯಾಗಿ ಬಂದ ಇರ್ಫಾನ್ ಹಾಗೂ ಫಾರೀಸ್ ರವರು ಸಂಚರಿಸುತ್ತಿದ್ದ ಬೈಕ್ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿದೆ.
ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಅವರಿಬ್ಬರನ್ನು ಕೂಡಲೇ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು. ಆದರೆ ಇರ್ಫಾನ್ ರವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಫಾರಿಸ್ ಚಿಕಿತ್ಸೆ ಪಡೆಸುತ್ತಿದ್ದಾರೆ.
ಲಾರಿ ಚಾಲಕ ಬೇಜಾಬ್ದಾರಿತನದಿಂದ ರಸ್ತೆಯಲ್ಲಿಯೇ ಲಾರಿಯನ್ನು ನಿಲ್ಲಿಸಿ ಚಾ ಕುಡಿಯಲು ಹೋಗಿದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.