ಹಗಲು ರಾತ್ರಿಗಳು ಒಂದನ್ನೊಂದು ಹಿಂಬಾಲಿಸುವ ಆತುರದಲ್ಲಿ ಕಾಲಚಕ್ರ ಬಹಳ ವೇಗವಾಗಿ ಮುಂದೆ ಚಲಿಸುತ್ತಿದೆ. ಪ್ರತಿ ವರ್ಷ ಮಳೆಗಾಲ ಬರುವುದು ನಿಶ್ಚಯವಾದರೂ, ಮೊದಲ ಮಳೆಯ ಆಗಮನಕ್ಕಾಗಿ ಕಾಯುವ ಸಡಗರಕ್ಕೆ ಲೆಕ್ಕವೇ ಇಲ್ಲ. ವಟಗುಟ್ಟುವ ಕಪ್ಪೆಯಿಂದ ಹಿಡಿದು ಗದ್ದೆಯಲ್ಲಿ ಬೀಜ ಬಿತ್ತುವ ರೈತನವರೆಗೂ ಪ್ರತಿ ಜೀವಿಯೂ ಮಳೆಗಾಗಿ ಹಾತೊರೆಯುತ್ತದೆ.
ಝಳ ಝಳಿಸುವ ಬೇಸಿಗೆಯ ಸೂರ್ಯನಿಗೊಂದು ವಿರಾಮ ಕೊಟ್ಟು ಇಡೀ ಆಗಸ ಮಳೆ ಮೋಡಗಳಿಂದ ತುಂಬಿಕೊಂಡಾಗ ಕೆರೆ ಬದಿಯ ಕಪ್ಪೆರಾಯನಿಗೂ, ಗರಿ ಬಿಚ್ಚಿ ಕುಣಿಯುವ ನವಿಲಿಗೂ ಅತೀವ ಸಂತಸ.ತುಂತುರು ಹನಿಗಳ ಸ್ಪರ್ಶದಿಂದ ಒದ್ದೆಯಾದ ಮಣ್ಣು ಹೊರಸೂಸುವ ಕಂಪಿಗೆ ಸರಿಸಾಟಿ ಎಲ್ಲೂ ಇಲ್ಲ. ಮಳೆ ಶುರುವಾಗಿದೆ. ಮೈಗೆ ಮುತ್ತಿಡುವ ಮೋಡಗಳು, ಧೋ…. ಎಂದು ಒಂದೇ ಸಮನೆ ಸುರಿವ ಮಳೆ, ಹೊರಗೆ ಥಂಡಿ, ಚಳಿಗೆ ಬಾಯಿ ಚಪಲ ಕೇಳಬೇಕಲ್ಲ. ಮಳೆಗಾಲದ ಸಂಜೆ, ಮನೆಯ ಅಂಗಳದಲ್ಲಿ ಕೂತು, ಕೈಯಲ್ಲೊಂದು ಕಪ್ ಬಿಸಿ ಬಿಸಿ ಕಾಫೀ, ಬಾಯಾಡಿಸಲು ಗರಿ ಗರಿ ಹಪ್ಪಳ ಅಥವಾ ಕುರುಕಲು ತಿನಸು ತಿನ್ನುತ್ತಾ ಗಾಸಿಫ್ ಮಾತನಾಡುತ್ತಿದ್ದರೆ ಅದಕ್ಕಿಂತಾ ಹೆಚ್ಚಿನ ಖುಷಿ ಬೇರೊಂದಿಲ್ಲ ಅನ್ನೋದು ಜನ ಸಾಮಾನ್ಯರ ಮನೋಭಾವ.
ಮಳೆಗಾಲದಲ್ಲಿ ಕೆಸುವಿನೆಲೆ, ಚಗತೆ ಸೊಪ್ಪು ಒಂದೆಲಗ, ನುಗ್ಗೆಸೊಪ್ಪು, ಅರಸಿನ ಎಲೆ, ಅಲ್ಲದೆ ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆ, ಮಾವಿನಕಾಯಿ ಮೊದಲಾದವನ್ನು ಬಳಸಿ ಮನೆಯಲ್ಲೇ ಸ್ವಾದಿಷ್ಟ ಹಾಗೂ ಆರೋಗ್ಯಯುತ ತಿನಿಸುಗಳನ್ನು ತಯಾರಿಸಬಹುದು. ಅದಲ್ಲದೇ ಈರುಳ್ಳಿ ಬಜೆ, ಪೋಡಿ, ವಡೆ, ಗೋಳಿ ಬಜೆ, ಹಲಸಿನ ಕಾಯಿಯ ತಿನಸುಗಳು ಹೀಗೆ ಇನ್ನೂ ಹಲವಾರು ಕುರುಕಲು ತಿನಿಸು ಇಲ್ಲದೆ ಹೋದರೆ ಮಳೆಗಾಲ ಬೇಸರವೆನಿಸುತ್ತದೆ.

ಹಲಸಿನ ಉಪ್ಪಿನ ಸೊಳೆ ಪಲ್ಯ
ಬೇಕಾಗುವ ಸಾಮಗ್ರಿ: ಉಪ್ಪಿನಲ್ಲಿ ಹಾಕಿದ ಹಲಸಿನ ಸೊಳೆಗಳು- 2 ಕಪ್, ತೆಂಗಿನಕಾಯಿ ತುರಿ-1 ಕಪ್, ಒಣಮೆಣಸು 3-4, ಕೊತ್ತಂಬರಿ- 1/2 ಚಮಚ, ಜೀರಿಗೆ-1/4 ಚಮಚ, ಅರಸಿನ ಪುಡಿ, ಬೆಳ್ಳುಳ್ಳಿ- 2 ಬೀಜ, ನೀರುಳ್ಳಿ- 1, ಒಗ್ಗರಣೆಗೆ: ಸಾಸಿವೆ, ಕರಿಬೇವಿನಸೊಪ್ಪು , ಎಣ್ಣೆ.
ತಯಾರಿಸುವ ವಿಧಾನ: ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೊಳೆಗಳನ್ನು ಐದಾರು ಗಂಟೆ ಮೊದಲೇ ನೀರಿನಲ್ಲಿ ಹಾಕಿಡಿ. ನಂತರ ಚೆನ್ನಾಗಿ ತೊಳೆದು ಹಿಂಡಿ ಸಣ್ಣಗೆ ತುಂಡು ಮಾಡಿ. ಒಣಮೆಣಸು, ಕೊತ್ತಂಬರಿ, ಜೀರಿಗೆಯನ್ನು ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದುಕೊಂಡು ತೆಂಗಿನ ತುರಿ ಮತ್ತು ಬೆಳ್ಳುಳ್ಳಿ ಬೀಜ ಸೇರಿಸಿ ಗರಿಗರಿಯಾಗಿ ರುಬ್ಬಿರಿ. ನಂತರ ಬಾಣಲೆಗೆ ಎಣ್ಣೆಹಾಕಿ ಸಾಸಿವೆ ಕರಿಬೇವು ಸೇರಿಸಿ ಒಗ್ಗರಣೆ ತಯಾರಿಸಿ ಅದಕ್ಕೆ ಹೆಚ್ಚಿಟ್ಟ ಹಲಸಿನ ತೊಳೆ, ನೀರುಳ್ಳಿ ಚೂರುಗಳು, ಅರಸಿನ ಪುಡಿ ಸೇರಿಸಿ ಬೇಯಿಸಿ. ರುಬ್ಬಿಟ್ಟ ಮಸಾಲೆ ಸೇರಿಸಿ ಒಂದು ಕುದಿ ಕುದಿಸಿದರೆ ರುಚಿಕರ ಪಲ್ಯ ತಯಾರು. ಇದು ಕುಚ್ಚಲಕ್ಕಿ ಅನ್ನದೊಂದಿಗೆ ಸವಿಯಲು ರುಚಿಕರ.

ಚಗಟೆ ಸೊಪ್ಪು – ಹಲಸಿನ ಬೀಜದ ಸುಕ್ಕ
ಬೇಕಾಗುವ ಸಾಮಗ್ರಿ: ಚಗಟೆ ಸೊಪ್ಪು ಸಣ್ಣಗೆ ಹೆಚ್ಚಿದ್ದು- 2 ಕಪ್ ಕಪ್, ಹಲಸಿನ ಬೀಜ 10-12, ಒಣಮೆಣಸು 4-5, ಕೊತ್ತಂಬರಿ- 1 ಚಮಚ, ಜೀರಿಗೆ- 1/4 ಚಮಚ, ತೆಂಗಿನ ತುರಿ- 1 ಕಪ್, ಹುಳಿ, ರುಚಿಗೆ ತಕ್ಕಷ್ಟು ಉಪ್ಪು , ಒಗ್ಗರಣೆಗೆ ಸಾಸಿವೆ, ಬೆಳ್ಳುಳ್ಳಿ ಎಸಳು, ಎಣ್ಣೆ .
ತಯಾರಿಸುವ ವಿಧಾನ: ಮೊದಲು ಒಣಮೆಣಸು, ಕೊತ್ತಂಬರಿ, ಜೀರಿಗೆಯನ್ನು ಎಣ್ಣೆಯಲ್ಲಿ ಹುರಿದು ಪುಡಿ ತಯಾರಿಸಿಕೊಳ್ಳಿ. ಚಗತೆ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಡಿ. ಹಲಸಿನ ಬೀಜವನ್ನು ಜಜ್ಜಿ ಸಿಪ್ಪೆ ತೆಗೆದು ತೊಳೆದು ನೀರು ಸೇರಿಸಿ ಬೇಯಿಸಿರಿ. ಬೇಯುವಾಗ ಉಪ್ಪು ಹಾಕಿ. ಬೀಜ ಬೆಂದ ನಂತರ ಹೆಚ್ಚಿಟ್ಟ ಸೊಪ್ಪು ಮತ್ತು ಹುಳಿನೀರು ಸೇರಿಸಿ ಬೇಯಿಸಿ. ನೀರು ಆರುತ್ತಾ ಬರುವಾಗ ಮಾಡಿಟ್ಟ ಮಸಾಲೆಯ ಪುಡಿ ಹಾಗೂ ತೆಂಗಿನ ತುರಿಯನ್ನು ಸೇರಿಸಿ ಕೊನೆಗೆ ಸಾಸಿವೆ-ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಇದೇ ರೀತಿ ನುಗ್ಗೆಸೊಪ್ಪಿನ ಪಲ್ಯವನ್ನೂ ತಯಾರಿಸಬಹುದು.

ಉಪ್ಪಿನ ಮಾವಿನಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿ: ಉಪ್ಪಿನಲ್ಲಿ ಹಾಕಿದ ಮಾವಿನಕಾಯಿ- 1, ತೆಂಗಿನತುರಿ- 1 ಕಪ್, ಹಸಿಮೆಣಸು – 2, ಸಾಸಿವೆ- 1/2 ಚಮಚ, ಸಿಹಿ ಮಜ್ಜಿ ಗೆ- 1/2 ಕಪ್, ಒಗ್ಗರಣೆಗೆ ಇಂಗು, ಸಾಸಿವೆ, ಕರಿಬೇವು, ಎಣ್ಣೆ .
ತಯಾರಿಸುವ ವಿಧಾನ: ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ತುಂಡುಮಾಡಿ ತೆಂಗಿನತುರಿ, ಹಸಿಮೆಣಸು, ಸಾಸಿವೆ ಸೇರಿಸಿ ರುಬ್ಬಿರಿ. ನಂತರ ಇದಕ್ಕೆ ಮಜ್ಜಿ ಗೆ ಸೇರಿಸಿ. ಕೊನೆಗೆ ಬೇಕಿದ್ದರೆ ಉಪ್ಪು ಹಾಕಿ ಸಾಸಿವೆ-ಕರಿಬೇವು-ಇಂಗು ಸೇರಿಸಿ ಒಗ್ಗರಣೆ ಕೊಡಿ. ಮಳೆಬರುವಾಗ ಬಿಸಿಬಿಸಿ ಅನ್ನದೊಂದಿಗೆ ಊಟಕ್ಕೆ ರುಚಿಕರವಾಗಿರುತ್ತದೆ.

ಅರಸಿನ ಎಲೆಯ ಕಡುಬು
ಬೇಕಾಗುವ ಸಾಮಗ್ರಿ: ಅರಸಿನ ಎಲೆಗಳು- 10-12, ಬೆಳ್ತಿಗೆ ಅಕ್ಕಿ- 2 ಕಪ್, ತೆಂಗಿನಕಾಯಿ ತುರಿ- 2 ಕಪ್, ಬೆಲ್ಲ – 1 ಕಪ್, ಪರಿಮಳಕ್ಕೆ ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಒಂದೆರಡು ಗಂಟೆ ನೆನೆಸಿ ತೊಳೆದು ನೀರು ಬಸಿದು ತೆಂಗಿನಕಾಯಿ, ಉಪ್ಪು ಹಾಕಿ ನಯವಾಗಿ ರುಬ್ಬಿ ಗಟ್ಟಿಯಾಗಿ ಹಿಟ್ಟು ತಯಾರಿಸಿ. ನಂತರ ಒಂದು ಬಾಣಲೆಗೆ ಬೆಲ್ಲವನ್ನು ಸ್ವಲ್ಪ ನೀರು ಹಾಕಿ ಕುದಿಸಿ. ಪಾಕವಾದಾಗ ತೆಂಗಿನ ತುರಿ, ಏಲಕ್ಕಿಯ ಪುಡಿಯನ್ನು ಹಾಕಿ ಮಿಶ್ರಣ ತಯಾರಿಸಿ. ಅರಸಿನ ಎಲೆಯನ್ನು ಶುಚಿಗೊಳಿಸಿ ಅದರ ಮೇಲೆ ಹಿಟ್ಟನ್ನು ತೆಳುವಾಗಿ ಹಚ್ಚಿ ಮಧ್ಯದಲ್ಲಿ ಬೆಲ್ಲ-ಕಾಯಿತುರಿಯ ಮಿಶ್ರಣ ಹರಡಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಬೇಯಿಸಿದರೆ ಅರಸಿನೆಲೆಯ ಸುವಾಸನಭರಿತ ಕಡುಬು ತಯಾರು.
ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
5 – 6 ದೊಡ್ಡ ಈರುಳ್ಳಿ
3 ಕಪ್ ಕಡ್ಲೆ ಹಿಟ್ಟು
1/2 ಕಪ್ ಅಕ್ಕಿ ಹಿಟ್ಟು
1 ಟೀಸ್ಪೂನ್ ಅಚ್ಚ ಖಾರದ ಪುಡಿ
1 – 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ (ಬೇಕಾದಲ್ಲಿ)
2 ಟೇಬಲ್ ಚಮಚ ಹೆಚ್ಚಿದ ಕರಿಬೇವು
1/4 ಟೀಸ್ಪೂನ್ ಇಂಗು
1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಖಾಯಿಸಲು ಅಥವಾ ಕರಿಯಲು
ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಮಾಡುವ ವಿಧಾನ:
ಈರುಳ್ಳಿ ಉದ್ದನಾಗಿ ತೆಳುವಾಗಿ ಕತ್ತರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಈರುಳ್ಳಿ ನೀರು ಬಿಡುತ್ತದೆ.
ಈಗ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ , ಕತ್ತರಿಸಿದ ಕರಿಬೇವಿನ ಸೊಪ್ಪು, ಓಮ ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ. 2 ಚಮಚ ಬಿಸಿ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಈಗ ಸಹ ನೀರು ಸೇರಿಸಬೇಡಿ.
ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಒಂದು ಕೈ ಹಿಡಿಯಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ಸ್ವಲ್ಪವಾಗಿ ಎಣ್ಣೆಗೆ ಹಾಕಿ. ಹಿಟ್ಟು ತುಂಬ ಉದುರಾಗಿದೆ (ಒಣಕಲಾಗಿದೆ) ಎನಿಸಿದರೆ ಸ್ವಲ್ಪವೇ ಸ್ವಲ್ಪ ನೀರು ಸಿಂಪಡಿಸಿ ಚೆನ್ನಾಗಿ ಕಲಸಿ ಆನಂತರ ಬಿಸಿ ಎಣ್ಣೆಯಲ್ಲಿ ಹಾಕಿ.
ಕೆಸುವಿನೆಲೆ ಪತ್ರೊಡೆ
ಬೇಕಾಗುವ ಸಾಮಗ್ರಿ: ಕೆಸುವಿನೆಲೆ- 15, ಬೆಳ್ತಿಗೆ ಅಕ್ಕಿ- 2 ಕಪ್, ಹೆಸರು- 1/2 ಕಪ್, ತೆಂಗಿನ ತುರಿ- 2 ಕಪ್, ಒಣಮೆಣಸು 5-6, ಕೊತ್ತಂಬರಿ ಬೀಜ- 1 ಚಮಚ, ಚಿಟಿಕೆ ಅರಸಿನ, ಲಿಂಬೆಗಾತ್ರದ ಹುಳಿ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಅಕ್ಕಿ ಮತ್ತು ಹೆಸರನ್ನು ಒಂದೆರಡು ಗಂಟೆ ನೆನೆಸಿ ನಂತರ ನೀರು ಬಸಿದು ತೆಂಗಿನ ತುರಿ, ಕೊತ್ತಂಬರಿಬೀಜ, ಹುಳಿ, ಚಿಟಿಕೆ ಅರಸಿನ, ಉಪ್ಪು , ಬೇಕಷ್ಟು ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿರಿ. ಈ ಮಿಶ್ರಣವನ್ನು ಕೆಸುವಿನ ಎಲೆಗೆ ಸವರಿ ಸುರುಳಿ ಮಾಡಿ ಹಬೆಯಲ್ಲಿ ಬೇಯಿಸಿ. ತಣ್ಣಗಾದ ಮೇಲೆ ತುಂಡು ಮಾಡಿ ಕಾವಲಿಯಲ್ಲಿಟ್ಟು ಎಣ್ಣೆ ಹಾಕಿ ಕಾಯಿಸಬಹುದು. ಇಲ್ಲವೆ ಸಣ್ಣಗೆ ಹೆಚ್ಚಿ ಒಗ್ಗರಣೆ ಮಾಡಿ ಬೆಲ್ಲ, ತೆಂಗಿನ ತುರಿ ಸೇರಿಸಿದರೆ ರುಚಿ ರುಚಿಯಾಗಿರುತ್ತದೆ.