ಭಾರತೀಯ ಸಂಸ್ಕೃತಿ ಸಂಸ್ಕಾರಗಳು ಉತ್ಕೃಷ್ಟವಾದವುಗಳು : ರಾಜಶ್ರೀ ಎಸ್. ನಟ್ಟೋಜ
ಪುತ್ತೂರು: ಸಣ್ಣ ವಯಸ್ಸಿನಲ್ಲಿ ನಾನಾ ಬಗೆಯ ಸಂಗತಿಗಳೆಡೆಗೆ ಆಸಕ್ತಿ ಮೂಡಿದರೂ ಬೌದ್ಧಿಕ ಮಟ್ಟ ಬೆಳೆದಂತೆ ಭಾರತೀಯ ಸಂಸ್ಕೃತಿ ಸಂಸ್ಕಾರಗಳೇ ಉತ್ಕೃಷ್ಟವಾದದ್ದೆಂಬುದು ಅರಿವಿಗೆ ಬರುತ್ತದೆ. ಅನುಭವ ಹೆಚ್ಚುತ್ತಾ ಸಾಗಿದಾಗ ನಮ್ಮ ಪರಂಪರೆಯಲ್ಲಿ ಉಕ್ತವಾದ ವಿಚಾರಧಾರೆಗಳಿಗೆ ಮಿಗಿಲಾದದ್ದು ಯಾವುದೂ ಇಲ್ಲ ಎಂಬ ಸತ್ಯ ಅನಾವರಣಗೊಳ್ಳುತ್ತಾ ಸಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪಾರಂಪರಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿನಲ್ಲಿ ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು. ನಮ್ಮತನವನ್ನು ಬೆಳೆಸಿಕೊಳ್ಳುತ್ತಾ, ಸಾಧನೆಯನ್ನು ಮೆರೆಯಬೇಕು. ಹಿಂದೂ ಧರ್ಮದ ವಿಚಾರಧಾರೆಗಳನ್ನು ಅರಿಯುತ್ತಾ ಬೆಳೆಯಬೇಕು. ವಿದ್ಯಾಸಂಸ್ಥೆಯಲ್ಲಿ ದೊರಕುವ ಅವಕಾಶಗಳನ್ನು ಬಳಸಿಕೊಂಡು ವ್ಯಕ್ತಿತ್ವವನ್ನು ಅರಳಿಸಿಕೊಳ್ಳಬೇಕು. ಸಂಸ್ಥೆಯಲ್ಲಿ ದೊರೆತ ಮೌಲಿಕ ಸಂಗತಿಗಳು ಮುಂದಿನ ದಿನಗಳಲ್ಲಿನ ಬದುಕಿಗೆ ಪೂರಕವಾಗಲಿವೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ದೇವರು ಪ್ರತಿಯೊಬ್ಬರಿಗೂ ಸಹಜ ಸೌಂದರ್ಯವನ್ನು ಕೊಟ್ಟಿದ್ದಾನೆ. ಹೀಗಿರುವಾಗ ಗೋಡೆಗೆ ಬಳಿದಂತೆ ಇಲ್ಲ ಸಲ್ಲದ ಬಣ್ಣಗಳನ್ನು ಮುಖಕ್ಕೆ ಬಳಿದುಕೊಂಡರೆ ಸೌಂದರ್ಯ ವೃದ್ಧಿಯಾಗುವ ಬದಲು ಕಳಾಹೀನವೆನಿಸುತ್ತದೆ. ಭಾರತೀಯ ಉಡುಗೆ ತೊಡುಗೆಗಳು ಹಾಗೂ ಸಹಜತೆ ಜತೆಗೂಡಿದಾಗ ಸೌಂದರ್ಯ ವೃದ್ಧಿಯಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ನಡೆದು ಬಂದ ಪ್ರತಿಯೊಂದು ಆಚರಣೆ, ವಸ್ತ್ರ ವಿನ್ಯಾಸಗಳಿಗೆ ವಿಶೇಷ ಅರ್ಥಗಳಿವೆ, ಮೌಲ್ಯಗಳಿವೆ ಎಂದರು.
ಪಾರಂಪರಿಕ ದಿನಾಚರಣೆ ಎಂಬುದು ನಮ್ಮತನವನ್ನು ನೆನಪಿಸಿಕೊಳ್ಳುವ ದಿನ. ನಮ್ಮದರ ಬಗೆಗೆ ನಮ್ಮಲ್ಲಿ ಸ್ವಾಭಿಮಾನ ಇರಬೇಕು. ವಿದ್ಯಾರ್ಥಿ ಬದುಕನ್ನು ಸಾಧನೆಯ ಬದುಕಿನೆಡೆಗೆ ಮುನ್ನಡೆಯುವ ತಳಹದಿಯನ್ನಾಗಿ ಮಾರ್ಪಾಡುಪಡಿಸಿಕೊಳ್ಳಬೇಕು. ಶರೀರವಿರುವುದು ಸಾಧನೆಗಾಗಿಯೇ ಹೊರತು ಮೋಜು ಮಸ್ತಿಗಾಗಿ ಅಲ್ಲ. ಆದ್ದರಿಂದ ಶರೀರಕ್ಕೆ ಸಾಕಷ್ಟು ಕೆಲಸ ಹಾಗೂ ಕಷ್ಟ ಕೊಡುತ್ತಿರಬೇಕು. ಆಗ ಶರೀರ ನಮ್ಮ ಸಾಧನೆಗಳಿಗೆ ಪೂರಕವಾಗಿ ಸಹಕರಿಸುತ್ತದೆ ಎಮದು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ. ಹಾಗೂ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಬಹುಮಾನಿತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಅಕ್ಷಿತ್ ರೈ ವಂದಿಸಿದರು. ವಿದ್ಯಾರ್ಥಿನಿ ಪ್ರಿಯಾಲ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.