ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಇಲ್ಲಿನ ಕೂಟೇಲು ಎಂಬಲ್ಲಿ ಗುಡ್ಡವನ್ನು ಅಗೆಯಲಾಗಿದ್ದು, ಈಗ ಇಲ್ಲಿ ಧರೆ ಕುಸಿದು ಬೀಳುವ ಭೀತಿ ಉಂಟಾಗಿದೆ.

ಕೂಟೇಲುವಿನ ದರ್ಗಾ ಷರೀಫ್ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಬೃಹತ್ ಗುಡ್ಡವನ್ನು ಯಂತ್ರೋಪಕರಣಗಳ ಸಹಾಯದಿಂದ ಅಗೆಯಲಾಗಿತ್ತು. ಇಲ್ಲಿ ಗುಡ್ಡವನ್ನು 90 ಡಿಗ್ರಿಯಷ್ಟು ನೇರವಾಗಿ ಅಗೆಯಲಾಗಿದ್ದರೂ, ಅದಕ್ಕೆ ತಡೆಗೋಡೆ ನಿರ್ಮಿಸಿರಲಿಲ್ಲ. ಇದೀಗ ಭಾರೀ ಮಳೆಯಿಂದಾಗಿ ಈಗಾಗಲೇ ಗುಡ್ಡದ ಮಣ್ಣು ಕುಸಿಯುತ್ತಿದ್ದು, ಇಡೀ ಗುಡ್ಡವೇ ಕುಸಿಯುವ ಭೀತಿಯುಂಟಾಗಿದೆ. ಗುಡ್ಡವೇನಾದರೂ ಕುಸಿದರೆ ಹೆದ್ದಾರಿಗೆ ಬೀಳಲಿದ್ದು, ಗುಡ್ಡದ ಮೇಲಿರುವ ಬೃಹತ್ ಮರಗಳು ರಾಷ್ಟ್ರೀಯ ಹೆದ್ದಾರಿಗೆ ಉರುಳಲಿವೆ. ಅಲ್ಲದೇ ಹೆದ್ದಾರಿ ಬದಿ ಬೃಹತ್ ವಿದ್ಯುತ್ ಕಂಬದ ಅಳವಡಿಸುವಾಗ ತಳಭಾಗಕ್ಕೆ ಹಾಕಿರುವ ಸಿಮೆಂಟ್ ಕಾಂಕ್ರೀಟ್ ಕೂಡಾ ಮಣ್ಣಿನೊಂದಿಗೆ ಕುಸಿದಿದ್ದು, ವಿದ್ಯುತ್ ಕಂಬವೂ ಕುಸಿಯುವ ಭೀತಿಯುಂಟಾಗಿದೆ. ಗುಡ್ಡ ಕುಸಿದಾಗ ಮರಗಳು ವಿದ್ಯುತ್ ತಂತಿಯ ಮೇಲೆ ಬೀಳುವ ಸಂಭವವಿದ್ದು, ಇಲ್ಲಿ ಪ್ರಯಾಣಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ.