ಪುತ್ತೂರು: ಬೆಥನಿ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ವರ್ಗಾವಣೆಗೊಳ್ಳುತ್ತಿರುವ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವು ಮೇ.29ರಂದು ನಡೆಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಶಾಂತಿ ಅಗ್ನೆಸ್ ಬಿ ಎಸ್, ಶಿಕ್ಷಕಿಯರಾದ ಸಿಸ್ಟರ್ ರೀಮಾ ಜೆನೆಟ್ ಬಿ ಎಸ್. ಹಾಗೂ ಸಿಸ್ಟರ್ ಪವಿತ್ರ ಗ್ರೇಸಿ ಕೆ.ಜೆ, ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಮೂವರು ಭಗಿನಿಯರು ತಮ್ಮ ಹೊಸನೇಮಕಾತಿಯಾಗಿ ಸಿಸ್ಟರ್ ಶಾಂತಿ ಅಗ್ನೆಸ್ ಬಿ ಎಸ್. ಇವರು ಮಂಗಳೂರು ಜಿಲ್ಲೆಯ ಕಿನ್ನಿಕಂಬಳದ ಬೆಥನಿ ಸಿಬಿಎಸ್ಇ ಶಾಲೆ, ಸಿಸ್ಟರ್ ರಿಮಾ ಜೆನೆಟ್ ಬಿ ಎಸ್ ಇವರು ಗುಜರಾತ್ನ ವಡಗಾಂ ಎಂಬಲ್ಲಿ ಬೆಥನಿ ಕಾನ್ವೆಂಟ್ ಶಾಲೆಗೂ, ಹಾಗೂ ಸಿಸ್ಟರ್ ಪವಿತ್ರ ಗ್ರೇಸಿ ಕೆ ಜೆ ಇವರು ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ವರ್ಗಾವಣೆಗೊಂಡು ಸೇವೆ ಸಲ್ಲಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದವರು ಪುತ್ತೂರು ಬೆಥನಿ ಸಂಸ್ಥೆಗಳ ಸಂಚಾಲಕರಾದ ಸಿಸ್ಟರ್ ಪ್ರಶಾಂತಿ ಬಿ ಎಸ್ ಅವರು ತಮ್ಮ ಆಶೀರ್ವಚನದ ಮಾತುಗಳನ್ನು ಹಂಚಿಕೊಂಡು ಶುಭ ಹಾರೈಸಿದರು. ಬಳಿಕ ವರ್ಗಾವಣೆಗೊಳ್ಳಲಿರುವ ಶಿಕ್ಷಕರಿಗೆ ಶಾಲು ಹೊದಿಸಿ ಗೌರವ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ, ಶಿಕ್ಷಕಿ ಸೌಮ್ಯ ಸಿಸ್ಟರ್ಗಳ ಸೇವೆಯ ಬಗ್ಗೆ ತಮ್ಮ ಗೌರವ ಹಾಗೂ ಕೃತಜ್ಞತೆಯ ಮಾತುಗಳನ್ನಾಡಿದರು. ಮೂವರು ಸಿಸ್ಟರ್ಗಳೂ ಶಾಲೆಯೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷೆ ಸುನೀತಾ ಪಿರೇರ, ಉಪಾಧ್ಯಕ್ಷ ರಾಮಚಂದ್ರ ಭಟ್, ರಕ್ಷಕ-ಶಿಕ್ಷಕ ಸಂಘದ ಕಾರ್ಯನಿರ್ವಾಹಕ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಧ್ಯಾಹ್ನ ಭೋಜನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಬೃಂದಾ ನಿರೂಪಿಸಿ, ಹೇಮಲತಾ ಸ್ವಾಗತಿಸಿ, ಪವಿತ್ರ ವಿ. ಧನ್ಯವಾದಗೈದರು.