ರಾಮಕುಂಜ: ಶುಕ್ರವಾರ ಸಂಜೆಯಿಂದ ಶನಿವಾರ ಮುಂಜಾವಿನವರೆಗೆ ಸುರಿದ ಭಾರೀ ಮಳೆಗೆ ಕೊೖಲ ಗ್ರಾಮದ ವಿವಿಧ ಕಡೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕೊಲ್ಯ ನಿವಾಸಿ ಸಾಂತಪ್ಪ ಗೌಡರವರ ಮನೆಯಂಗಳ ಪಕ್ಕ ಮಣ್ಣು ಜರಿದು ಸುಮಾರು ಐವತ್ತಕ್ಕೂ ಹೆಚ್ಚು ಫಸಲುಭರಿತ ಅಡಕೆ ಮರಗಳು ಹಾಗೂ ಕೆಲವು ತೆಂಗಿನ ಮರಗಳು ನಾಶವಾಗಿದೆ. ಪಕ್ಕದಲ್ಲೇ ಇರುವ ದನದ ಹಟ್ಟಿ ಕುಸಿಯುವ ಹಂತದಲ್ಲಿದೆ. ಕೊಲ್ಯ ದಿನೇಶ್ ಗೌಡ, ಬಾಲಕೃಷ್ಣ ಗೌಡ ಕೊಲ್ಯಬಾರಿಕೆ, ಕುಶಾಲಪ್ಪ ಗೌಡ ಕೊಲ್ಯ ಇವರ ಮನೆಯ ಹಿಂದಿನ ಧರೆ ಕುಸಿದು ಮನೆಗೆಗಳಿಗೆ ಹಾನಿಯಾಗಿದ್ದು. ಮನೆ ಅಪಾಯದಲ್ಲಿದೆ. ಕುಮಾರಾಧಾರ ನದಿ ಪಾತ್ರದಲ್ಲಿರುವ ಸದಾನಂದ ಗೌಡ ಕೊಲ್ಯ ಎಂಬವರಿಗೆ ಸೇರಿದ 50 ಅಡಿಕೆ ಮರಗಳು ಮಣ್ಣು ಕುಸಿದು ಕೊಚ್ಚಿ ಹೋಗಿವೆ, ಕೊಲ್ಯ-ಓಕೆ ರಂಜಿನಿ ಎಂಬವರ ಮನೆಯ ಪಕ್ಕ ಧರೆಕುಸಿದು ಮನೆ ಅಪಾಯದಲ್ಲಿದೆ.
ಕೊಲ್ಯ-ಓಕೆ ಬಾಲಕೃಷ್ಣ ಗೌಡ ಎಂಬವರ ಮನೆಯ ಪಕ್ಕದಲ್ಲಿ ಹರಿಯುವ ಕುಮಾರಾಧಾರ ನದಿ ಬದಿಯ ಗುಡ್ಡ ಕುಸಿತವಾಗಿ ನದಿಯೊಡಲು ಸೇರಿದ್ದು, ಇವರ ಕೃಷಿ ಹಾಗೂ ಮನೆ ಅಪಾಯದಲ್ಲಿದೆ. ಹತ್ತಿರದ ಕೊಲ್ಯ-ಓಕೆ ಸುರೇಶ್ ಅವರ ಕೃಷಿ ನಾಶವಾದರೆ ಇವರ ಸಹೋದರ ತಿಮ್ಮಪ್ಪ ಗೌಡ ಅವರ ಮನೆ ಬದಿಯ ಧರೆಕುಸಿದಿದೆ. ಜನಾರ್ಧನ ಗೌಡ ಕಡೆಂಬ್ಯಾಲ್ ಹಾಗೂ ಪದ್ಮಯ ಗೌಡ ಸಬಲೂರು ಇವರ ಮನೆಯ ರಸ್ತೆಗೆ ಮಣ್ಣು ಕುಸಿದು ಬಿದ್ದು ಸಂಪರ್ಕ ಕಡಿತವಾಗಿದೆ. ಬರೆಮೇಲು ಚೆನ್ನಪ್ಪ ಗೌಡ, ಕುಶಾಲಪ್ಪ ಗೌಡ ಕಟ್ಟಾತ್ತಾರು ಇವರ ಕೃಷಿ ತೋಟದ ತೋಡುಗಳಿಗೆ ಮಣ್ಣು ಕುಸಿದು ಬಿದ್ದು ಕೃಷಿ ತೋಟದಲ್ಲಿ ನೀರು ತುಂಬಿದೆ. ಏಣಿತಡ್ಕದ ಏರ್ಮಡ್ಕ ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದು ಬಿದ್ದು ಸಂಚಾರ ಸ್ಥಗಿತವಾಗಿತ್ತು.
ನಿವೃತ್ತ ಪ್ರಿನ್ಸಿಪಾಲ್ ಭವಾನಿ ಶಂಕರ ಗೌಡ ಪರಂಗಾಜೆ ಇವರ ಮನೆ ಬಳಿ ಧರೆ ಕುಸಿದು ಮನೆಗೆ ಹಾನಿಯಾಗಿದೆ. ಪಕ್ಕದಲ್ಲೇ ಇರುವ ಸಂಜೀವ ಗೌಡ ಎಂಬವರ ಮನೆ ಬಳಿಗೆ ರಸ್ತೆಗೆ ಮಣ್ಣು ಬಿದ್ದು ಸಂಚಾರಕ್ಕೆ ತೊಡಕಾಯಿತು. ಕಲ್ಕಾಡಿ ಸುರೇಶ್ ರೈ ಎಂಬವರ ಮನೆಯ ಹಿಂದಿನ ಧರೆ ಕುಸಿದು ಮನೆಗೆ ಹಾನಿಯಾಗಿದೆ, ಕಾಯರಟ್ಟ ತನಿಯಪ್ಪ ಗೌಡ ಎಂಬವರ ಮನೆಯ ಹಿಂದಿನ ಧರೆ ಕುಸಿದು ಮಣ್ಣು ಹಾಗೂ ನೀರು ಮನೆಯ ಒಳಗೆ ಸೇರಿ ಅವಾಂತರ ಸೃಷ್ಠಿಯಾಯಿತು. ಪಕ್ಕದಲ್ಲೇ ಇರುವ ಕುಟುಂಬದ ದೈವಸ್ಥಾನದ ಕಂಪೌಂಡ್ ಕುಸಿದು ಹಾನಿಯಾಗಿದೆ. ಆನೆಗುಂಡಿ, ಗಂಡಿಬಾಗಿಲು ಮುಂತಾದೆಡೆ ಕೂಡಾ ಅಪಾರ ಹಾನಿಯಾಗಿದ್ದು, ಪಟ್ಟೆ ಬೈಲಿನ ತೋಡುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಕೃಷಿ ತೋಟಗಳ ಮಧ್ಯೆ ನೀರು ಹರಿಯುತ್ತಿದೆ. ಕೊಲ ಗ್ರಾಮ ಪಂಚಾಯಿತಿ ಬಳಿಯ ಜನತಾ ಕಾಲೋನಿಯ ಮನೆಗಳ ಬಳಿ ಮಣ್ಣು ಕುಸಿದು ಅಪಾಯ ತಂದೊಡ್ಡಿದೆ, ಪಕ್ಕದಲ್ಲೇ ಇರುವ ಕುಡಿಯುವ ನೀರಿನ ಟ್ಯಾಂಕ್ ಬೀಳುವ ಹಂತಕ್ಕೆ ತಲುಪಿದೆ.
ಗ್ರಾಮದ ವಳಕಡಮ ಭಾಗದ ಮುಖ್ಯ ರಸ್ತೆ ಬೊಳ್ಳುಕಲ್ಲು, ಗುಂಡಿಜೆ ರಸ್ತೆ, ಊರಾಜೆ ರಸ್ತೆ, ವಳಕಡಮ ಶಾಲಾ ರಸ್ತೆ, ಮಾಳದಿಂದ ಕೊಲ ರಸ್ತೆ, ನೆಹರು ತೋಟದಿಂದ ಮಾಳ ರಸ್ತೆಗಳಿಗೆ ಮಣ್ಣು ಕುಸಿದು ಬಿದ್ದು ಸಂಚಾರಕ್ಕೆ ಸ್ಥಗಿತವಾಗಿತ್ತು ಎಂದು ವರದಿಯಾಗಿದೆ.