ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯ ಮತ್ತು ಗ್ರಾಹಕರ ಸಮಾವೇಶ ಹಾಗೂ ಕೃಷಿ ಮಾಹಿತಿ ಕಾರ್ಯಾಗಾರವು ಮೇ.31ರಂದು ಸಂಘದ ಪ್ರಧಾನ ಕಛೇರಿಯ ಶಿವಸದನ ಸಭಾಂಗಣದಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘದಿಂದ ಸದಸ್ಯರಿಗೆ, ಗ್ರಾಹಕರಿಗೆ ಸಿಗುತ್ತಿರುವ ಸೌಲಭ್ಯ, ಸವಲತ್ತು, ಯೋಜನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ, ಸದಸ್ಯರು ಮತ್ತು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಘದ ಹಿರಿಯ ಸದಸ್ಯ, ಮಾಜಿ ಅಧ್ಯಕ್ಷರೂ ಆಗಿರುವ ಶರತ್ ಕುಮಾರ್ ರೈಯವರು ಮಾತನಾಡಿ ಗ್ರಾಹಕ ಸಮಾವೇಶವು ಸಂಘದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ICAR-DCR ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಯದುಕುಮಾರ್ ಕೊಳತ್ತಾಯರವರು ಕಾಳುಮೆಣಸು ಕೃಷಿ ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ-ಸಂವಾದ ನಡೆಸಿದರು.
ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಸಾಂತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾವು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಘದ ನಿರ್ದೇಶಕ ನಹುಷ ಭಟ್ ಪಳನೀರು ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ವಂದಿಸಿದರು. ಲೆಕ್ಕಿಗ ಅಭಿಷೇಕ್ ಪಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳು, ಸದಸ್ಯರುಗಳು, ಗ್ರಾಹಕರುಗಳು ಪಾಲ್ಗೊಂಡಿದ್ದರು.