ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ 20ನೇ ವಾರ್ಷಿಕ ಸಮಾರಂಭ, ಸತ್ಯನಾರಾಯಣ ಪೂಜೆ

0

ಪುತ್ತೂರು:ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ತಾಲೂಕು ಇದರ ವತಿಯಿಂದ ಜೂ.1ರಂದು ಬೆಳಿಗ್ಗೆ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನವನದಲ್ಲಿ ವಿವಿಧ ಧಾರ್ಮಿಕ ಹಾಗೂ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ 20ನೇ ವಾರ್ಷಿಕ ಸಮಾರಂಭ-2025 ಸಂಭ್ರಮ ಮನೆ ಮಾಡಿತು.


ಬೆಳಿಗ್ಗೆ ರವಿಚಂದ್ರ ನೆಲ್ಲಿತ್ತಾಯರವರ ನೇತೃತ್ವದಲ್ಲಿ ಗಣಪತಿಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನೆ ನೆರವೇರಿತು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಅನುವಂಶಿಕ ಯಜಮಾನರು, ಸಾಹಿತಿ, ಧಾರ್ಮಿಕ ಮುಂದಾಳುವಾಗಿರುವ ಶ್ರೀಕೃಷ್ಣಯ್ಯ ಅನಂತಪುರ ಮಾತನಾಡಿ, ಅನುವಂಶಿಕ ಯಜಮಾನ ಮಾತನಾಡಿ, 20 ವರ್ಷಗಳಿಂದ ಸಂಘವು ಮುನ್ನಡೆದು ಬಂದ ಹಾದಿಯನ್ನು ಸಿಂಹಾವಲೋಕನ ಮಾಡಬೇಕು. ಸಮಾಜದಲ್ಲಿ ಸಂಘಟನೆಗಳು ಸದಾ ಚಟುವಟಿಕೆಯಲ್ಲಿರಬೇಕು. ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಸಂಘವಾಗಿ ಬೆಳೆಯಬೇಕು. ಸಮಾಜದ ಒಳಿತಿಗಾಗಿ ನಾವು ಪ್ರಯತ್ನಿಸಬೇಕು. ಅನಗತ್ಯ ವಿಚಾರಗಳಿಗೆ ತಲೆಗೊಡಬಾರದು. ಸಮಾಜಮುಖಿಯಾಗಿ ನಡೆದಾಗ ಸಂಘಕ್ಕೆ ಮೌಲ್ಯ ಬರಲಿದ್ದು ಆ ಕಾರ್ಯವನ್ನು ಪುತ್ತೂರಿನ ವಾಣಿಯನ್ ಸಂಘವು ಮಾಡಿದೆ. ಈ ಸಂಘಟನೆಯು ಬೆಳಕಿನಿಂದ ಪ್ರಚಂಡ ಬೆಳಕಿನೆಡೆಗೆ ಸಾಗಲಿ ಎಂದರು.


ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮುದಾಯದ ಸಂಸ್ಕಾರ ನೀಡಬೇಕು-ರಮೇಶ್ ಎಂ.ಕೆ:
ಪೆರ್ಣೆ ಶ್ರೀಮುಚ್ಚಿಲೋಟ್ ಭಗವತಿ ಕ್ಷೇತ್ರದ ಚೆಟ್ಟಿಯಾನ್ ರಮೇಶ್ ಎಂ.ಕೆ. ಮಾತನಾಡಿ, ವಾಣಿಯನ್ ಸಮಾಜದ ಸಂಪ್ರದಾಯ ಮತ್ತು ಆಚರಣೆಗಳನ್ನು ನಿಷ್ಠೆಯಿಂದ ಅನುಷ್ಠಾನ ಮಾಡುತ್ತಿರುವುದರಿಂದ ಹಿಂದೂ ಸಮಾಜದಲ್ಲಿ ನಮ್ಮ ಸಮಾಜಕ್ಕೆ ಬೆಲೆಯಿದೆ. ನಮ್ಮ ಶಿಸ್ತು ಬದ್ದವಾದ ಆಚರಣೆ ಹಿಂದು ಸಮಾಜಕ್ಕೆ ನೀಡಿದ ಕೊಡುಗೆಯಾಗಿದೆ. ಮುಚ್ಚಿಲೋಟ್ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕು. ಮಕ್ಕಳನ್ನು ದಾರಿ ತಪ್ಪದಂತೆ ಮುಂಜಾಗ್ರತಾ ವಹಿಸಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಮುದಾಯದ ಸಂಸ್ಕಾರ ನೀಡಬೇಕು ಎಂದರು.


ಯುವ ಸಮಾಜವನ್ನು ಒಟ್ಟು ಸೇರಿಸಲು ಜಿಪಿಎಲ್ ಟೂರ್ನ್‌ಮೆಂಟ್-ರಾಮ ಮುಗ್ರೋಡಿ:
ದ.ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಮ ಮಗ್ರೋಡಿ ಮಾತನಾಡಿ, ವಾಣಿಯನ್ ಸಮಾಜದ ಯುವಕರನ್ನು ಒಟ್ಟು ಸೇರಿಸುವ ಉದ್ದೇಶದಿಂದ ಗಾಣಿಗ ಪ್ರೀಮಿಯರ್ ಲೀಗ್ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದೆ. ಜಿಲ್ಲೆಯ ಐದು ವಲಯಗಳಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಶಿಕ್ಷಣಕ್ಕೆ ಜಿಲ್ಲಾ ಸಂಘದಿಂದ ಆರ್ಥಿಕ ಸಹಕಾರ ನೀಡಲಾಗುವುದು. ಸರಕಾರದ ಮಟ್ಟದಲ್ಲಿ ನಮ್ಮ ಸಮಾಜದವರು ಅಧಿಕಾರಿಗಳಾಗಿರಬೇಕು ಎಂಬ ಉದ್ದೇಶದಿಂದ ಐಎಎಸ್, ಐಪಿಎಸ್ ಮಾಡುವವರಿಗೆ ಜಿಲ್ಲಾ ಸಂಘದಿಂದ ಸಹಕಾರ ನೀಡಲಾಗುವುದು ಎಂದರು.


ಅನಾರೋಗ್ಯದಲ್ಲಿರುವವರಿಗೆ ಸಹಕಾರ, ಶೈಕ್ಷಣಿಕ ಉತ್ತೇಜನ, ಮಾರ್ಗದರ್ಶನ ನೀಡುವ ಕಾರ್ಯವಾಗಬೇಕು-ಪ್ರೀತಂ ಕೆ.ಎಸ್:
ಬೆಂಗಳೂರು ಸ್ವಿಗ್ಗಿ ಸಾಪ್ಟವೇರ್‌ನ ನಿರ್ದೇಶಕ ಪ್ರೀತಂ ಕೆ.ಎಸ್. ಮಾತನಾಡಿ, ವಿದ್ಯಾರ್ಥಿಗಳಿಗೆ ವೃತ್ತಿಗೆ ಪೂರಕವಾದ ಮಾರ್ಗದರ್ಶನ, ಮಾಹಿತಿ ಮಾಹಿತಿ ನೀಡಬೇಕು. ಉದ್ಯೋಗಕ್ಕೂ ಆವಶ್ಯಕವಾದ ಮಾರ್ಗದರ್ಶನ ನೀಡುವ ಕಾರ್ಯವು ಸಂಘದ ಮೂಲಕ ನಡೆಯಲಿ. ಸಮಾಜದಲ್ಲಿ ಅನಾರೋಗ್ಯದಲ್ಲಿರುವವರಿಗೆ ಸಹಕಾರ, ಬಡಬರಿಗೆ ಉತ್ತೇಜನ ಶೈಕ್ಷಣಿಕ ಉತ್ತೇಜನ ಹಾಗೂ ಮಾರ್ಗದರ್ಶನ ನೀಡುವ ಕಾರ್ಯಗಳು ಎಲ್ಲಾ ಸಂಘಗಳಲ್ಲೂ ಅಗಬೇಕಾದ ಆವಶ್ಯಕತೆಯಿದೆ ಎಂದರು.


ಇತರ ಸಮುದಾಯಗಳಿಗಿಂತ ಭಿನ್ನ ಕಾರ್ಯಕ್ರಮ-ಪ್ರಸಾದ್ ಕಲ್ಲರ್ಪೆ:
ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಮಾತನಾಡಿ, ಸಮುದಾಯದ ವಾರ್ಷಿಕ ಕಾರ್ಯಕ್ರಮಗಳನ್ನು ಇತರ ಸಮುದಾಯಗಳಿಗಿಂತ ಭಿನ್ನವಾಗಿ ನಡೆಸಲಾಗುತ್ತಿದೆ. ಯುವ ಸಮುದಾಯ, ಮಹಿಳಾ ಸಮುದಾಯಗಳಿಗೆ ಪ್ರೇರಣೆ ನೀಡುವಂತೆ ಆಯಾ ಕ್ಷೇತ್ರದ ಸಾಧಕರನ್ನು ವಿಶೇಷ ಅತಿಥಿಗಳನ್ನು ಆಮಂತ್ರಿಸಲಾಗುತ್ತಿದೆ. ವೇದಿಕೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ ಎಂದರು. ಸಮಾಜ ಬಾಂಧವರೆಲ್ಲರೂ ಒಟ್ಟು ಸೇರಿದಾಗ ಮಾತ್ರ ಸಂಘಟನೆ. ಸಂಘದ ಬೆಳವಣಿಗೆಯಲ್ಲಿ ಸಮಾಜದ ಪ್ರತಿಯೊಬ್ಬರು ಆರ್ಥಿಕ ಸಹಕಾರ ನೀಡುವಂತೆ ವಿನಂತಿಸಿದರು.


ಮಂಗಳೂರು ಕೇರ್ ಹೆಲ್ತ್ ಇನ್ಸೂರೆನ್ಸ್‌ನ ವ್ಯವಸ್ಥಾಪಕ ನಿಶಾ ಜಯರಾಮ್ ದೇರಳಕಟ್ಟೆ, ಉದ್ಯಮಿ ಜಯಲಕ್ಷ್ಮೀ ಶಿವಶಂಕರ ನೆಕ್ರಾಜೆ, ಹಿರಿಯ ನ್ಯಾಯವಾದಿ ಪಿ.ರಾಘವ, ಬೆಂಗಳೂರು ಬ್ಲೂ ಯೋಂಡರ್‌ನ್ ಸಾಫ್ಟ್‌ವೇರ್ ಇಂಜಿನಿಯರ್ ಕಾವ್ಯ ಸಂತೋಷ್ ಈಶ್ವರಮಂಗಳ ಸಂದರ್ಭೋಚಿತವಾಗಿ ಮಾತನಾಡಿದರು.


ಸಮಾಜದ ಸಾಧಕರಿಗೆ ಸನ್ಮಾನ, ಹಿರಿಯರಿಗೆ ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಸುಬ್ಬಪ್ಪ ಪಾಟಾಳಿ ಪಟ್ಟೆ, ನಿವೃತ್ತ ಪ್ರಾಂಶುಪಾಲ ಅಪ್ಪು ಪಾಟಾಳಿ ನೆಹರುನಗರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಹದೇವ ಏರಾಜೆ, ನಿವೃತ್ತ ಯೋಧ ಲಕ್ಷ್ಮೀಶ ಕಡಮಜಲು, ಬಂಟ್ವಾಳ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿನಯ್ ನೆಹರುನಗರ, ಗೌರವ ಡಾಕ್ಟರೇಟ್ ಪುರಸ್ಕೃತ ಗೋಪಾಲಕೃಷ್ಣ ಎಂ., ಆಶಾ ಕಾರ್ಯಕರ್ತೆ ಮಮತಾ ಆರ್ಲಪದವು, ಪ್ರಗತಿಪರ ಕೃಷಿಕೆ ಕುಸುಮಾ ಬಾಲಕೃಷ್ಣ ಕುಂತೂರು, ವಿಕಲಚೇತನರ ಸೇವಾ ಕೇಂದ್ರದ ತಾಲೂಕು ಸಂಯೋಜಕ ನವೀನ್ ಕುಮಾರ್ ಮೊಟ್ಟೆತ್ತಡ್ಕ, ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಎನ್‌ಸಿಸಿ ಕೆಡೆಟ್ ಚೇತನ್ ಬುಳೇರಿಕಟ್ಟೆ, ಮಂಗಳೂರು ವಿಭಾಗದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೃತೇಶ್‌ರವರಿಗೆ ಸನ್ಮಾನಿಸಿದರು. ಸಮಾಜದ ಹಿರಿಯರಾದ ಮಹಾಲಿಂಗ ಪಾಟಾಳಿ ಮತ್ತು ಯಶೋಧ ದಂಪತಿಗಳು ದೇರ್ಲ, ಶಂಕರ ಪಾಟಾಳಿ ಮತ್ತು ಲೀಲಾವತಿ ದಂಪತಿಗಳು ಬಾಕಿತ್ತಿಮಾರು, ಸುಬ್ಬ ಪಾಟಾಳಿ ಮತ್ತು ರಾಜೀವಿ ದಂಪತಿಗಳು ಕಡಮಜಲು, ಮಹಾಲಿಂಗ ಮತ್ತು ಪಾರ್ವತಿ ದಂಪತಿಗಳು ಕಲ್ಲೇಗ, ಪಕ್ಕೀರ ಪಾಟಾಳಿ ಮತ್ತು ಯಮುನಾ ದಂಪತಿಗಳು ಬಲ್ನಾಡು, ಅಂಬಾಡಿ ಪಾಟಾಳಿ ಬುಳ್ಳೇರಿಕಟ್ಟೆ, ಅಚ್ಚು ಪಂಚೋಡಿ, ದೂಮಕ್ಕ ನೀರಳಿಕೆ, ದೇಯಿ ಪಂಚೋಡಿಯವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರಾದ ರಘುರಾಮ ಪಾಟಾಳಿ,ಮನ್ವಿತ್ ಕೋನಡ್ಕ, ದಾಮೋದರ ಪಾಟಾಳಿ, ಶಶಿಧರ್ ಮೇರ್ಲ, ಮೋಹನ್ ಅಮ್ಮುಂಜೆ, ಶ್ರೀಶ ಕೃಷ್ಣ, ವರ್ಷಾ ಬಾಕಿತ್ತಿಮಾರ್ ಹಾಗೂ ಪುಷ್ಪಾರವರನ್ನು ಅಭಿನಂದಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಮಾರಂಭದ ಅಂಗನವಾಗಿ ನಡೆಸಲಾದ ವಿವಿಧ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಜಿಪಿಎಲ್ ಟೂರ್ನ್‌ಮೆಂಟ್ ಲೋಗೋ, ಆಮಂತ್ರಣ ಬಿಡುಗಡೆ:
ದ.ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದಿಂದ ಮಂಗಳೂರಿನಲ್ಲಿ ನಡೆಯಲಿರುವ ಗಾಣಿಗ ಪ್ರೀಮಿಯರ್ ಲೀಗ್‌ನ ಲೋಗೋ ಹಾಗೂ ಆಮಂತ್ರಣ ಪತ್ರಿಕೆಯು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.


ಸಂಘದ ಉಪಾಧ್ಯಕ್ಷ ಮಹೇಶ್ ಆಲಂಕಾರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಜಯಲಕ್ಷ್ಮಿ ಡಿ.ಎಸ್. ವರದಿ ಮಂಡಿಸಿದರು. ಗೀತಾ ಕಲ್ಲರ್ಪೆ ಮತ್ತು ಸೌಮ್ಯ ವಿನಯ್ ಕಡಮಜಲು ಕಾರ್ಯಕ್ರಮ ನಿರೂಪಿಸಿದರು. ಮನೋಹರ್ ಪಾಟಾಳಿ ವಂದಿಸಿದರು. ಕ್ಷಮಾ ಪ್ರಾರ್ಥಿಸಿದರು. ವಿನಯ್ ಕಡಮಜಲು, ತಿಮ್ಮಪ್ಪ ಪಾಟಾಳಿ ಮೊಟ್ಟೆತ್ತಡ್ಕ, ರಮೇಶ್ ಬಾಕಿತ್ತಿಮಾರ್, ಗೋಪಾಲಕೃಷ್ಣ ಎಂ., ಬಾಲಕೃಷ್ಣ ಕಲ್ಲರ್ಪೆ, ದೀಕ್ಷಿತ್ ಬೆಳ್ಳಾರೆ, ಶಂಕರಿ ಟೀಚರ್, ಮಹಾಲಿಂಗ ಪಂಜಳ, ಶಂಕರ ಮುಕ್ರಂಪಾಡಿ, ಬೇಬಿ ಕುಂತೂರು, ರವಿ ಬಾಕಿತ್ತಿಮಾರ್, ಸುಷ್ಮಾ ದಾಮೋದರ, ಶಾರದಾ ಕೃಷ್ಣ, ರಾಜೇಶ್, ಅಕ್ಷತಾ ಕಲ್ಲರ್ಪೆ, ಸಾವಿತ್ರಿ ಕೆ., ದಾಮೋದರ ಪಾಟಾಳಿ, ಭವ್ಯ ಮನೋಹರ್, ನಾರಾಯಣ ಕುಕ್ಕುಪುಣಿ, ಹರಿಪ್ರಸಾದ್ ಡಿ.ಎಸ್., ಸುಜಿತಾ, ಸ್ವಾತಿ ಮಹಾಲಿಂಗ, ಸುಜಿತಾ ಹರಿಪ್ರಸಾದ್, ಧನುಷಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಮಧ್ಯಾಹ್ನ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆಯ ನಂತರ ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಹಾಗೂ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿತು.

LEAVE A REPLY

Please enter your comment!
Please enter your name here