ನೆಲ್ಲಿಕಟ್ಟೆ ಅಂಬಿಕಾ ಪ.ಪೂ. ವಿದ್ಯಾಲಯದ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

0

ಶಿಕ್ಷಣದೊಂದಿಗೆ ಮಕ್ಕಳಲ್ಲಿ ಸಂಸ್ಕಾರ, ದೇಶಪ್ರೇಮ ಬಿತ್ತಬೇಕು : ವೆಂಕಪ್ಪ ಗೌಡ


ಪುತ್ತೂರು: ಮಾತಾ ಪಿತರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಗುಣಮಟ್ಟದ ವಿದ್ಯಾಭ್ಯಾಸ ಮಾತ್ರವಲ್ಲದೆ ಧರ್ಮ, ದೇಶ ಸೇವೆಯ ಮಹತ್ವವನ್ನೂ ತಿಳಿಸಿದರೆ ಅದುವೇ ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕೆ ಕೂಡಿಡುವ ಸಂಪತ್ತು. ಇದರ ಹೊರತಾಗಿ ಮತ್ಯಾವ ಸಂಪತ್ತನ್ನೂ ಪೋಷಕರು ಮಕ್ಕಳಿಗಾಗಿ ಕೂಡಿಡಬೇಕಾಗಿಲ್ಲ ಎಂದು ನಿವೃತ್ತ ಯೋಧ, ಸಮಾಜ ಸೇವಕ ವೆಂಕಪ್ಪ ಗೌಡ ಹೇಳಿದರು.


ಅವರು ಬಪ್ಪಳಿಗೆಯ ಶ್ರೀ ಶಂಕರ ಸಭಾ ಭವನದಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ಶೈಕ್ಷಣಿಕ ವರ್ಷದ ತರಗತಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೊಜ ಮಾತನಾಡಿ ಹಲವಾರು ಪ್ರಥಮಗಳಿಗೆ ಅಂಬಿಕಾದ ಹೆಸರಾಗಿದೆ. ಅರ್ಹರಿಗೆ ಉಚಿತ ಶಿಕ್ಷಣ, ಪಠ್ಯದಲ್ಲಿ ಯೋಗ ಶಿಕ್ಷಣ, ಧರ್ಮ ಶಿಕ್ಷಣ, ದೇಶ ಭಕ್ತಿಯ ಪಾಠ ಇದರ ಜೊತೆಗೆ ಗುಣಮಟ್ಟದ ಶಿಕ್ಷಣ ಅಂಬಿಕಾದಲ್ಲಿ ದೊರಕುತ್ತಿದೆ. ಜೆಇಇ ನೀಟ್‌ನಂತಹ ಪರೀಕ್ಷೆಗಳಲ್ಲಿ ಅಂಬಿಖಾದ ವಿದ್ಯಾಥಿಗಳು ಸಾಧನೆಗೈಯುತ್ತಿದ್ದಾರೆ ಎಂದರು.


ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ಕೊಡಬೇಕು. ಹಾಗೆಯೇ ಹೆತ್ತವರು ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಬದಲಾಗಿ ಮಕ್ಕಳ ಜತೆಗಿರಬೇಕು. ಹೆತ್ತವರು, ಶಿಕ್ಷಕರು, ಆಡಳಿತ ಮಂಡಳಿಯವರೆಲ್ಲರೂ ಮಕ್ಕಳ ಜತೆಗಿದ್ದಾಗ ಸಾಧನೆ ಸುಲಭವೆನಿಸುತ್ತದೆ. ಉತ್ತಮ ಅಂಕಗಳೊಂದಿಗೆ ದೇಶ ಉಳಿಸುವ, ಸ್ವಾಭಿಮಾನ ಹೊಂದಿರುವ ಯುವಸಮೂಹವನ್ನು ರೂಪುಗೊಳಿಸುವ ಅಗತ್ಯವಿದೆ ಎಂದು ಹೇಳಿದರು.


ಕಳೆದ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಿವರಾಮ ಆಳ್ವ ಅಂಬಿಕಾ ಶುಭಹಾರೈಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೊಜ, ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜೆಇಇ, ನೀಟ್, ಪಿಯು ಇಲಾಖಾ ಪರೀಕ್ಷೆಯಲ್ಲಿ ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮೆರದ ಸಾಧಕ ವಿದ್ಯಾರ್ಥಿಗಳನ್ನು ಪೋಷಕರ ಸಹಿತ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಯಲ್ಲಿ ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯಂತೆ ಮಕ್ಕಳು ತಮ್ಮ ಪೋಷಕರ ಪಾದ ಪೂಜೆಯನ್ನು ನೆರವೇರಿಸಿದರು.


ವಿದ್ಯಾರ್ಥಿನಿ ಧರಣಿ ಮತ್ತು ಬಳಗ ಪ್ರಾರ್ಥಿಸಿದರು. ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ವಿಷ್ಣು ಪ್ರದೀಪ, ಜಗದೀಶ, ಗೌರಿ ಬಿ.ವಿ. ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಉಪ ಪ್ರಾಂಶುಪಾಲೆ ಶೈನಿ ಕೆ. ಜೆ. ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here