ಎಸ್.ಪಿ. ಸೂಚನೆ ಹಿನ್ನಲೆ : ಕಡಬದಲ್ಲಿ ರಾತ್ರಿ ವೇಳೆ ಸಂಘಟನೆಗಳ ಪ್ರಮುಖರ ಮನೆಗೆ ಪೊಲೀಸರ ಭೇಟಿ : ಕಾರ್ಯಕರ್ತರಿಂದ ಪ್ರತಿಭಟನೆ – ಪ್ರಕರಣ ದಾಖಲು

0

ಕಡಬ: ದ.ಕ. ಜಿಲ್ಲೆಗೆ ನೂತನ ಎಸ್.ಪಿ. ಯಾಗಿ ಡಾ. ಅರುಣ್ ಕೆ. ಅವರು ಆಗಮಿಸಿದ್ದು, ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಇವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಇದೀಗ ಪೊಲೀಸರು ಅಲರ್ಟ್ ಆಗಿದ್ದಾರೆ.

ಈ ಮಧ್ಯೆ ಮೇ 30, ಮೇ 31ರಂದು ಹಾಗೂ ಜೂ.1ರಂದು ರಾತ್ರಿ ವೇಳೆ ಕಡಬ ಎಸ್.ಐ. ಹಾಗೂ ಸಿಬ್ಬಂದಿಗಳು ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರ ಮನೆಗೆ ತೆರಳಿ ಜಿ.ಪಿ.ಎಸ್. ಫೋಟೋ ಹಾಗೂ ಅವರನ್ನು ವಿಚಾರಿಸಿಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೂ.1ರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಹತ್ತು ಹದಿನೈದು ಮಂದಿ ಕಡಬ ಪೋಲಿಸ್ ಠಾಣೆಗೆ ಆಗಮಿಸಿ, ನಮ್ಮನ್ನು ಹುಡುಕಿಕೊಂಡು ನೀವು ಮನೆಗೆ ಬರುವುದು ಬೇಡ, ನಾವೇ ಠಾಣೆಗೆ ಬಂದಿದ್ದೇವೆ, ಎಷ್ಟು ಬೇಕಾದರೂ ಫೋಟೋ ತೆಗೆದುಕೊಳ್ಳಿ, ಯಾವ ರೀತಿಯ ತನಿಖೆ ಬೇಕಾದರೂ ಮಾಡಿ ಎಂದು ಹೇಳಿ ಠಾಣೆಯ ಎದುರು ಕುಳಿತುಕೊಂಡ ಘಟನೆ ನಡೆದಿದೆ.

ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಪ್ರಮೋದ್ ನಂದುಗುರಿ, ಪ್ರಮುಖರಾದ ದೇವಿಪ್ರಸಾದ್ ಮರ್ದಾಳ, ಉಮೇಶ್ ಶೆಟ್ಟಿ ಸಾಯಿರಾಂ, ಮೋಹನ ಕೆರೆಕೋಡಿ ಸೇರಿದಂತೆ ಸುಮಾರು 15 ಮಂದಿ ಆಗಮಿಸಿದ್ದು, ಈ ಸಂದರ್ಭದಲ್ಲಿ ಎಸ್.ಐ, ಅಭಿನಂದನ್ ಅವರು ನಾವು ಮೇಲಾಧಿಕಾರಿಗಳ ಆದೇಶ ಪಾಲಿಸುತ್ತಿದ್ದೇವೆ. ನಿಮ್ಮ ಬೇಡಿಕೆಗಳು ಇದ್ದರೆ ತಿಳಿಸಿ ನಾವು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ, ಇವಾಗ ಇಲ್ಲಿಂದ ಹೋಗಿ ಎಂದರು. ಇದಕ್ಕೆ ಪ್ರಾರಂಭದಲ್ಲಿ ಒಪ್ಪದ ಪ್ರಮುಖರು ನಾವು ಬೆಳಿಗ್ಗೆಯವರೆಗೆ ಠಾಣೆಯಲ್ಲೇ ಇರುತ್ತೇವೆ, ನೀವು ನಾಳೆ ರಾತ್ರಿ ಕೂಡ ನಮ್ಮನ್ನು ಹುಡುಕಿಕೊಂಡು ಬರುತ್ತಿರಲ್ವ, ಮನೆಗೆ ಬಂದಾಗ ಸಹಜವಾಗಿ ಮನೆಯವರಿಗೂ ತೊಂದರೆ ಆಗುತ್ತದೆ, ನಾವು ಏನು ತಪ್ಪು ಮಾಡಿದ್ದೇವೆ, ನಮ್ಮನ್ನು ರೌಡಿಗಳಂತೆ ನೋಡುತ್ತಿರಲ್ಲವೇ, ನಾಳೆ ನಮ್ಮನ್ನು ಹುಡುಕಿಕೊಂಡು ಪುನಃ ಬರುವುದಿಲ್ಲ ಎಂದು ಭರವಸೆ ನೀಡಿದರೆ ನಾವು ತೆರಳುತ್ತೇವೆ ಎಂದು ಹೇಳಿದರು. ಇದಕ್ಕೆ ಎಸ್.ಐ.ಯವರು ಉತ್ತರಿಸಿ ನಾವು ಮೇಲಾಧಿಕಾರಿಗಳ ಆದೇಶ ಪಾಲಿಸುತ್ತೇವೆ ಬಿಟ್ಟರೆ ಬೇರೆ ಏನೂ ಭರವಸೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಳಿಕ ರಾತ್ರಿ 12 ಗಂಟೆ ಸುಮಾರಿಗೆ ಕಾರ್ಯಕರ್ತರು ಠಾಣೆಯಿಂದ ತೆರಳಿದ್ದು ನಾಳೆ ಕುಟುಂಬ ಸಮೇತರಾಗಿ ಠಾಣೆಯಲ್ಲಿ ಕುಳಿತುಕೊಳ್ಳುತ್ತೇವೆ, ಆದೇಶ ಮಾಡಿದ ಎಸ್. ಪಿ.ಯವರಿಗೆ ತಿಳಿಸಿ ಎಂದು ಹೇಳಿ ತೆರಳಿದರು. ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಘಟನೆ ಪ್ರಮುಖ್ ಜಯಂತರವರು, ಹಿಂದೂ ಕಾರ್ಯಕರ್ತರ ಮನೋಸ್ಥೈರ್ಯ ಕಸಿಯುವ ಇಲಾಖೆಯ ಪ್ರಯತ್ನ ಫಲ ನೀಡದು, ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಸರಕಾರದ ವಿರುದ್ದ ಹೋರಾಟ ನಡೆಸಲಾಗುವುದು ನಾಳೆ ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಪ್ರಕರಣ ದಾಖಲು

ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರಮುಖರನ್ನು ಪರಿಶೀಲಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವನ್ನು ವಿರೋಧಿಸಿ ಜೂ.1 ರಂದು ರಾತ್ರಿ ಕಡಬ ಠಾಣಾ ವ್ಯಾಪ್ತಿಯ ನಿವಾಸಿಗಳಾದ ಪ್ರಮೋದ್ ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ, ಕೆರೆಕೋಡಿ, ಚಂದ್ರಶೇಖರ, ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ., ಶರತ್ ನಂದುಗುರಿ, ಶ್ರೇಯತ್, ನಂದುಗುರಿ, ಉಮೇಶ್, ನೂಜಿಬಾಳ್ತಿಲ, ರಾದಾಕೃಷ್ಣ, ಕೆ., ಜಯಂತ್, ಮತ್ತು ಇತರ ಮೂವರು ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಬಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ್ದು, ಆದ್ದರಿಂದ ಅವರುಗಳ ವಿರುದ್ದ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ: 39/2025 ಕಲಂ: 189(2),190 BNS-2023 ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here