*ಭಾಸ್ಕರ ಬಲ್ಯಾಯ ಕಾವು ರವರ ಕೊಡುಗೆ
* ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಯುತ ವ್ಯಕ್ತಿತ್ವವನ್ನು ಬದುಕಿನಲ್ಲಿ ರೂಪಿಸಿಕೊಂಡು ದೇಶದ ಆಸ್ತಿಯಾಗಬೇಕು-ಭಾಸ್ಕರ ಬಲ್ಯಾಯ
*ಪುಣ್ಯದ ಮಣ್ಣಿನಲ್ಲಿ ಪವಿತ್ರವಾದ ಕೆಲಸ: ಲೋಕನಾಥ ರೈ ಪಟ್ಟೆ
*ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ಕೊಡುಗೆ: ರಾಮಣ್ಣ ಜಾಲ್ತಾರು
ಕಾವು: ಸ್ಥಳೀಯ ಸಂಘ ಸಂಸ್ಥೆಗಳ ಮುಖಾಂತರ ಅನೇಕ ವರ್ಷಗಳಿಂದ ಸರಕಾರಿ ಶಾಲೆಗಳಿಗೆ ನೋಟ್ ಪುಸ್ತಕ ವಿತರಿಸುತ್ತಿದ್ದ ಕಾವು ಭಾಸ್ಕರ ಬಲ್ಯಾಯರವರು ಎಣ್ಮೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿ ತನಕ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ನೀಡಿದ್ದು ಅದರ ವಿತರಣೆ ಕಾರ್ಯಕ್ರಮ ಜೂ.2ರಂದು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತಾರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ “ಸರಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಕಲಿಕೆಗೆ ಪೂರಕ-ನೆರವಾಗಲು ಭಾಸ್ಕರ ಬಲ್ಯಾಯರು ಉಚಿತವಾಗಿ ಎಲ್ಲಾ ನೋಟ್ ಪುಸ್ತಕವನ್ನು ಕೊಡುಗೆಯಾಗಿ ನೀಡಿದ ಕಾರ್ಯ ಶ್ಲಾಘನೀಯ ಎಂದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಲೋಕನಾಥ ರೈ ಪಟ್ಟೆ ಮಾತನಾಡಿ “ಎಣ್ಮೂರು ಪುಣ್ಯದ ಮಣ್ಣಿನಲ್ಲಿ ಭಾಸ್ಕರ ಬಲ್ಯಾಯರು ಪವಿತ್ರವಾದ ಕೆಲಸ ಮಾಡಿದ್ದಾರೆ. ಅವರು ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ,ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಎಂಬ ಉದ್ದೇಶದಿಂದ ಉಚಿತ ಪುಸ್ತಕ ವಿತರಣೆ ಮಾಡಿದ ಭಾಸ್ಕರ ಬಲ್ಯಾಯರಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಭಾಸ್ಕರ ಬಲ್ಯಾಯರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಭಾಸ್ಕರ ಬಲ್ಯಾಯರು ಮಾತನಾಡಿ ನನ್ನ ಊರಿನಲ್ಲಿ ಸರಕಾರಿ ಶಾಲೆಗಳಿಗೆ ಸುಮಾರು 13 ವರುಷಗಳಿಂದ ನಿರಂತರವಾಗಿ ನೋಟ್ ಬುಕ್ ವಿತರಣೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಿವಿಧ ವಸ್ತುಗಳನ್ನು ನೀಡುತ್ತಿದ್ದೇನೆ.ವಿದ್ಯಾರ್ಥಿಗಳು ಗುಣಮಟ್ಟದ ಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಯುತ ವ್ಯಕ್ತಿತ್ವವನ್ನು ತಮ್ಮ ಜೀವನದಲ್ಲಿ ರೂಪಿಸಿಕೊಂಡು ದೇಶದ ಆಸ್ತಿಯಾಗಿ ಬೆಳೆಯಬೇಕು.ಶಿಸ್ತು, ಸುಮಯ ಪಾಲನೆ,ಉತ್ತಮ ನಡವಳಿಕೆ ಹಾಗೂ ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಂಡು ಎಲ್ಲರನ್ನು ಪ್ರೀತಿಸಿ ಗೌರವಿಸುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಮುಂದಿನ ದಿನಗಳಲ್ಲಿ ಕೂಡ ಈ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಶರೀಫ್ ಸಭಾಧ್ಯಕ್ಷತೆ ವಹಿಸಿದ್ದರು.
ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ ಪಟ್ಟೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ, ಮುಖ್ಯ ಶಿಕ್ಷಕಿ ಭುವನೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಸುರೇಖಾ ನಿರೂಪಿಸಿದರು. ಮುಖ್ಯ ಶಿಕ್ಷಕಿ ಭುವನೇಶ್ವರಿ ಸ್ವಾಗತಿಸಿದರು. ಶಿಕ್ಷಕಿ ಶಾಂತಮ್ಮ ವಂದಿಸಿದರು.