ಮುಸ್ಲಿಂ ಸಮುದಾಯಕ್ಕಾದ ಅನ್ಯಾಯವನ್ನು ಪ್ರಶ್ನಿಸಿ ಪಕ್ಷದ ಹುದ್ದೆಗೆ ನೀಡಿದ ರಾಜೀನಾಮೆಗೆ ಪಕ್ಷದಿಂದ ನೀಡಲಾದ ಶೋಕಾಸ್ ನೋಟಿಸು ಹಿಂಪಡೆಯಲು ಆಗ್ರಹ

0

ಕಡಬ: ಸಮುದಾಯಕ್ಕಾದ ಅನ್ಯಾಯವನ್ನು ಪ್ರಶ್ನಿಸಿ ಪಕ್ಷದ ಹುದ್ದೆಗೆ ನೀಡಿದ ರಾಜೀನಾಮೆಗೆ ಪಕ್ಷದಿಂದ ನೀಡಲಾದ ಶೋಕಾಸ್ ನೋಟಿಸು ಹಿಂಪಡೆಯಬೇಕೆಂದು ಕಡಬ ಅಲ್ಪ ಸಂಖ್ಯಾತ ಮುಖಂಡ ಅಶ್ರಫ್ ಶೇಡಿಗುಂಡಿ ಆಗ್ರಹಿಸಿದ್ದಾರೆ.

ಅವರು ಜೂ.3 ರಂದು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ತಾವು ಪ್ರತಿನಿಧಿಸುವ ಸಮುದಾಯಕ್ಕೆ ನೋವಾದಾಗ ಸಮುದಾಯ ನಿರಂತರ ಅನ್ಯಾಯಕ್ಕೊಳಗಾದ ಆ ಸಮುದಾಯದ ನಾಯಕರಾಗಿ ನೋವನ್ನು ವ್ಯಕ್ತಪಡಿಸುವುದು, ಆಗಿರುವ ಅನ್ಯಾಯಕ್ಕೆ ನ್ಯಾಯವನ್ನು ಕೇಳುವುದು, ನಾಯಕನಾದವನ ಸಹಜ ನಡೆಯಾಗಿದೆ. ಈ ನಿಟ್ಟಿನಲ್ಲಿ ಅಮಾಯಕ ಊರಿನಲ್ಲಿ ಎಲ್ಲಾ ಧರ್ಮದವರೊಂದಿಗೆ ಅನ್ಯೋನ್ಯತೆಯಿಂದಿದ್ದ ಒಂದೇ ಒಂದು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದ ನಿಷ್ಕಳಂಕ ವ್ಯಕ್ತಿತ್ವದ ಒಬ್ಬ ಯುವಕನ್ನು ಕಗ್ಗೊಲೆ ನಡೆಸಿದ ಬಗ್ಗೆ ನ್ಯಾಯ ಕೇಳಲು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಮತ್ತು ಉಪಾಧ್ಯಕ್ಷ ಕೆ. ಅಶ್ರಫ್ ನೇತೃತ್ವದಲ್ಲಿ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಸಭೆ ಕರೆದಿದ್ದರು.


ಇದು ಸಹಜ ಪ್ರಕ್ರಿಯೆ ಇದ್ಯಾವುದೂ ಪಕ್ಷದ ಮೇಲಿನ ದ್ವೇಷದಿಂದಲ್ಲ, ಬದಲಾಗಿ ಪಕ್ಷದ ಅಸ್ತಿತ್ವ ಉಳಿಸಲು ಸರಕಾರವನ್ನು ಎಚ್ಚರಿಸಲು ಹಾಗೂ ತಮ್ಮ ನೋವನ್ನು ತೋರಿಸಲು ಸಾಮೂಹಿಕ ರಾಜೀನಾಮೆ ಅನಿವಾರ್ಯವಾಗಿತ್ತು. ಆದರೆ ಅಂತಹ ನಾಯಕರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ, ಶಿಸ್ತು ಕ್ರಮದ ಎಚ್ಚರಿಕೆ ಸರಿಯಲ್ಲ, ತಕ್ಷಣ ಶೋಕಾಸ್ ನೋಟೀಸು ಹಿಂಪಡೆದು ನ್ಯಾಯ ಒದಗಿಸಬೇಕಾಗಿ ಕಡಬ ಬ್ಲಾಕ್ ಅಲ್ಪಸಂಖ್ಯಾತ ಮುಖಂಡರು ಆಗ್ರಹಿಸಿದ್ದಾರೆ.

ಸದ್ಯದ ಪರಿಸ್ತಿತಿಯಲ್ಲಿ ಜಾತ್ಯಾತೀತ ಮನಸ್ಕರು ವಿಭಜನೆ ಆಗಬಾರದು. ಜಾತ್ಯಾತೀತ ಶಕ್ತಿಗಳು ದುರ್ಬಲವಾದರೆ ಮತೀಯ ಶಕ್ತಿಗಳು ವಿಜೃಂಭಿಸಲು ಅವಕಾಶ ಮಾಡಿದಂತಾಗುತ್ತದೆ. ಪಕ್ಷದೊಳಗಿನ ವಿಚಾರವನ್ನು ಅನ್ಯಾಯವಾದ ಸಮುದಾಯದ ಮಂದಿಗಳನ್ನು ಕರೆದು ವಿಚಾರಿಸಿ ಜಾತ್ಯಾತೀತ ಸಮುದಾಯ ದುರ್ಬಲಗೊಳ್ಳದ ರೀತಿಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಿಜವಾದ ನಾಯಕತ್ವದ ಗುಣ. ಈ ಸಂದರ್ಭದಲ್ಲಿ ನಾಯಕರಾದವರು ನಿಜವಾದ ಪ್ರಜ್ಞಾವಂತಿಕೆಯನ್ನು ಮೆರೆದು ಅನ್ಯಾಯಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು.
ಈ ಬಗ್ಗೆ ಪಕ್ಷದ ವರಿಷ್ಠರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ನೀಡಿದ ಶೋಕಾಸ್ ನೋಟೀಸನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಧರ್ಮಾಧಾರಿತ ಹತ್ಯೆ, ಹಲ್ಲೆ ನಿರಂತರವಾಗಿ ನಡೆಯುತ್ತಿರುವುದು ತೀವ್ರ ಖೇದಕರ. ಅಬ್ದುಲ್ ರಹಿಮಾನ್ ಕೊಲೆ ಹಾಗೂ ಖಲಂದರ್ ಶಾಫಿ ಮೇಲಿನ ಹತ್ಯಾ ಯತ್ನ ಘಟನೆ ಮಾನವಿಯತೆಗೆ ಸವಾಲಾಗಿ ನಡೆದಿರುವುದು ಅತ್ಯಂತ ವಿಷಾದನೀಯ. ಇಂತಹ ಘಟನೆಗಳು ತೀವ್ರ ಖಂಡನೀಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರಕಾರವನ್ನು ಒತ್ತಾಯಿಸುತ್ತೇವೆ. ಇಂತಹ ಘಟನೆಗಳ ಹಿಂದಿರುವ ಸೂತ್ರದಾರರನ್ನು ಬಂಧಸಿ, ಘಟನೆಗಳು ಮರುಕಳಿಸದಂತೆ ತಡೆಯುವ ಸೂಕ್ತ ವ್ಯವಸ್ಥೆಯಾಗ ಬೇಕಿದೆ. ಇದಕ್ಕೆ ಪೋಲೀಸ್ ಇಲಾಖೆ ದಿಟ್ಟ ಹೆಜ್ಜೆಯನ್ನಿಡಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಿ.ಪಿ.ವರ್ಗೀಸ್, ಮಹಮ್ಮದ್ ಫೈಝಲ್, ಕೆ.ಎಂ. ಹನೀಫ್, ಎ.ಎಸ್. ಶರೀಫ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here