ವೀರಮಂಗಲ‌: ಪಿಎಂಶ್ರೀ ಶಾಲಾ ಪ್ರಾರಂಭೋತ್ಸವ-ಅಕ್ಷರ ದೇಗುಲಕ್ಕೆ ಮೊದಲ ಹೆಜ್ಜೆ ಇಟ್ಟ ಪುಟಾಣಿಗಳಿಗೆ ಅಕ್ಕರೆಯ ಆರತಿ

0

ಪುತ್ತೂರು; ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ಮಕ್ಕಳ ಕಲರವ. ಅಕ್ಷರ ದೇಗುಲಕ್ಕೆ ನೂತನವಾಗಿ ಕಾಲಿಡುವ ಭಾರತದ ಭವಿಷ್ಯದ ಕನಸುಗಳಿಗೆ ಅಕ್ಕರೆಯ ಆರತಿ. ತಲೆಗೊಂದು ಅಕ್ಷರ ಕಿರೀಟ, ಕೈಲೊಂದು ಬಲೂನ್, ಬ್ಯಾಂಡ್ ವಾಲಗದ ನಾದಕ್ಕೆ ಹೆಜ್ಜೆ ಇಡುತ್ತಾ ಬಂದ ಮಕ್ಕಳ ಮೊಗದಲ್ಲಿ ಸಂಭ್ರಮದ ಕಲೆ. ಹಸಿರು ಅಂಗಿ ಧರಿಸಿದ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಸಾಗಿ ಬಂದ ದೃಶ್ಯವನ್ನು ಸಂಭ್ರಮಿಸುವ ಕ್ಷಣಕ್ಕೆ ಪೋಷಕರು,ಶಿಕ್ಷಕರು ಸಾಕ್ಷಿಯಾದರು.

ಹೌದು. ಇಂದು ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (ಪಿಎಂಶ್ರೀ) ಶಾಲೆ ವೀರಮಂಗಲದಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮ. ಹೊಸ ಶೈಕ್ಷಣಿಕ ವರ್ಷದ ಉದ್ಘಾಟಣೆಯನ್ನು ಮಕ್ಕಳೊಂದಿಗೆ ಗ್ರಾಮ ಪಂಚಾಯತ್ ಸದಸ್ಯೆ ಪದ್ಮಾವತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರವಿಚಂದ್ರ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಆ ಬಳಿಕ ನಡೆದ ಪೋಷಕರ ಸಭೆಯಲ್ಲಿ ಶಿಕ್ಷಣತಜ್ಞ, ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಮಾಧವ ಭಟ್ ಮಾತನಾಡಿ ಶಾಲೆಯೆಂಬುದು ಮಕ್ಕಳ ಮನದ ಮನೆ, ಶಾಲೆಯಲ್ಲಿ ಮನೆಯ ವಾತಾವರಣ ಇದ್ದಾಗ ಸಹಜವಾಗಿ ಪೋಷಕರು ಮಕ್ಕಳನ್ನು ನೆಮ್ಮದಿಯಿಂದ ಶಾಲೆಗೆ ಕಲಿಸುತ್ತಾರೆ. ಮನೆಯಲ್ಲಿ ಸಿಗದ ಸಂಗತಿಗಳು ಶಾಲೆಯಲ್ಲಿ ದೊರೆತಾಗ ಸಹಜವಾಗಿ ಮಕ್ಕಳು ಶಾಲೆಯನ್ನು ಮನೆಗಿಂತ ಹೆಚ್ಚು ಪ್ರೀತಿಸುತ್ತಾರೆ. ಒಂಟಿಯಾಗಿ ಮಗು ಏನನ್ನು ಕಲಿಯಲಾಗದು. ಸಹವರ್ತಿಗಳಿಂದ ಮಕ್ಕಳು ಭಾಷೆ ಕಲಿಯುತ್ತಾರೆ. ಗುಂಪಿನಲ್ಲಿ ಮಕ್ಕಳು ಸಹಜವಾಗಿ ಕಲಿಯುತ್ತಾರೆ. ಮಗುವಿಗೆ ನಿಜವಾದ ಭರವಸೆ ಶಿಕ್ಷಕರು. ಶಿಕ್ಷಕರಿಗೆ ನಿಜವಾದ ಆತ್ಮ ಸಂತೃಪ್ತಿ ಮಕ್ಕಳ ಕಲಿಕೆ. ಈ ಸಂಬಂಧಗಳನ್ನು ಸಂಭ್ರಮಿಸುವುದೆ ನಿಜವಾದ ಜೀವನ. ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಮಕ್ಕಳಿಗೆ ಕಲಿಕೆಯ ಸಮಯ ವ್ಯರ್ಥವಾಗಬಾರದೆಂದು ಅನೇಕ ಸಹಜ ಉದಾಹರಣೆಯೊಂದಿಗೆ ಮಾತನಾಡಿದರು. ವೀರಮಂಗಲ ಶಾಲೆಯು ಸಹಜವಾಗಿ ಮಕ್ಕಳ ಕಲಿಕೆ ಪೂರಕ ವಾತಾವರಣ ಒದಗಿಸುತ್ತಿರುವುದು ಇಲ್ಲಿನ ಮಕ್ಕಳ,ಹೆತ್ತವರ ಈ ಶಾಲೆಯ ಶಿಕ್ಷಕರ ಭಾಗ್ಯ ಎಂದು ಸಂಭ್ರಮದಿಂದ ನುಡಿದರು.

ಉಪಾಧ್ಯಕ್ಷೆ ನವ್ಯ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಎಸ್ ಡಿಎಂಸಿ ಸದಸ್ಯರಾದ ರಝಾಕ್, ಹರೀಶ್, ಸಂದೀಪ್ ಕಾಂತಿಲ, ಸುರೇಶ್ ಗೌಡ, ರಮೇಶ ಗೌಡ, ಅರ್ಚನ, ವಿನುತ, ಚಂದ್ರಾವತಿ, ಭವ್ಯ, ನಳಿನಿ, ಉಮ್ಮರ್, ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಪಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ಶಿಕ್ಷಕರಾದ ಶೋಭಾ, ಶ್ರೀಲತಾ, ಹೇಮ, ಕವಿತಾ, ಶಿಲ್ಪರಾಣಿ, ಸೌಮ್ಯ, ಸವಿತಾ, ಸಂಚನಾ ಅಡುಗೆ ಸಿಬ್ಬಂದಿಗಳು ಸಹಕರಿಸಿದರು. ನೂರಾರು ಪೋಷಕರು ಆಗಮಿಸಿದರು.
ಶಾಲೆಗೆ ದಿ.ಶೀನಪ್ಪ ಮೂಲ್ಯ ಇವರ ಸ್ಮರಣಾರ್ಥ 50 ಚಯರ್ ಗಳನ್ನು ಅವರ ಮಕ್ಕಳು ನೀಡಿದರು. ಶಿಕ್ಷಕಿ ಶ್ರೀಲತಾ ಸುಹಾಸ್ ಹೆಬ್ಬಾರ್ ಇವರು 100 ಊಟಮಾಡುವ ಬಟ್ಟಲುಗಳನ್ನು ಕೊಡುಗೆಯಾಗಿ ನೀಡಿದರು.

LEAVE A REPLY

Please enter your comment!
Please enter your name here