ಮಂಗಳೂರು: ಯಾರೇ ಆದರೂ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಽಕ್ಷಕ ಡಾ.ಅರುಣ್ ಕೆ.ಅವರು ಎಚ್ಚರಿಕೆ ನೀಡಿದ್ದಾರೆ.
ಕಡಬ ಪೊಲೀಸ್ ಠಾಣೆಯಲ್ಲಿ ಕೆಲವರು ಜೂ.1ರಂದು ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿಯವರು, ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕೆಲವು ಹತ್ಯೆಗಳಿಂದಾಗಿ ತಿಂಗಳಿನಿಂದ ಈಚೆಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹತ್ತು ವರ್ಷಗಳ ಈಚೆಗೆ ನಡೆದಿರುವ ಇಂತಹ ಹತ್ಯೆಗಳನ್ನು ವಿಶ್ಲೇಷಿಸಿದಾಗ, ಅವುಗಳ ಆರೋಪಿಗಳು ಕೋಮುವಾದಿ ಸಂಘಟನೆಗಳ ಸಂಪರ್ಕದಲ್ಲಿದ್ದುದು ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ, ಕೋಮುವಾದಿ ಸಂಘಟನೆಗಳ ಮುಖಂಡರ ಪಟ್ಟಿ ತಯಾರಿಸಿ, ಅವರ ದೈನಂದಿನ ಚಟುವಟಿಕೆ ಹಾಗೂ ಅವರು ಎಲ್ಲೆಲ್ಲಿರುತ್ತಾರೆ ಎಂಬ ಬಗ್ಗೆ ಪರಿಶೀಲಿಸಲು ಕ್ರಮವಹಿಸಿದ್ದೆವು. ಈ ಕ್ರಮ ಕೈಗೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲವರು ಕಡಬ ಪೊಲೀಸ್ ಠಾಣೆ ಮುಂದೆ ಅಕ್ರಮವಾಗಿ ಗುಂಪು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಕುಟುಂಬದವರನ್ನು ಕರೆತಂದರೆ ಅವರ ವಿರುದ್ಧವೂ ಕ್ರಮ:
ಕಡಬ ಠಾಣೆಯ ಬಳಿ ಪ್ರತಿಭಟನೆ ನಡೆಸಿದವರು, ತಮ್ಮ ಕುಟುಂಬದ ಸದಸ್ಯರನ್ನೂ ಕರೆ ತರುವುದಾಗಿ ಹೇಳಿದ್ದಾರೆ.ಕುಟುಂಬದ ಸದಸ್ಯರನ್ನು ಕರೆ ತಂದು ಪ್ರತಿಭಟನೆ ನಡೆಸಿದರೆ,ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಕೋಮುವಾದಿ ಸಂಘಟನೆಗಳ ಮುಖಂಡರ ಚಲನವಲನ ಗಮನಿಸುವ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ, ಮುಂದೆಯೂ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ.ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುವವರೆಗೂ ಇದು ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.