ಸವಣೂರು : ಅಕ್ರಮ ಚಟುವಟಿಕೆಗಳನ್ನು ಮಾಡುವವರಿಗೆ ಸಾರ್ವಜನಿಕರು ಬೆಂಬಲ ನೀಡಬಾರದು.ಎಲ್ಲರೂ ಕಾನೂನು ಪಾಲಿಸಬೇಕು.ಜನರ ಸಮಸ್ಯೆ ಆಲಿಸುವ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದು ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಡಿ.ಎನ್.ಈರಯ್ಯ ಹೇಳಿದರು.
ಅವರು ಜೂ.3ರಂದು ಸವಣೂರು ಗ್ರಾ.ಪಂ.ವತಿಯಿಂದ ನಡೆದ ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಅಪ್ರಾಪ್ತ ವಯಸ್ಕರ ಕೈಯಲ್ಲಿ ವಾಹನ ಚಲಾಯಿಸಲು ಕೊಡಬೇಡಿ. ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಮಾಡಿದವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ಕಾನೂನು ಪಾಲನೆ ಮತ್ತು ಸುವ್ಯವಸ್ಥೆ ಕಾಪಡಿಕೊಳ್ಳುವ ಜತೆಗೆ ಪ್ರವಾಹ ಸಂದರ್ಭದಲ್ಲೂ ಕೆಲಸ ಮಾಡಿದೆ.ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಇಲಾಖೆಯ ಜತೆಗೆ ಸಾರ್ವಜನಿಕರೂ ಸಹಕರಿಸಬೇಕು. ಸಾಮಾನ್ಯ ವ್ಯಕ್ತಿಗೂ ಕೂಡ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.
ವಾಹನ ತಪಾಸಣೆ ಸಾಮಾನ್ಯ ಪ್ರಕ್ರಿಯೆ
ಸಾರ್ವಜನಿಕ ವಾಹನವನ್ನು ತಪಾಸಣೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ.ಇದಕ್ಕೆ ಜನ ಭಯಭೀತರಾಗುವುದು ಬೇಡ.ಕಾರು ಸಹಿತ ಇತರ ವಾಹನಗಳಲ್ಲಿ ಟಿಂಟ್ ಗ್ಲಾಸ್ ಹಾಕಿದ್ದರೆ ಕೂಡಲೇ ತೆರವು ಮಾಡಬೇಕು.ಕೆಲ ವಾಹನದವರು ಪ್ರಖರ ಬೆಳಕು ಸೂಸುವ ಲೈಟ್ ಅಳವಡಿಸಿ ಇತರ ವಾಹನದವರಿಗೆ ಸಮಸ್ಯೆಯಾಗುತ್ತಿದ್ದಾರೆ.ಈ ಬಗ್ಗೆಯೂ ಕಾರ್ಯಾಚರಣೆ ನಡೆಸುತ್ತಿದ್ದೇವೆ.ಕಾನೂನು ಪಾಲನೆ ಎಲ್ಲರೂ ಮಾಡಬೇಕು.ಉಲ್ಲಂಘಿಸಿದರೆ ಕ್ರಮ ಅನಿವಾರ್ಯ ಎಂದರು.
ಮಹಿಳೆ ಮತ್ತು ಮಕ್ಕಳ ಭದ್ರತೆ
ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಭದ್ರತೆ ದೃಷ್ಟಿಯಿಂದ ಇಲಾಖೆ ವಿಶೇಷ ಗಮನಹರಿಸುತ್ತಿದೆ. ಯಾವುದೇ ಸಮಸ್ಯೆ ಬಂದರೂ ನೇರವಾಗಿ ಇಲಾಖೆಯ ಗಮನಕ್ಕೆ ತನ್ನಿ.
ಅಗತ್ಯ ಬಿದ್ದಲ್ಲಿ 112 ಗೆ ಕರೆ ಮಾಡಿ. ಕೆಲವೇ ನಿಮಿಷಗಳಲ್ಲಿ ಇಲಾಖೆ ಬರಲಿದೆ. ಸೈಬರ್ ಕ್ರೈಮ್, ಹ್ಯಾಕರ್ಗಳಿಂದ ಹಣ ವರ್ಗಾವಣೆ ಸೇರಿದಂತೆ ಸೈಬರ್ ಕ್ರೈಮ್ ಸಂಬಂಧಿಸಿದಂತೆ 1930ಗೆ ಕರೆಮಾಡಬಹುದು ಎಂದರು.
ಅಕ್ರಮ ಮರಳು ಪಡೆದುಕೊಂಡವರ ಮೇಲು ಕೇಸು
ಪರವಾನಿಗೆ ರಹಿತ ಅಕ್ರಮ ಮರಳನ್ನು ಪಡೆದುಕೊಂಡವರ ಮೇಲು ಇಲಾಖೆ ಕೇಸು ದಾಖಲು ಮಾಡುತ್ತದೆ.ಅಕ್ರಮಗಳಿಗೆ ಯಾವತ್ತೂ ಪ್ರೋತ್ಸಾಹ ನೀಡಬೇಡಿ.ಪರವಾನಿಗೆ ಪಡೆದುಕೊಂಡವರಿಂದ ಮರಳು ಪಡೆದುಕೊಳ್ಳಿ ಎಂದರು.
24*7 ಕೆಲಸ, ವದಂತಿಗಳಿಗೆ ಕಿವಿಕೊಡಬೇಡಿ
ಸಾರ್ವಜನಿಕರ ರಕ್ಷಣೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ 24*7 ಕೆಲಸ ಮಾಡುತ್ತಿದೆ.ಸುಖಾ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಬೇಡಿ ಹಾಗೂ ಆಕ್ಷೇಪಾರ್ಹ ಪೋಸ್ಟ್ ಮಾಡುವುದು,ಫಾರ್ವರ್ಡ್ ಮಾಡುವುದೂ ಅಪರಾಧ.ಯಾವುದೇ ಮುಲಾಜಿಲ್ಲದೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪಾಯಕಾರಿ ತಿರುವು ,ಅಪಘಾತ ವಲಯಗಳ ಗುರುತಿಸುವಿಕೆ
ಸವಣೂರಿನ ಚಾಪಲ್ಲ,ಸರ್ವೆ, ವಿದ್ಯಾರಶ್ಮಿ ಮುಂಭಾಗ ಸೇರಿದಂತೆ ಕೆಲವೆಡೆ ಅಪಾಯಕಾರಿ ತಿರುವುಗಳಿವೆ.ಅಲ್ಲದೆ ಅಪಘಾತ ವಲಯಗಳನ್ನು ಗುರುತಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಎಸೈ ಈರಯ್ಯ ಹೇಳಿದರು.
ಸಾರ್ವಜನಿಕರ ಅಭಿಪ್ರಾಯ
ಶ್ರೀಧರ್ ಗೌಡ ಅಂಗಡಿಹಿತ್ಲು ಮಾತನಾಡಿ ,ರಾತ್ರಿ ಹೊತ್ತು ಕಲೆವೆಡೆ ಅಂಗಡಿಗಳಲ್ಲಿ ಸುಖಾ ಸುಮ್ಮನೆ ಜನ ಸೇರಿಕೊಳ್ಳುವುದು ಕಂಡು ಬರುತ್ತಿದೆ.ಪ್ರಖರ ತೀವ್ರತೆಯ ಲೈಟ್ಗಳನ್ನು ಹಾಕಿ ಕೆಲ ವಾಹನದವರು ಹೋಗುತ್ತಿದ್ದಾರೆ.ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತದೆ.ಪಾಲ್ತಾಡಿಯ ಅಂಕತಡ್ಕದಲ್ಲೂ ಪೊಲೀಸ್ ಜನ ಸಂಪರ್ಕ ಸಭೆ ಮಾಡಿ ಎಂದರು.
ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ಮಾತನಾಡಿ,ಸವಣೂರಿನ ವಿಷ್ಣುಪುರ ,ಪಾಲ್ತಾಡಿಯ ಬಂಬಿಲ ಕ್ರಾಸ್ ಬಳಿ ಹಂಪ್ಸ್ ಅಳವಡಿಕೆ, ಸವಣೂರು ರೈಲ್ವೆ ಕ್ರಾಸಿಂಗ್ ಬಳಿ ಎರಡೂ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ರೈಲ್ವೇ ಇಲಾಖೆಗೆ ಸೂಚನೆ ನೀಡಬೇಕು ಎಂದರು. ಪ್ರವಾಹದಿಂದ ಪಾಲ್ತಾಡಿ ಗ್ರಾಮದ ಬಯಲು ಪ್ರದೇಶ, ಗದ್ದೆಗಳಲ್ಲಿ ಮರಳು ತುಂಬಿಕೊಂಡಿದೆ.ಇದನ್ನು ತೆರವು ಮಾಡಲು ಇಲಾಖೆ ಅವಕಾಶ ನೀಡಬೇಕು ಎಂದರು. ಉತ್ತರಿಸಿದ ಎಸೈ ಅವರು ಈ ಕುರಿತು ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಂಡು ಗಣಿ ಇಲಾಖೆಯ ಅನುಮತಿ ಪಡೆದುಕೊಂಡು ತೆರವು ಮಾಡಿ ಎಂದರು. ಗ್ರಾ.ಪಂ.ಸದಸ್ಯ ಬಾಬು ಎನ್ ಮಾತನಾಡಿ, ಅಟೋ ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಮಿತಿ ಮೀರಿ ತುಂಬಿಸಿಕೊಂಡು ಹೋಗುತ್ತಿದ್ದಾರೆ.ಈ ಕುರಿತು ಕ್ರಮ ಕೈಗೊಳ್ಳಿ ಎಂದರು. ಈ ಕುರಿತು ರಿಕ್ಷಾ ಚಾಲಕರ ಸಭೆ ನಡೆಸಿ ಸೂಚನೆ ನೀಡಲಾಗುವುದು ಎಂದರು.
ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಸವಣೂರಿನಲ್ಲಿ ಗಾಂಜಾ ಸೇವನೆಯ ಘಟನೆಗಳು ನಡೆಯುತ್ತಿದೆ ಈ ಕುರಿತು ಕ್ರಮ ಕೈಗೊಳ್ಳಿ ಎಂದರು. ಎಸೈ ಈರಯ್ಯ ಅವರು ಉತ್ತರಿಸಿ, ಗಾಂಜಾ ಸೇವನೆ ಹಾಗೂ ಮಾರಾಟ ಕಂಡು ಬಂದಲ್ಲಿ ಇಲಾಖೆಯ ಗಮನಕ್ಕೆ ತನ್ನಿ.ಅಲ್ಲದೇ ಈ ಕುರಿತು ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸುತ್ತಿದೆ ಎಂದರು. ಗ್ರಾ.ಪಂ.ಸದಸ್ಯ ರಫೀಕ್ ಎಂ.ಎ. ಮಾತನಾಡಿ,ಗಾಂಜಾ ಪ್ರಕರಣಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಅಕ್ರಮ ಗಾಂಜಾ ಮಾರಾಟ,ಸೇವನೆ ಮಾಡುವವರು ನಮ್ಮ ಮೇಲೆ ದಾಳಿ ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಎಸೈ ಅವರು ,ಇಲಾಖೆಗೆ ಮಾಹಿತಿ ನೀಡಿದವರ ವಿವರ ಗೌಪ್ಯವಾಗಿರುತ್ತದೆ.ಯಾವುದೇ ಅಂಜಿಕೆ ಇಲ್ಲದೆ ಗಮನಕ್ಕೆ ತನ್ನಿ ಎಂದರು. ಗ್ರಾ.ಪಂ.ಸದಸ್ಯ ತಾರಾನಾಥ ಬೊಳಿಯಾಲ ಮಾತನಾಡಿ, ಪಾಲ್ತಾಡಿ ಶಾಲೆಗೂ ಬೀಟ್ ಪೊಲೀಸರು ನಿಯಮಿತವಾಗಿ ಬರುವ ವ್ಯವಸ್ಥೆಯಾಗಬೇಕು ಎಂದರು. ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ,ಸವಣೂರು ಬೀಟ್ ಪೊಲೀಸ್ ಶ್ರೀಧರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಗ್ರಾ.ಪಂ.ಸದಸ್ಯರಾದ ಅಬ್ದುಲ್ ರಝಾಕ್, ಗಿರಿಶಂಕರ ಸುಲಾಯ, ಚೆನ್ನು ಮುಂಡೋತಡ್ಕ, ರಾಜೀವಿ ವಿ ಶೆಟ್ಟಿ, ಭರತ್ ರೈ ಪಾಲ್ತಾಡಿ, ಚಂದ್ರಾವತಿ ಸುಣ್ಣಾಜೆ, ಯಶೋಧಾ ನೂಜಾಜೆ,ಚೇತನಾ ಶಿವಾನಂದ ಪಾಲ್ತಾಡಿ ಮತ್ತು ಗ್ರಾ.ಪಂ.ಸಿಬ್ಬಂದಿಗಳಾದ ಪ್ರಮೋದ್ ಕುಮಾರ್,ದಯಾನಂದ ಮಾಲೆತ್ತಾರು,ಜಯಾ ಕೆ.,ಜಯಶ್ರೀ, ಶಾರದಾ,ಯತೀಶ್ ,ದೀಪಿಕಾ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ಸ್ವಾಗತಿಸಿ,ವಂದಿಸಿದರು.