ಧಾರಾಕಾರವಾಗಿ ಸುರಿದ ಮಳೆಯಿಂದಾಗಿ 6 ಗ್ರಾಮಗಳಿಗೆ ಅಪಾರ ಹಾನಿ- ಇಲ್ಲೆಲ್ಲೂ ಸಮೀಕ್ಷೆ ನಡೆದಿಲ್ಲ, ಜಿಲ್ಲಾಡಳಿತ ನಿಷ್ಕ್ರೀಯ – ಪಂಚಾಯತ್ ಜನಪ್ರತಿನಿಧಿಗಳ ಆರೋಪ

0

ಪುತ್ತೂರು: ಮೇ.30ರಂದು ಸಂಜೆಯಿಂದ ಸುರಿದ ಮಳೆಗೆ ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಗ್ರಾಮದಲ್ಲಿ ತೀವ್ರತರದ ಭೂ ಕುಸಿತ, ಮನೆ ಹಾನಿ, ಕೃಷಿ ಹಾನಿ, ರಸ್ತೆ ಹಾನಿ ಆದರೂ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಗ್ರಾಮಗಳಿಗೆ ತಹಶೀಲ್ದಾರ್, ಸಹಾಯಕ ಕಮೀಷನರ್ ಆಗಲಿ, ಜಿಲ್ಲಾಧಿಕಾರಿಯಾಗಲಿ ಪ್ರಾಕೃತಿಕ ವಿಕೋಪದ ಸಮೀಕ್ಷೆ ನಡೆದಿಲ್ಲ. ಹಾನಿಗೊಳಗಾದ ಜನರಿಗೆ ಪರಿಹಾರ ಕಾರ್ಯವು ನಡೆದಿಲ್ಲ ಎಂದು 6 ಗ್ರಾಮದ ಪಂಚಾಯತ್ ಜನಪ್ರತಿನಿಧಿಗಳು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ಸುರೇಶ್ ಅತ್ರಮಜಲು ಅವರು ಮಾತನಾಡಿ ಈ ಹಿಂದೆ ಕೊಡಗಿನಲ್ಲಿ ಆದ ಪ್ರಾಕೃತಿಕ ವಿಕೋಪವನ್ನೆ ಹೋಲುವ ರೀತಿಯಲ್ಲಿ 5 ಪಂಚಾಯತ್ ವ್ಯಾಪ್ತಿಯಲ್ಲಿನ 6 ಗ್ರಾಮಗಳಲ್ಲಿ ಹಾನಿಯಾಗಿದೆ. ಘಟನೆ ನಡೆದು 5 ದಿನವಾದರೂ ಈ ಗ್ರಾಮಗಳಿಗೆ ತಾಲೂಕಿನ ತಹಶೀಲ್ದಾರ್, ಸಹಾಯಕ ಕಮೀಷನರ್, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿಲ್ಲ. ಕೇವಲ ಪಂಚಾಯತ್ ಸದಸ್ಯರೇ ಪರಿಹಾರ ಕೆಲಸ ಮಾಡಲಾಗುತ್ತಿದೆ. ನಾವೇ ಸಮೀಕ್ಷೆಯನ್ನೂ ಮಾಡಿದಾಗ ಸುಮಾರು ರೂ.25 ಕೋಟಿಗೂ ಮಿಕ್ಕಿ ಹಾನಿ ಈ 5 ಪಂಚಾಯತ್‌ಗಳಲ್ಲಿ ಆಗಿದೆ. ಆದರೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ಪೂರ್ಣ ನಿಷ್ಕ್ರೀಯವಾಗಿದೆ. ಶಾಸಕರು ಕೂಡಾ ಘಟನೆ ನಡೆದು 3 ದಿನದ ನಂತರ ಬೆಳ್ಳಿಪ್ಪಾಡಿಗೆ ಬಂದು ಮಾದ್ಯಮಕ್ಕೆ ಪೋಸ್ ಕೊಡುವ ಕೆಲಸ ಮಾಡಿದ್ದಾರೆ ಎಂದವರು ಆರೋಪಿಸಿದರು.

ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಲಿ:
ಸರಕಾರ ಈ ಭಾಗದ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ತಕ್ಷಣ ಮನೆ ನಾಶ ಆದ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ ರೂ. 2 ಲಕ್ಷ ಪರಿಹಾರ ಘೋಷಣೆ ಮಾಡಬೇಕು. ಕೃಷಿ ಹಾನಿಯಾದ ರೈತರಿಗೆ ಎಕ್ರೆಗೆ ರೂ.2 ಲಕ್ಷ ಪರಿಹಾರ ನೀಡಬೇಕು. ಪಂಚಾಯತ್‌ಗಳಿಗೆ ತಕ್ಷಣ ತಲಾ ರೂ.1 ಕೋಟಿ ಅನುದಾನ ನೀಡಬೇಕು. ರಸ್ತೆ ದುರಸ್ತಿ, ತೋಡು ರಿಪೇರಿ, ಧರೆಯ ಮಣ್ಣು ತೆಗೆಯಲು ಅನುದಾನ ನೀಡಬೇಕು ಎಂದು ನಾವು ರಾಜ್ಯ ಸರಕಾರದ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದು ಸುರೇಶ್ ಅತ್ರಮಜಲು ಹೇಳಿದರು.

ನಾವು ಅಸಹಾಯಕರು:
ಗ್ರಾ.ಪಂನಲ್ಲಿ ತಳಮಟ್ಟದ ಜನಪ್ರತಿನಿಧಿಗಳು ಇರುವುದು. ನಾವು ಅಸಹಾಯಕರು. ಪರಿಹಾರ ಕಾರ್ಯಕ್ಕೆ ಒಂದೊಂದು ಗ್ರಾ.ಪಂ ಗೆ ಕೇವಲ ರೂ.30 ಸಾವಿರ ನೀಡಿದ್ದಾರೆ. ಇದು ಎಲ್ಲಿಗೆ ಸಾಕು? ತಳಮಟ್ಟದ ಅಧಿಕಾರಿಗಳು ಬಂದಿದ್ದಾರೆ. ಆದರೆ ಪರಿಹಾರ ಘೋಷಣೆ ಮಾಡಿಲ್ಲ. ಹಿಂದೆ ಯಡಿಯೂರಪ್ಪ ಸರಕಾರ ಇದ್ದಾಗ ಪ್ರಾಕೃತಿಕ ವಿಕೋಪದಲ್ಲಿ ಹಾನಿಯಾದವರಿಗೆ ತಕ್ಷಣ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಈಗಿನ ಸರಕಾರ ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದು ಸುರೇಶ್ ಅತ್ರಮಜಲು ಆರೋಪಿಸಿದ್ದಾರೆ. ನೆಕ್ಕಿಲಾಡಿ ಆದರ್ಶನಗರ, ಸುಭಾಶ್‌ನಗರಲದಲ್ಲೂ ಕಾಲೋನಿಗಳಿರುವ ಪ್ರದೇಶ ಅಪಾಯದ ಸ್ಥಿತಿಯಲ್ಲಿದೆ ಎಂದು ನೆಕ್ಕಿಲಾಡಿ ಗ್ರಾ.ಪಂ ಉಪಾಧ್ಯಕ್ಷ ಹರೀಶ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಜತ್ತೂರು ಗ್ರಾ.ಪಂ ಸದಸ್ಯ ಗಂಗಾಧರ ಪಿ.ಎನ್, ನೆಕ್ಕಿಲಾಡಿ ಗ್ರಾ.ಪಂ ಸದಸ್ಯ ಪ್ರಶಾಂತ್ ನೆಕ್ಕಿಲಾಡಿ, ಬೆಳ್ಳಿಪ್ಪಾಡಿ ಕೋಡಿಂಬಾಡಿ ಗ್ರಾ.ಪಂ ಸದಸ್ಯ ರಾಮಚಂದ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here