ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭೋತ್ಸವ ಮತ್ತು ಪೋಷಕರ ಸಭೆ ನಡೆಯಿತು.
ಹತ್ತನೇ ತರಗತಿಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿನಿಯರಾದ ಚೈತ್ರ, ಶ್ರೇಯ ವಿ.ಎಸ್, ಗ್ರೀಷ್ಮಾ, ಆಯಿಷಾ ಶಿಜಾ, ಶ್ರೇಯ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ಮಾತನಾಡಿ, ನಮ್ಮ ಸಂಸ್ಥೆಯು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಸ್ಥೆ. ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣವನ್ನು ಬಯಸುವ ಸರ್ವರಿಗೂ ನಮ್ಮಲ್ಲಿ ಮುಕ್ತ ಅಧ್ಯಯನ ಮಾಡಲು ಅವಕಾಶವಿದೆ. ನಮ್ಮ ಸಂಸ್ಥೆಗೆ ಸೇರ್ಪಡೆಗೊಂಡಂತಹ ಎಲ್ಲಾ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಧ್ಯಯನವನ್ನು ಮಾಡಿ ಸಮಾಜದ ಆಸ್ತಿಯಾಗಬೇಕು. ಇದು ನಮ್ಮ ಸಂಸ್ಥೆಯ ಆಶಯ. ನೀವೆಲ್ಲರೂ ಕೂಡ ಈ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದು ಉತ್ತಮ ಭವಿಷ್ಯವನ್ನು ಹೊಂದುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಕಾರಂತ್ರವರು ಸಂಸ್ಥೆಯಲ್ಲಿರುವ ಸೌಲಭ್ಯದ ಕುರಿತಾಗಿ ಮಾಹಿತಿಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ ರವರು ಸಂಸ್ಥೆಯ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಆಡಳಿತ ಮಂಡಳಿಯ ಸದಸ್ಯ ಲಕ್ಷ್ಮಿನಾರಾಯಣ ರಾವ್ ಆತೂರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ವಿವಿಧ ವಿಷಯಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ಉಪನ್ಯಾಸಕ ವಸಂತಕುಮಾರ್ ಡಿ.ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ತನುಜಾ ವಂದಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಚೇತನ್ ಎಂ.ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶಹನಿ ಮತ್ತು ಬಳಗದವರು ಪ್ರಾರ್ಥಿಸಿದರು.