ಸೂಕ್ತ ತನಿಖೆಗೆ ಬಂಟ್ವಾಳ ನಗರ ಪೊಲೀಸರಿಗೆ ಮನವಿ
ಪುತ್ತೂರು:ನಗರ ಸಭಾ ಸದಸ್ಯರಾಗಿದ್ದ ನೆಲ್ಲಿಕಟ್ಟೆ ನಿವಾಸಿ ರಮೇಶ್ ರೈಯವರ ಸಾವಿನಲ್ಲಿ ಸಂದೇಹಗಳಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮೃತರ ಪುತ್ರ ವಿನೀಶ್ರವರು ಬಂಟ್ವಾಳ ನಗರ ಪೊಲೀಸ್ ಇನ್ಸ್ಪೆಕ್ಟರ್ಗೆ ದೂರು ನೀಡಿದ್ದಾರೆ.
ಪುತ್ತೂರು ನಗರ ಸಭೆಯ ಸದಸ್ಯರಾಗಿದ್ದ ರಮೇಶ್ ರೈಯವರ ಮೃತದೇಹ ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿ ತೀರದಲ್ಲಿ ನೀರಿನ ಟಾಂಕಿ(ಜಾಕ್ವೆಲ್)ಯೊಳಗೆ ಪತ್ತೆಯಾಗಿತ್ತು.ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.‘ತಮ್ಮ ತಂದೆ ರಮೇಶ್ ರೈಯವರು ಬಹಳ ದೃಢ ಮನಸ್ಸಿನ ವ್ಯಕ್ತಿಯಾಗಿದ್ದು ಎಲ್ಲರ ಕಷ್ಟ ಸುಖಕ್ಕೆ ಸ್ಪಂದಿಸಿ ಕೈಲಾದ ಸಹಾಯ ಮಾಡುವ ಉತ್ತಮ ಸ್ವಭಾವದ ವ್ಯಕ್ತಿಯಾಗಿದ್ದರು.ನಮಗೆ ತಿಳಿದು ಬಂದ ವಿಚಾರದ ಪ್ರಕಾರ ಮತ್ತು ಪತ್ರಿಕೆಯಲ್ಲಿ ವರದಿಯಾದ ಮಾಹಿತಿಯ ಪ್ರಕಾರ, ಅವರು ಆತ್ಮಹತ್ಯೆ ಮಾಡಿಕೊಂಡಿರುವ ದಿನವೂ ಅವರು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ತೆರಳಿದ್ದರು.ನಮಗೆ ತಿಳಿದಂತೆ ಅವರಿಗೆ ಈ ಹಿಂದೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಹಲವರಿಂದ ತಿಳಿದು ಬಂದಿದೆ. ಅವರಿಗೆ ಯಾವುದೋ ಬೆದರಿಕೆಯ ಕರೆಗಳು ನಿರಂತರವಾಗಿ ಬರುತ್ತಿದ್ದು ಅವರು ಭಯಭೀತರಾಗಿದ್ದರು ಎಂಬ ಖಚಿತ ಮಾಹಿತಿ ಇದೆ.ಈ ನಿಟ್ಟಿನಲ್ಲಿ ಸೂಕ್ತವಾದ ತನಿಖೆಯನ್ನು ನಡೆಸಿ, ಕನಿಷ್ಠ ಒಂದು ತಿಂಗಳಿನ, 9741645252 ಮೊಬೈಲ್ ಕರೆಯ ಸಂಪೂರ್ಣ ವರದಿಯನ್ನು ಪಡೆದುಕೊಂಡು ಪರಿಶೀಲಿಸಿ ಅಂತಹ ಬೆದರಿಕೆ ಕರೆಯನ್ನು ಮಾಡಿದಂತಹ ವ್ಯಕ್ತಿಗಳ ಕೈವಾಡ ಅವರ ಸಾವಿನ ಹಿನ್ನೆಲೆಯಲ್ಲಿ ಇದೆಯೋ ಎಂದು ಪರಿಶೀಲಿಸಿ, ಇದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ವಿನೀಶ್ ರೈಯವರು ದೂರಿನಲ್ಲಿ ವಿನಂತಿಸಿದ್ದಾರೆ.ಮೃತರ ಸಂಬಂಧಿಕರೂ ಆಗಿರುವ ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹರಿಪ್ರಸಾದ್ ನೆಲ್ಲಿಕಟ್ಟೆ ಮತ್ತು ಯೋಗೀಶ್ ರೈ ಮಂಗಳೂರು ಅವರು ದೂರು ಸಲ್ಲಿಕೆ ಸಂದರ್ಭ ಉಪಸ್ಥಿತರಿದ್ದರು.
ವ್ಯಾವಹಾರಿಕವಾಗಿ ಬೆದರಿಕೆ
ಕರೆಗಳು ಬಂದಿರಬೇಕು ನನ್ನ ತಂದೆ ಸಾರ್ವಜನಿಕ ಜೀವನದಲ್ಲಿದ್ದವರು.ಗಟ್ಟಿ ಮನಸ್ಸಿನ ವ್ಯಕ್ತಿತ್ವ ಹೊಂದಿದವರು.ಸಮಾಜದ ಇತರರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದವರು.ಅವರು ಆತ್ಮಹತ್ಯೆ ಮಾಡಿಕೊಳ್ಳುವಂಥ ಮನಸ್ಥಿತಿ ಹೊಂದಿದವರಲ್ಲ.ಅವರು ಮನೆಗಿಂತ ಸಾರ್ವಜನಿಕರ ಸಮಸ್ಯೆಗಳಿಗೇ ಸ್ಪಂದಿಸುತ್ತಿದ್ದವರು.ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವಾಗಿದೆ.ಮಧ್ಯಾಹ್ನ 12 ಗಂಟೆಗೆ ನನಗೆ ಕರೆ ಮಾಡಿದ್ದರು,ಅವರ ಮಾತಿನಲ್ಲಿ ಯಾವುದೇ ಸಂಶಯ ಬಂದಿಲ್ಲ.ವ್ಯಾವಹಾರಿಕವಾಗಿ ಬೆದರಿಕೆ ಕರೆಗಳು ಬಂದಿರಬೇಕು ಎಂದು ರಮೇಶ್ ರೈಯವರ ಪುತ್ರ ವಿನೀಶ್ರವರು ಹೇಳಿದ್ದಾರೆ.
ಹಲವರ ಸಮಸ್ಯೆ ಪರಿಹರಿಸಿದ ವ್ಯಕ್ತಿಗೇ ಹೀಗಾಗಿರುವುದು ಸಂದೇಹಕ್ಕೆ ಕಾರಣ
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದ ಸಾರ್ವಜನಿಕರು ರಮೇಶ್ ರೈಯವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದವರು ಮಧ್ಯಾಹ್ನ 12 ಗಂಟೆಗೆ ಮಗನಿಗೆ ಕರೆ ಮಾಡಿದ್ದರೂ ಅವರ ಮಾತಿನಲ್ಲಿ ಯಾವುದೇ ಸಂಶಯಗಳು ಬಂದಿರಲಿಲ್ಲ.ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು.ಆದರೂ ಅವರು ಮನೆಯಲ್ಲಿ ಅದರ ಬಗ್ಗೆ ತೋರಿಸುತ್ತಿರಲಿಲ್ಲ.ಬಿ.ಸಿ ರೋಡ್ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತಿರುವ ವೇಳೆ ದಾರಿಯಲ್ಲಿ ಯಾರದ್ದೋ ಬೆದರಿಕೆ ಬಂದಿರಬೇಕು.ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ವಾತಾವರಣ ಸೃಷ್ಟಿ ಅಗಿದೆ.ಸಮಾಜದಲ್ಲಿ ಬಡವರ ಸಮಸ್ಯೆಗೆ ಸ್ಪಂದನೆ ನೀಡುತ್ತಿದ್ದ ರಮೇಶ್ ರೈಯವರಂಥ ವ್ಯಕ್ತಿಗಳು ಸಮಾಜದಲ್ಲಿ ವಿರಳ. ಹಲವರ ಸಮಸ್ಯೆಗಳನ್ನು ಪರಿಹರಿಸಿದ ವ್ಯಕ್ತಿಗೇ ಹೀಗಾಗಿರುವುದು ಸಂದೇಹ ಪಡುವಂತಾಗಿದೆ ಎಂದು ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ತಿಳಿಸಿದ್ದಾರೆ.