@ ಸಿಶೇ ಕಜೆಮಾರ್
ಪ್ರಸ್ತುತ ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಆ ಸಮಸ್ಯೆಗಳಿಗೊಂದು ಪರಿಹಾರದ ಜೊತೆಯಲ್ಲಿ ಸರಕಾರಕ್ಕೊಂದು ಮನವಿಯನ್ನು ಹೇಳಹೊರಟಿರುವ ಕನ್ನಡ ಸಿನಿಮಾ ‘ಸ್ಕೂಲ್ ಲೀಡರ್…’ ಸಿನಿಮಾ ರಂಗದಲ್ಲೇ ಬಹಳ ವಿಭಿನ್ನವಾಗಿ ಮೂಡಿಬಂದಿರುವ ಸಿನಿಮಾ ಇದಾಗಿದೆ ಎನ್ನಲು ಬಹಳಷ್ಟು ಕಾರಣಗಳು ಸಿಗುತ್ತವೆ. ಈ ಕಾರಣಗಳನ್ನು ತಿಳಿಯಬೇಕಾದರೆ ನೀವು ಸಿನಿಮಾ ನೋಡಲೇಬೇಕು. ಪುತ್ತೂರಿನವರೇ ಆಗಿರುವ ‘ಪೆನ್ಸಿಲ್ ಬಾಕ್ಸ್’ ಖ್ಯಾತಿಯ ನಿರ್ದೇಶಕ ರಝಾಕ್ ಪುತ್ತೂರುರವರು ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಇಲ್ಲಿ ವಿಶೇಷವಾಗಿದೆ. ಕನ್ನಡ ಸಿನಿಮಾ ರಂಗದಲ್ಲಿರುವ ಟಾಪ್ ನಿರ್ದೇಶಕರ ಪಟ್ಟಿಗೆ ರಝಾಕ್ ಪುತ್ತೂರುರವರು ಕೂಡ ಸೇರುತ್ತಾರೆ ಎಂಬುದು ಚಿತ್ರ ನೋಡಿದ ಮೇಲೆ ಅರ್ಥವಾಗುತ್ತದೆ. ಎರಡೂಕಾಲು ಗಂಟೆಯ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟ ರೀತಿ ಮಾತ್ರ ಅದ್ಭುತವಾಗಿದೆ. ಆರಂಭದಿಂದ ಕೊನೆಯವರೇಗೆ ಎಲ್ಲೂ ಬೋರ್ ಹೊಡೆಸಲ್ಲ, ಎದ್ದುಕೊಂಡು ಹೋಗಿಬಿಡೋಣ ಅನ್ನುವಂತಹ ಸೀನ್ಗಳೇ ಇಲ್ಲ. ಮುಂದೆನಾಗುತ್ತದೆ ಅನ್ನುವ ರೀತಿಯಲ್ಲಿ ಸಿನಿಮಾ ನಮ್ಮನ್ನು ಕೊಂಡೋಗುತ್ತದೆ. ಮನಸ್ಸಿಗೆ ಮುದ ನೀಡುವ ನವಿರು ಹಾಸ್ಯ, ಆಗೊಮ್ಮೆ ಈಗೊಮ್ಮೆ ಕಣ್ಣಂಚಿನಲ್ಲಿ ನೀರು ತರಿಸಬಲ್ಲಂತಹ ದೃಶ್ಯಗಳು, ಪುಟ್ಟ ಮಕ್ಕಳ ತುಂಟಾಟ, ಮುದ್ದಾದ ಮಾತುಗಳು, ಹಿರಿಯ ಕಿರಿಯ ಕಲಾವಿದರ ಸಮಾಗಮ ಎಲ್ಲವೂ ಸಿನಿಮಾದಲ್ಲಿದೆ. ತಮ್ಮ ಬಾಲ್ಯದ ದಿನಗಳನ್ನು ಮತ್ತೆ ನೆನಪಿಗೆ ತರಿಸುವ ಸ್ಕೂಲ್ ಲೀಡರ್ ಎಲ್ಲಾ ವಿಧದಲ್ಲೂ ಗೆದ್ದಿದೆ ಎಂದೇ ಹೇಳಬಹುದು.
ಸಿನಿಮಾದಲ್ಲಿ ಸರಕಾರಿ ಶಾಲೆಗಳ ವಸ್ತುಸ್ಥಿತಿಯನ್ನು ತೆರೆದಿಟ್ಟ ರೀತಿ ಮಾತ್ರ ವಿಭಿನ್ನವಾಗಿದೆ. ಮಕ್ಕಳಿದ್ದರೂ ಶಿಕ್ಷಕರ ಕೊರತೆ, ಪರೀಕ್ಷೆಗೆ ಮುನ್ನ ಪಾಠಗಳನ್ನು ಮುಗಿಸಿಬಿಡಬೇಕು ಎಂದು ಚಡಪಡಿಸುವ ಶಿಕ್ಷಕರು, ಶಿಕ್ಷಕರ ನೇಮಕ ಮಾಡದ ಸರಕಾರ, ಮುಖ್ಯಗುರುಗಳು ಬಿಇಓ ಮೂಲಕ ಅದೆಷ್ಟೇ ಮನವಿ ಮಾಡಿಕೊಂಡರು ಎಲ್ಲವೂ ವ್ಯರ್ಥವಾಗುವ ರೀತಿ, ಪೋಕರಿ ಮಕ್ಕಳನ್ನು ನಿಭಾಯಿಸಲು ಸಾಧ್ಯವಾಗದೆ ಹೆಣಗಾಡುವ ಹಿರಿಯ ಶಿಕ್ಷಕರು, ಅಚ್ಚುಮೆಚ್ಚಿನ ಶಿಕ್ಷಕರ ನಿವೃತ್ತಿ ಇವೆಲ್ಲವೂ ಮನಸ್ಸಿಗೆ ನಾಟುತ್ತವೆ. ಚಿತ್ರದ ಕೊನೆಯಲ್ಲಿ ಶಿಕ್ಷಣ ಮಂತ್ರಿಗಳೇ ಶಾಲೆಗೆ ಭೇಟಿ ಕೊಡುವ ದೃಶ್ಯ ಮಾತ್ರ ಸೂಪರ್. ಆಟ ಪಾಠದ ಜೊತೆಗೆ ಮಕ್ಕಳ ವಯಸ್ಸಿಗೆ ಮೂಡುವ ನವಿರು ಪ್ರೇಮವನ್ನು ಕೂಡ ನಿರ್ದೇಶಕರು ಬಹಳ ಸೊಗಸಾಗಿ ತೋರಿಸಿದ್ದಾರೆ. ಎಲ್ಲಿಯೂ ಯಾವ ಪಾತ್ರಕ್ಕೂ ಒಂದಿಷ್ಟು ಅಪಚ್ಯುತಿ ಬಾರದ ಹಾಗೆ ಸಿನಿಮಾವನ್ನು ಕಟ್ಟಿದ ರೀತಿ ನಿಜಕ್ಕೂ ಸೂಪರ್.
ಸ್ಕೂಲ್ ಲೀಡರ್ ಸಿನಿಮಾದ ಇನ್ನೊಂದು ವಿಶೇಷತೆ ಎಂದರೆ 25 ಶಾಲೆಗಳ ಸುಮಾರು 125 ವಿದ್ಯಾರ್ಥಿಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇಡೀ ಸಿನಿಮಾ ಉಡುಪಿ ಜಿಲ್ಲೆಯ ಕಟಪಾಡಿ ಅನುದಾನಿತ ಪ್ರೌಢ ಶಾಲೆಯೊಂದರಲ್ಲಿ ಶೂಟಿಂಗ್ ಆಗಿದೆ. ಇನ್ನು ಪಾತ್ರಗಳ ಬಗ್ಗೆ ಹೇಳಬೇಕೆಂದರೆ ರಾಘವ ಮಾಸ್ಟ್ರು ಆಗಿ ಅರವಿಂದ ಬೋಳಾರ್ ಅಭಿನಯ, ಪಾದೆಕಲ್ಲು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಹೊಗೆ ಪ್ರಕಾಶ್ ಆಗಿ ಕಾಣಿಸಿಕೊಳ್ಳುವ ಬೋಜರಾಜ್ ವಾಮಂಜೂರು, ಶಾಲಾ ಮುಖ್ಯಗುರುಗಳಾಗಿ ಅಭಿನಯಿಸಿದ್ದ ದೀಪಕ್ ರೈ ಪಾಣಾಜೆರವರುಗಳ ಪಾತ್ರ ಸಿನಿಮಾ ಮುಗಿದ ಮೇಲೂ ನೆನಪಲ್ಲಿ ಉಳಿಯುತ್ತದೆ. ಅತಿಥಿ ಪಾತ್ರದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ರಮೇಶ್ ಭಟ್ ಖುಷಿ ಕೊಡುತ್ತಾರೆ. ಪೋಕರಿ ಮಕ್ಕಳನ್ನು ತಿದ್ದಿ ತೀಡಿ ಬುದ್ದಿ ಕಲಿಸುವ ಪಿಇಟಿ ಶಿಕ್ಷಕರಾಗಿ ಸುದರ್ಶನ್ ಶಂಕರ್, ಅಟೆಂಡರ್ ಆಗಿ ನಾಗೇಶ್ ಕಾಮತ್ ಕಟಪಾಡಿ ಗಮನ ಸೆಳೆಯುತ್ತಾರೆ. ಇನ್ನು ಮಕ್ಕಳಲ್ಲಿ ‘ಪೆನ್ಸಿಲ್ ಬಾಕ್ಸ್’ ಖ್ಯಾತಿಯ ಪುತ್ತೂರಿನ ದೀಕ್ಷಾ ಡಿ.ರೈ, ದೃಶ ಕೊಡಗು, ಶ್ರೀಜಯ್ ಬಿ.ವಿ ಉತ್ತಮ ಅಭಿನಯ ನೀಡಿದ್ದಾರೆ.

ಇಡೀ ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್ ಛಾಯಾಗ್ರಹಣ. ಮಕ್ಕಳನ್ನು ಮುದ್ದು ಮುದ್ದಾಗಿ ತೋರಿಸುವಲ್ಲಿ ಮತ್ತು ಪ್ರತಿಯೊಂದು ದೃಶ್ಯ ಕೂಡ ಅದ್ಭುತವಾಗಿ ಮೂಡಿಬರುವಲ್ಲಿ ಮೋಹನ್ ಪಡ್ರೆಯವರ ಛಾಯಾಗ್ರಹಣ ಕೆಲಸ ಮಾಡಿದೆ. 2019 ನೇ ಸಾಲಿನ ಅತ್ಯುತ್ತಮ ಗೀತೆ ರಚನೆಕಾರ ರಾಜ್ಯ ಪ್ರಶಸ್ತಿ ಪುರಸ್ಕೃತ,ನಿರ್ದೇಶಕ ರಝಾಕ್ ಪುತ್ತೂರುರವರ ಸಾಹಿತ್ಯ ಖುಷಿ ಕೊಡುತ್ತದೆ. ಅದಕ್ಕೆ ಜಯಕಾರ್ತಿಯವರ ಸಂಗೀತ ಇಂಪು ನೀಡಿದೆ. ಸಚಿನ್ ರಾಮ್ ರವರ ಸಂಕಲನ ಸೂಪರ್, ಆಶಿಕ್ ಅಂಚನ್ರವರ ನೃತ್ಯ ನಿರ್ದೇಶನ ಖುಷಿ ಕೊಡುತ್ತದೆ. ಅಕ್ಷತ್ ವಿಟ್ಲ ಸಹ ನಿರ್ದೇಶನ, ಬಾಲಕೃಷ್ಣ ರೈ ಕುಕ್ಕಾಡಿ ಹಂಚಿಕೆದಾರರಾಗಿದ್ದಾರೆ. ಸನ್ ಮ್ಯಾಟ್ರಿಕ್ಸ್ ಬ್ಯಾನರಿನಲ್ಲಿ ತಯಾರಾದ ಕೆ.ಸತ್ಯೇಂದ್ರ ಪೈ ನಿರ್ಮಾಣ ಹಾಗೇ ಸುದರ್ಶನ್ ಶಂಕರ್ ಮತ್ತು ಎಂ.ಎಂ ವಿಮಲ್ ಈ ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ.
ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ
ಕಂಪ್ಲೀಟ್ ಫ್ಯಾಮಿಲಿ ಜೊತೆಯಾಗಿ ಕೂತುಕೊಂಡು ನೋಡಬಹುದಾದ ಒಂದು ಸಿನಿಮಾ ಸ್ಕೂಲ್ ಲೀಡರ್. ಚಿತ್ರದುದ್ದಕ್ಕೂ ಬರುವ ಸಂಭಾಷಣೆಗಳು ಮನಸ್ಸಿಗೆ ಮುಟ್ಟುತ್ತವೆ. ರಝಾಕ್ ಪುತ್ತೂರುರವರ ನಿರ್ದೇಶನ ಮತ್ತು ಸಂಭಾಷಣೆಗೆ ತಲೆ ಬಾಗಲೇ ಬೇಕಾಗಿದೆ. ಕನ್ನಡದ ಕಟ್ಟಾಭಿಮಾನಿಯಾಗಿ ಮತ್ತೊಮ್ಮೆ ಕೇಳಬೇಕಿನಿಸುವ ಸಂಭಾಷಣೆಗಳು ಚಿತ್ರದಲ್ಲಿವೆ. ಶಾಲಾ ಮಂತ್ರಿಮಂಡಲವನ್ನು ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ನಿರ್ದೇಶಕರು ಇಲ್ಲಿ ತೋರಿಸಿದ್ದಾರೆ. ಸಭಾಧ್ಯಕ್ಷರು, ಮುಖ್ಯಮಂತ್ರಿ, ಮಂತ್ರಿಗಳು, ವಿರೋಧ ಪಕ್ಷದ ಲೀಡರ್ ಎಲ್ಲರನ್ನೂ ಸೇರಿಸಿಕೊಂಡು ಪ್ರಜಾಪ್ರಭುತ್ವದ ಪಾಠವನ್ನು ಮಕ್ಕಳಿಗೆ ತಿಳಿಸುವಂತಹ ಶಾಲಾ ಸದನವನ್ನು ತೋರಿಸಿದ್ದಾರೆ. 10 ನೇ ಕ್ಲಾಸಿಗೆ ಬಂದ ತಕ್ಷಣ ಮೀಸೆಯ ಮೇಲೆ ಕೈ ಹಾಕುವ ಹುಡುಗ, ಕೆನ್ನೆಗೆ ಪ್ಯಾರ್ ಆಂಡ್ ಲವ್ಲಿ ಹಚ್ಚುವ ಹುಡುಗಿ ಇವರಿಂದ ಹಿಡಿದು ದೇಶ ರಕ್ಷಣೆಯ ಸೈನಿಕನಾಗುವ ತನಕ ಸಿನಿಮಾದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಒಟ್ಟಿನಲ್ಲಿ ನಿರ್ದೇಶಕ ರಝಾಕ್ ಪುತ್ತೂರು ಗೆದ್ದಿದ್ದಾರೆ.
ಭಾರತ್ ಸಿನೆಮಾಸ್ನಲ್ಲಿ ಭರ್ಜರಿ ಪ್ರದರ್ಶನ
ಮೇ.30 ರಂದು ಬಿಡುಗಡೆಗೊಂಡ ‘ಸ್ಕೂಲ್ ಲೀಡರ್’ ಪುತ್ತೂರು ಜಿ.ಎಲ್ 1 ಮಾಲ್ನಲ್ಲಿರುವ ಭಾರತ್ ಸಿನೆಮಾಸ್ನಲ್ಲಿ ಯಶಸ್ವಿ 2 ನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿ ದಿನ ಬೆಳಿಗ್ಗೆ 11, ಮಧ್ಯಾಹ್ನ 1.30 ಹಾಗೂ ಸಂಜೆ 7.45 ಕ್ಕೆ ಪ್ರದರ್ಶನ ಕಾಣುತ್ತಿದೆ.