ರಾಷ್ಟ್ರೀಕೃತ ಬ್ಯಾಂಕ್ ರೀತಿಯಲ್ಲಿ ನಮ್ಮ ಸಂಸ್ಥೆ ಕೆಲಸ ನಿರ್ವಹಿಸುತ್ತದೆ – ಕೆ. ಜೈರಾಜ್ ಬಿ. ರೈ
ಬೆಳ್ಳಾರೆ: ನಮ್ಮ ಸೊಸೈಟಿಯಲ್ಲಿ 2004ರಲ್ಲಿ ಎನ್.ಪಿ.ಎ. ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದೇವೆ. ಒಂದು ಸಂಸ್ಥೆಯು ಅಭಿವೃದ್ಧಿ ಹೊಂದಬೇಕಾದರೆ ಉತ್ತಮ ಆಡಳಿತ ಮಂಡಳಿ, ಸಿಬ್ಬಂದಿಗಳು ಹಾಗೂ ಗ್ರಾಹಕರ ಪಾತ್ರ ಮುಖ್ಯ. ರಾಷ್ಟ್ರೀಕೃತ ಬ್ಯಾಂಕ್ ನ ಹಾಗೆ ವ್ಯವಹಾರವನ್ನು ಮಾಡಿಕೊಂಡು ಬರುತ್ತಿದ್ದು, 2030ಕ್ಕೆ ರೂ. 2000 ಕೋಟಿ ವ್ಯವಹಾರವನ್ನು ನಡೆಸಿ ರೂ. 20 ಕೋಟಿ ಲಾಭವನ್ನು ಪಡೆಯುವ ಗುರಿಯನ್ನು ಹೊಂದಿದ್ದೇವೆ ಎಂದು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ಹೇಳಿದರು.

ಅವರು ಜೂ. 8ರಂದು ಬೆಳ್ಳಾರೆಯ ಬಿ. ನರಸಿಂಹ ಜೋಶಿ ಮಾಲಕತ್ವದ ಪ್ರಸಾದ್ ಟೆಕ್ಸ್ ಟೈಲ್ಸ್ ನ ಕಟ್ಟಡದಲ್ಲಿ ಉದ್ಘಾಟನೆಗೊಂಡ ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ 26ನೇ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯರಾದ, ಕೊಳ್ತಿಗೆ ಪ್ರಾ.ಕೃ.ಪ.ಸ. ಸಂಘದ ಸ್ಥಾಪಕಾಧ್ಯಕ್ಷರಾದ ಪಟೇಲ್ ನಾರಾಯಣ ರೈ ಪಾಲ್ತಾಡು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಒಂದು ಸಂಸ್ಥೆ ವಾರ್ಷಿಕವಾಗಿ ಶೇ. 25 ಡಿವಿಡೆಂಟ್ ಕೊಡುತ್ತಿದೆ ಎಂದಾದರೆ ಸಂಸ್ಥೆ ಯಾವ ರೀತಿ ಬೆಳೆದುಬಂದಿದೆ ಎಂಬುದು ತಿಳಿಯುತ್ತದೆ. ಬೆಳ್ಳಾರೆಯ ಜನತೆ ಸಂಸ್ಥೆ ಮತ್ತಷ್ಟು ಬೆಳೆಯುವಲ್ಲಿ ಸಹಕಾರ ನೀಡಿ ಎಂದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ಎನ್. ಮನ್ಮಥ ಪ್ರಥಮ ನಗದನ್ನು ಸ್ವೀಕರಿಸಿದರು. ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ನಮಿತಾ ಎಲ್ ರೈ ಭದ್ರತಾ ಕೋಶ ಉದ್ಘಾಟಿಸಿದರು. ಭಾರತೀಯ ವೈದ್ಯಕೀಯ ಸಂಘ (ಐಎಂಎ), ಪುತ್ತೂರು ಶಾಖೆಯ ಅಧ್ಯಕ್ಷ ಡಾ| ನರಸಿಂಹ ಶರ್ಮ ಕಾನಾವು ಕಂಪ್ಯೂಟರ್ ಉದ್ಘಾಟಿಸಿದರು. ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ
ರಾಜೀವಿ ಆರ್. ರೈ ಪ್ರಥಮ ಉಳಿತಾಯ ಖಾತೆಯನ್ನು ಉದ್ಘಾಟಿಸಿದರು. ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪನ್ನೆಗುತ್ತು ಸುರೇಶ್ ಕುಮಾರ್ ಶೆಟ್ಟಿ ಪ್ರಥಮ ನಿರಖು ಠೇವಣಿಯ ಸರ್ಟಿಫಿಕೇಟ್ ನೀಡಿದರು. ಕಟ್ಟಡ ಮಾಲಕರಾದ ಬಿ. ನರಸಿಂಹ ಜೋಶಿ ಪ್ರಥಮ ಆರ್.ಡಿ ಖಾತೆನ್ನು ನೀಡಿದರು. ಸಂಸ್ಥೆಯ ನಿರ್ದೇಶಕ ವಿಠಲ್ ಪಿ ಶೆಟ್ಟಿ ಪ್ರಥಮ ಸಾಲಪತ್ರ ವಿತರಿಸಿದರು.
ಸೊಸೈಟಿ ನಿರ್ದೇಶಕರಾದ ಕೆ ಸೀತಾರಾಮ ರೈ ಸವಣೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ ಅವಿಭಜಿತ ದ.ಕ. ಜಿಲ್ಲೆಯಲ್ಲಿ 25% ಡಿವಿಡೆಂಟ್ ಕೊಡುವ ಸಂಸ್ಥೆಗಳಲ್ಲಿ ರಾಮಕೃಷ್ಣ ಸೊಸೈಟಿ ಕೂಡ ಒಂದು. ಸಂಸ್ಥೆಯ ಠೇವಣಾತಿ 590 ಕೋಟಿ ಮೀರಿದ್ದು, ವಾರ್ಷಿಕ ರೂ.1100 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ರೂ. 16.29 ಕೋಟಿ ಲಾಭಗಳಿಸಿದೆ. ಸಹಕಾರ ಮಾಣಿಕ್ಯ ಪ್ರಶಸ್ತಿಯನ್ನು ಪಡೆದ ಮೊದಲ ಮತ್ತು ಏಕೈಕ ಸಂಸ್ಥೆಯಾಗಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಮೂಡಿಬಂದಿದೆ ಎಂದರು. ಸೊಸೈಟಿ ನಿರ್ದೇಶಕ ಕುಂಬ್ರ ದಯಾಕರ ಆಳ್ವ ವಂದಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ಭಟ್ ಮುಗುಳಿ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ನಿರ್ದೇಶಕರುಗಳಾದ ಪಿ.ಬಿ. ದಿವಾಕರ ರೈ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಹಾಗೂ ಡಾ| ಬಿ. ಸಂಜೀವ ರೈ, ಮಹಾಪ್ರಬಂಧಕರಾದ ಗಣೇಶ್ ಜಿ.ಕೆ, ಬೆಳ್ಳಾರೆ ಶಾಖಾ ವ್ಯವಸ್ಥಾಪಕರಾದ ಚಂದ್ರಹಾಸ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.