ಪುತ್ತೂರು: ಗ್ರಾಮ ಪಂಚಾಯತ್ ಬನ್ನೂರು, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ವಿವೇಕಾನಂದ ಪದವಿ ಪೂರ್ವ ಕಾಲೇಜು, ಮತ್ತು ಗ್ರಾಮ ವಿಕಾಸ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಕಳೆದ ಆರು ವರ್ಷಗಳಿಂದ ಬನ್ನೂರು ಗ್ರಾ.ಪಂನ ಹಳೆ ಕೊಠಡಿಯ ಮೇಲಂತಸ್ಥಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಯುರ್ವೇದ ಉಚಿತ ಚಿಕಿತ್ಸಾ ಶಿಬಿರದ ಕೇಂದ್ರವು ಸಾರ್ವಜನಿಕರ ಅನುಕೂಲಕ್ಕಾಗಿ ಜೂ.9ರಂದು ಕೆಳ ಅಂತಸ್ಥಿತಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ ಎಂ ಕೃಷ್ಣ ಭಟ್ ಮಾತನಾಡಿ, ಗ್ರಾಮಗಳು ಅಭಿವೃದ್ಧಿ, ಸ್ವಾವಲಂಬಿಯಾದಾಗ ಭಾರತ ಶಕ್ತಿಶಾಲಿಯಾಗಲಿದೆ. ಗ್ರಾಮಗಳು ಸದೃಢ ಆದಾಗ ದೇಶ ಸದೃಢವಾಗಲಿದೆ. ಈ ಹಿನ್ನೆಲೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ 80 ಕಡೆ 80 ವಿವಿಧ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದ್ದು ಅವುಗಳ ಮುಖಾಂತರ ಒಂದೊಂದು ಶಿಕ್ಷಣ ಸಂಸ್ಥೆಗಳು ಒಂದೊಂದು ಗ್ರಾಮಗಳನ್ನು ಆಯ್ಕೆ ಮಾಡಿ ಪರಿಸರ, ಕುಡಿಯುವ ನೀರು ಹಾಗೂ ಆರೋಗ್ಯ ಮೊದಲಾದ ಗ್ರಾಮ ವಿಕಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. 2019ರಲ್ಲಿ ಬನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಉಚಿತ ಆಯುರ್ವೇದ ಚಿಕಿತ್ಸೆ ಶಿಬಿರ ಪ್ರಾರಂಭಿಸಿದ್ದು ಗ್ರಾಮದಲ್ಲಿ ಜನರಲ್ಲಿ ಆರೋಗ್ಯ ಜಾಗೃತಿಗಾಗಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ. ಇದಕ್ಕೆ ಗ್ರಾ.ಪಂ ಆಡಳಿತ ಮಂಡಳಿ, ಗ್ರಾಮಸ್ಥರ ಸಹಕಾರ ದೊರೆತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಎನ್. ಮಾತನಾಡಿ, ಎಲ್ಲರ ಸಲಹೆ ಸೂಚನೆ ಪಡೆದುಕೊಂಡು ಉಚಿತ ಚಿಕಿತ್ಸಾ ಶಿಬಿರವನ್ನು ಸ್ಥಳಾಂತರಗೊಳಿಸಲಾಗಿದೆ. ಪ್ರತಿ ಸೋಮವಾರ ಆಯುರ್ವೇದ ಉಚಿತ ಚಿಕಿತ್ಸೆಗಳು ನಡೆಯುತ್ತಿದ್ದ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಬನ್ನೂರು ಗ್ರಾ.ಪಂ ಪಿಡಿಓ ಚಿತ್ರಾವತಿ, ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ನ ಸಂಚಾಲಕ ಗೋವಿಂದ ಪ್ರಕಾಶ್ ಸಾಯ, ಪ್ರಾಂಶುಪಾಲ ಡಾ.ಗುರುರಾಜ್ ಎಂ.ಪಿ., ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ., ಪ್ರಾಂಶುಪಾಲ ಡಾ.ದೇವಿಚರಣ್ ರೈ, ವಿವೇಕಾನಂದ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ.ರೂಪಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬನ್ನೂರು ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯ ಶ್ರೀನಿವಾಸ ಪೆರ್ವೋಡಿ ವಂದಿಸಿದರು. ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ನ ಸಹ ಪ್ರಾಧ್ಯಾಪಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ ಸದಸ್ಯರಾದ ರಮಣಿ ಡಿ ಗಾಣಿಗ, ಜಯ ಎ., ಗಿರಿಧರ ಗೌಡ ಪಂಜಿಗುಡ್ಡೆ, ಹರಿಣಾಕ್ಷಿ ಡಿ., ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಗೌಡ, ಗೀತಾ ಕೊಡಂಗೆ, ವಿಮಲ, ಲೆಕ್ಕ ಸಹಾಯಕಿ ಜಯಂತಿ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಸದಸ್ಯರು ಪ್ರಾರ್ಥಿಸಿದರು.
ಶಿಬಿರದಲ್ಲಿರುವ ಸೌಲಭ್ಯಗಳು:
ಶಿಬಿರದಲ್ಲಿ ಸಾಮಾನ್ಯ ಖಾಯಿಲೆಗಳಾದ ಶೀತ, ಜ್ವರ, ಕೆಮ್ಮು, ಅಜೀರ್ಣ, ಮಲಬದ್ಧತೆ, ಸಾಮಾನ್ಯ ಚರ್ಮದ ಖಾಯಿಲೆಗಳು, ಮೂತ್ರ ಸಂಬಂಧಿ ರೋಗಗಳು, ಸ್ತ್ರಿ ರೋಗಗಳು ಸೇರಿದಂತೆ ಇನ್ನಿತರ ಸಾಮಾನ್ಯ ರೋಗಗಳಿಗೆ ಆರ್ಯುರ್ವೇದದ ಉಚಿತ ಚಿಕಿತ್ಸೆ, ಸಲಹೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ. ಸರಕಾರಿ ರಜೆ ಹೊರತು ಪಡಿಸಿ ಪ್ರತಿ ಸೋಮವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ತನಕ ಕೇಂದ್ರದಲ್ಲಿ ಸೇವೆ ದೊರೆಯಲಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.