
ಉಪ್ಪಿನಂಗಡಿ: ಮಳೆ ಹಾನಿಯಿಂದ ಸಮಸ್ಯೆಗೊಳಗಾದವರಿಗೆ ಸರಕಾರದ ಮೂಲಕ ತುರ್ತು ಪರಿಹಾರ ಒದಗಿಸಲು ಶಾಸಕರ ಸೂಚಿಸಿದರೂ ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಮೀನಾ- ಮೇಷ ಎಣಿಸುವ ಮೂಲಕ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಉಪ್ಪಿನಂಗಡಿ ಗ್ರಾ.ಪಂ. ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ಸಭೆಯಲ್ಲಿ ಕೇಳಿ ಬಂತು.
ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ. ಸದಸ್ಯ ಅಬ್ದರ್ರಹ್ಮಾನ್ ಕೆ., ವಾರದ ಹಿಂದೆ ಸುರಿದ ಭಾರಿ ಮಳೆಗೆ ಹಲವು ಕಡೆಗಳಲ್ಲಿ ಧರೆಗಳು ಕುಸಿತಕ್ಕೊಳಗಾಗಿದ್ದು, ಹಲವು ಮನೆಗಳು ನಾಶವಾಗಿವೆ. ಅವರಿಗೆ ಸರಕಾರದಿಂದ ಸಿಗುವ 10 ಸಾವಿರ ತುರ್ತು ಪರಿಹಾರವನ್ನು ತಕ್ಷಣವೇ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಅಶೋಕ್ ಕುಮಾರ್ ರೈಯವರು ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ತುರ್ತು ಪರಿಹಾರ ನೀಡುವಲ್ಲಿ ಮೀನಾ- ಮೇಷ ಎಣಿಸುತ್ತಿದ್ದಾರೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು, ಮಳೆಯಿಂದ ಮನೆ ಹಾನಿಗೊಂಡು ಹಲವು ಕುಟುಂಬಗಳಿಗೆ ಮನೆಯಲ್ಲಿ ಉಳಿದುಕೊಳ್ಳಲು ಅಸಾಧ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅಧಿಕಾರಿಗಳು ಅವರಿಗೆ ಯಾವುದೇ ಪರಿಹಾರ ಒದಗಿಸಿಲ್ಲ ಎಂದರು.
ನೆಡ್ಚಿಲ್ನಲ್ಲಿ ಮನೆ ಮೇಲೆ ವಾಲಿದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಭೆಗೆ ತಿಳಿಸಿದ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ತೆರವುಗೊಳಿಸದಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ನಡೆಸುವ ಭರವಸೆ ನೀಡಿದರು. ಮನೆ ಹಾನಿಗೊಳಗಾದವರಿಗೆ ಪರಿಹಾರ ಒದಗಿಸುವ ಕುರಿತಂತೆ ತಾಲೂಕು ದಂಡಾಧಿಕಾರಿಗಳಿಗೆ ನಷ್ಟವನ್ನು ಅಂದಾಜಿಸುವ ಪಟ್ಟಿ ಒದಗಿಸಿ ಮಂಜೂರಾತಿಗೆ ಪ್ರಯತ್ನಿಸುತ್ತಿರುವುದಾಗಿ ಚಂದ್ರ ನಾಯ್ಕ ತಿಳಿಸಿದರು.
ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಮಾತನಾಡಿ, ಮಳೆಗಾಲದಲ್ಲಿ ಧರೆ ಕುಸಿಯುವ ಭೀತಿ ಹೆಚ್ಚಿದ್ದು, ಯಾರ ಮನೆ ಪಕ್ಕ ಅಪಾಯದ ಸ್ಥಿತಿಯಲ್ಲಿ ಧರೆಗಳಿದ್ದರೆ ಅಂತಹುಗಳ ಮಾಹಿತಿ ನೀಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರಲ್ಲದೆ, ಅಪಾಯದಂಚಿನಲ್ಲಿರುವ ಮನೆಗಳ ಕುರಿತೂ ಮಾಹಿತಿ ಒದಗಿಸಿ ಅಂತಹ ಮನೆಯವರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಪ್ರತಿ ವಾರ್ಡ್ ಗಳಲ್ಲಿ ಅಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡುತ್ತಿದ್ದು, ಅವರು ಸಮಸ್ಯೆಗಳನ್ನು ಗಮನಕ್ಕೆ ತಂದರೆ ಪರಿಗಣಿಸಲಾಗುವುದು.
ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಆರಂಭಿಸಿದ್ದಾಗಿ ನೋಡಲ್ ಅಧಿಕಾರಿ ಗಣಪತಿ ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಅಬ್ದುಲ್ ರಶೀದ್, ಉಷಾ, ಶೋಭಾ, ಜಯಂತಿ, ಧನಂಜಯ ನಟ್ಟಿಬೈಲು, ನೆಬಿಸಾ, ವನಿತಾ, ರುಕ್ಮಿಣಿ, ಇಬ್ರಾಹಿಂ, ಗ್ರಾಮಕರಣಿಕ ಜಂಗಪ್ಪ, ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ಶೇಖರ ವಂದಿಸಿದರು.