ಉಪ್ಪಿನಂಗಡಿ: ಡೆಂಗ್ಯೂ ಜ್ವರ ಕಾಡಿದ ಸಂಬಂಧ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ರಕ್ತ ಪರೀಕ್ಷೆ ಮಾಡಿಲ್ಲವೆಂದು ಆರೋಪಿಸಿ ಧ್ವನಿ ಮುದ್ರಿತ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣದಲ್ಲಿ ಯುವಕನೋರ್ವ ವೈದ್ಯಾಧಿಕಾರಿಯವರಲ್ಲಿ ಕ್ಷಮೆಯಾಚಿಸಿದ ಘಟನೆ ವರದಿಯಾಗಿದೆ.
ಧ್ವನಿ ಮುದ್ರಿತ ಸಂದೇಶದಲ್ಲಿ ’ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಯಾರೂ ಹೋಗಬಾರದೆಂದೂ, ತನ್ನ ಸಹೋದರನಿಗೆ ಜ್ವರ ಬಂದ ಕಾರಣಕ್ಕೆ ರಕ್ತ ಪರೀಕ್ಷೆ ಮಾಡಿದಾಗ ಅದು ವೈರಲ್ ಜ್ವರವೆಂದು ತಿಳಿಸಿದ್ದರು. ಜ್ವರ ಉಲ್ಭಣಗೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯೂ ಎಂದು ತಿಳಿದು ಬಂದಿದೆ. ಇಲ್ಲಿನ ಆಸ್ಪತ್ರೆಯ ಸಿಬ್ಬಂದಿಯು ನಿರ್ಲಕ್ಷ್ಯ ವಹಿಸಿದ್ದಾರೆಂದು ’ ಆರೋಪಿಸಲಾಗಿತ್ತು. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ಸತ್ಯಾಸತ್ಯತೆಯನ್ನು ಕೇಳಿದಾಗ, ಸಂಬಂಧಿತ ವ್ಯಕ್ತಿಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗಿದೆ. ಮಾತ್ರವಲ್ಲದೆ ಅವರನ್ನು ದಾಖಲಿಸಿ ಔಷಧೋಪಚಾರ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಯವರು ಸ್ಪಷ್ಟನೆ ನೀಡಿದ್ದರು. ಮಾತ್ರವಲ್ಲದೆ ಪ್ರಕರಣದ ಬಗ್ಗೆ ಸಾರ್ವಜನಿಕರಿಗೆ ತಪ್ಪು ಅಭಿಪ್ರಾಯ ಮೂಡಿಸಿದ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ಸಂದೇಶ ರವಾನಿಸಿದ ಯುವಕನ ಮೇಳೆ ಕಾನೂನು ಕ್ರಮಕ್ಕೆ ಮುಂದಾದಾಗ, ಸಂದೀಪ್ ಎಂಬ ಯುವಕ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿ ಕ್ಷಮಾಪಣಾ ಪತ್ರವನ್ನು ಬರೆದು ಕೊಟ್ಟಿರುತ್ತಾನೆಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ ತಿಳಿಸಿದ್ದಾರೆ.