ಉಪ್ಪಿನಂಗಡಿ: ಸರಕಾರಿ ವ್ಯವಸ್ಥೆಯೊಂದು ನಿಷ್ಕ್ರಿಯತೆಗೆ ಒಳಗಾಯಿತೆಂದರೆ ಜನ ಸಾಮಾನ್ಯರ ಬದುಕು ಹೇಗೆ ದುಸ್ತರವಾಗಬಲ್ಲದು ಎನ್ನುವುದಕ್ಕೆ ಮೇ 30 ರಂದು ಸುರಿದ ಪ್ರಳಯಾಂತಕಾರಿ ಮಳೆಯ ಸಂತ್ರಸ್ತರ ಅತಂತ್ರ ಬದುಕೇ ಸಾಕ್ಷಿ. ಘಟನೆ ನಡೆದು 12ದಿನ ಸಂದರೂ ನಯಾ ಪೈಸೆಯ ಸಹಾಯಹಸ್ತವಿಲ್ಲ. ಪರಿಹಾರ ವಿತರಣೆಯ ಮಾತೇ ಇಲ್ಲ.

ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಅತ್ತಾಜೆ ಎಂಬಲ್ಲಿನ ಮನೆಯಿದು. ಪತಿಯನ್ನು ಕಳೆದುಕೊಂಡು ಮೂವರು ಮಕ್ಕಳನ್ನು ಸಾಕಿ ಸಲಹುತ್ತಿರುವ ಗೀತಾ ಎಂಬಾಕೆಯ ಮನೆಯ ಸ್ಥಿತಿ ಕಂಡಾಗ ಹೃದಯವೇದನೆಯಾಗುತ್ತಿದೆ. ಮಗ ಇನ್ನೇನು ದುಡಿಯಲು ಆರಂಭಿಸಿದ ಎನ್ನುವಾಗ ದುಡಿಮೆಯ ಸ್ಥಳದಲ್ಲಿ ವಾಹನ ಅಪಘಾತಕ್ಕೆ ಸಿಲುಕಿ ದೇಹ ಝರ್ಜರಿತವಾಗಿ ಗಾಯಗೊಂಡು ಚಿಕಿತ್ಸೆಯಲ್ಲಿ ಇರುವಾಗಲೇ ಪ್ರಾಕೃತಿಕ ವಿಕೋಪ ಎದುರಾಗಿದೆ. ರಾತ್ರಿ ಮನೆ ಮಂದಿ ಮನೆಯಲ್ಲಿ ಇರುವಾಗಲೇ ಗುಡ್ಡ ಜರಿತದ ಶಬ್ದ ಕೇಳಿ ಎಚ್ಚೆತ್ತು ಪರಿಶೀಲಿಸುವ ವೇಳೆ ಗುಡ್ಡ ಜರಿದು ಮನೆಗಪ್ಪಳಿಸಿ ಮನೆಯ ಹಿಂಬದಿ ಗೋಡೆ ಮುಂಭಾಗದ ಕೋಣೆಗೆ ಬಂದು ಬಿದ್ದಿತ್ತು. ಗೋಡೆ ಬಿದ್ದ ಕಾರಣಕ್ಕೆ ಹಿಂಭಾಗದ ಹಂಚಿನ ಛಾವಣಿಯು ತುಂಡರಿಸಲ್ಪಟ್ಟು ಇಡೀ ಮನೆಯೇ ಹಾನಿಗೀಡಾಗಿತ್ತು. ಮನೆಯ ಅಡುಗೆ ಕೋಣೆ, ಬಚ್ಚಲು ಮನೆ, ಎಲ್ಲವೂ ನಾಶಗೊಂಡ ಕಾರಣ ಇಡೀ ಕುಟುಂಬ ಅತಂತ್ರ ಸ್ಥಿತಿಗೆ ಸಿಲುಕಿತ್ತು. ಮಲಗಲೂ ಸ್ಥಳವಿಲ್ಲದ ಈ ಸ್ಥಿತಿಯಲ್ಲಿ ಮನೆ ಮಂದಿ ಪರಿಚಯಸ್ಥರ ಮನೆಗೆ ಹೋಗಿ ಮಲಗುವ ಅಸಹಾಯಕತೆ ಈ ಕುಟುಂಬದ್ದಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಪಂಚಾಯತ್ ಅಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಿರ್ಗಮಿಸಿದ್ದಾರೆ. ನಿರ್ಗಮಿಸುವ ವೇಳೆ ಈ ಮನೆಯಲ್ಲಿ ವಾಸ್ತವ್ಯ ಅಪಾಯಕಾರಿಯಾಗಿರುವುದರಿಂದ ವಾಸ್ತವ್ಯವನ್ನು ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ. ಭೇಟಿ ನೀಡಿ ನಿರ್ಗಮಿಸಿದ ಅಧಿಕಾರಿಗಳು ಘಟನೆ ಘಟಿಸಿ ಹತ್ತು ದಿನಗಳಾದರೂ ಪರಿಹಾರ ಕಾರ್ಯದತ್ತ ಗಮನಿಸದೇ ಇರುವುದು ಸಂತ್ರಸ್ತರ ನರಳಾಟವನ್ನು ನಿರಂತರಗೊಳಿಸಿದೆ.
ಎಲ್ಲವೂ ಮಾತಿನಲ್ಲೇ ಉಳಿಯುವುದಾದರೆ ಕೃತಿಯಲ್ಲಿ ಆಗುವುದು ಯಾವಾಗ ?
ಈ ಬಾರಿಯ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಪ್ರಾಕೃತಿಕ ವಿಕೋಪದ ಸಮಯದಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರ ಧನವನ್ನು ವಿತರಿಸಬೇಕು. ಮನೆ ಹಾನಿಗೀಡಾದವರಿಗೆ ಗರಿಷ್ಠ ಪರಿಹಾರ ಒದಗಿಸಲು ಕಂದಾಯ ಇಲಾಖಾಧಿಕಾರಿಗಳು ಹೃದಯವೈಶಾಲ್ಯತೆಯಿಂದ ವರದಿ ತಯಾರಿಸಬೇಕೆಂದು ಸೂಚಿಸಿದ್ದರು. ಆದರೆ ಆಡಳಿತ ಪಕ್ಷದ ಶಾಸಕರ ಮಾತಿಗೆ ಅಧಿಕಾರಿ ವರ್ಗದಿಂದ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.