ಪುತ್ತೂರು: ಗುರುವಾರದಂದು ಬೆಂಗಳೂರಿನಲ್ಲಿ ನಾಲ್ವರು ವಿವಿಧ ಸಚಿವರನ್ನು ಶಾಸಕ ಅಶೋಕ್ ರೈ ಭೇಟಿಯಾಗಿ ವಿವಿಧ ಕಾಮಗಾರಿಗಳಿಗೆ ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ.
ಗೃಹಸಚಿವ ಪರಮೇಶ್ವರ್ ಭೇಟಿ: ಗೃಹ ಸಚಿವ ಡಾ. ಎಚ್ ಜಿ ಪರಮೇಶ್ವರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಪುತ್ತೂರಿನ ಹೊಸ ಮಹಿಳಾ ಪೊಲೀಸ್ ಠಾಣೆಗೆ ಒಂದು ಕೋಟಿ ರೂ. ಮಂಜೂರಾಗಿದ್ದು, ಅದನ್ನು ಶೀಘ್ರ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡುವಂತೆ ಮನವಿ ಮಾಡಿದರು. ಈಗ ಇರುವ ಮಹಿಳಾ ಪೊಲೀಸ್ ಠಾಣಾ ಕಟ್ಟಡವನ್ನು ತೆರವು ಮಾಡಿದ ಬಳಿಕ ದೇವಸ್ಥಾನದ ಅಭಿವೃದ್ದಿ ಕಾರ್ಯಕ್ಕೂ ಚಾಲನೆ ನೀಡಬೇಕಾಗಿದ್ದು, ಠಾಣೆ ಹೊಸ ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆಯೂ ಮನವಿ ಮಾಡಿದರು.

ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ: ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರನ್ನು ಭೇಟಿಯಾದ ಶಾಸಕರು ವಿಟ್ಲದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಅನುದಾನ ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ವಿಟ್ಲ ಭಾಗದ ಜನತೆಯ ಬಹುಕಾಲದ ಬೇಡಿಕೆಯಾದ ಅಂಬೇಡ್ಕರ್ ಭವನಕ್ಕೆ ಒಂದು ಕೋಟಿ ಅನುದಾನ ಮಂಜೂರಾಗಿದ್ದು, ಅದನ್ನು ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸುವಂತೆ ಮನವಿ ಮಾಡಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್: ಕಾರ್ಮಿಕ ಸಚಿವರಾದ ಎಚ್ ಸಿ ಮಹದೇವಪ್ಪ ಅವರನ್ನು ಭೇಟಿಯದ ಶಾಸಕರು ಪುತ್ತೂರಿಗೆ ಕಾರ್ಮಿಕರ ವಸತಿ ಶಾಲೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಕಾರ್ಮಿಕರ ವಸತಿ ಶಾಲೆಗೆ ಈಗಾಗಲೇ ಜಾಗವನ್ನು ತನ್ನ ಕ್ಷೇತ್ರದಲ್ಲಿ ಗುರುತಿಸಲಾಗಿದ್ದು, ಈ ಕಾರಣಕ್ಕೆ ಪುತ್ತೂರಿಗೆ ವಸತಿ ಶಾಲೆಯನ್ನು ಮಂಜೂರು ಮಾಡಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ: ಮುಜರಾಯಿ ಹಾಗೂ ಸಾರಿಗೆ ಇಲಾಖಾ ಸಚಿವ ರಾಮಲಿಂಗಾಚರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ರೂ.10 ಲಕ್ಷ ಅನುದಾನ ಮಂಜೂರಾಗಿದ್ದು, ಅದೇ ರೀತಿ ಕಡಬ ತಾಲೂಕು ಕುದ್ಮಾರು ಗ್ರಾಮದ ಪಂಚಲಿಂಗೇಶ್ವರ ಕೇಪುಳೇಶ್ವರ ದೇವಸ್ಥಾನಕ್ಕೆ 25 ಲಕ್ಷ ಅನುದಾನ ಮಂಜೂರುಗೊಳಿಸಿದ ಸಚಿವರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಶಿವನಾಥ ರೈ ಮೇಗಿನಗುತ್ತು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜತ್ತಪ್ಪ ರೈ ಮತ್ತು ಸದಸ್ಯರು, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಗ್ಯಾರಂಟಿ ಸಮಿತಿಯ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಮೆಸ್ಕಾಂ ಸಮಿತಿಯ ಚಂಧ್ರಶೇಖರ ಕಲ್ಲಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.