ಶ್ರೀ ಮಡಿಯಾಲ ನಾರಾಯಣ ಭಟ್ ಉನ್ನತ ಶಿಕ್ಷಣ ಸಂಸ್ಥೆಗೆ ಭೂಮಿ ಪೂಜೆ

0

ಪುತ್ತೂರು: ಜಾಗತಿಕ ಮಾನವೀಯ ಸೇವಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಅಳಿಕೆ ಗ್ರಾಮದ ಮಡಿಯಾಲದಲ್ಲಿ ಶ್ರೀ ನಾರಾಯಣ ಭಟ್ ಉನ್ನತ ಶಿಕ್ಷಣ ಸಂಸ್ಥೆಗೆ ಭೂಮಿ ಪೂಜೆ ಕಾರ್ಯಕ್ರಮವು ಜೂ.12ರಂದು ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಸ್ವಂತ ಸ್ಥಳದಲ್ಲಿ ನೆರವೇರಿತು.

ಸದ್ಗುರು ಶ್ರೀ ಮಧುಸೂದನ ಸಾಯಿಯವರು ಭೂಮಿ ಪೂಜೆಯನ್ನು ನೆರವೇರಿಸಿ, ಸ್ಥಳೀಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವ ಸದುದ್ದೇಶವನ್ನು ಹೊಂದಿದ್ದು ಮುಂದಿನ ವರ್ಷದಿಂದ ಕಾರ್ಯರೂಪಕ್ಕೆ ಬರುವಂತೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಶಿಕ್ಷಣ ಜೊತೆಗೆ ಇನ್ನಿತರ ಡಿಗ್ರಿ ಕೋರ್ಸುಗಳನ್ನು ಪ್ರಾರಂಭಿಸಿ ಯೂನಿವರ್ಸಿಟಿ ಕ್ಯಾಂಪಸ್ ಮಾಡಲಾಗುವುದು. ಶ್ರೀ ಸತ್ಯಸಾಯಿ ಮಾನವಾಭ್ಯುದಯ ವಿಶ್ವವಿದ್ಯಾನಿಲಯ, ಮುದ್ದೇನಹಳ್ಳಿಯ ವತಿಯಿಂದ ಈ ಉನ್ನತ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವುದಾಗಿಯೂ ತಿಳಿಸಿದರು.ಈ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಫೀಸು ಇಲ್ಲದೆ ಸಂಪೂರ್ಣವಾಗಿ ಉಚಿತವಾಗಿಯೇ ದಾಖಲಾತಿ ಮಾಡಿ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್, ಬಿಂದು ಫ್ಯಾಕ್ಟರಿಯ ಮಾಲಕರಾದ ಸತ್ಯಶಂಕರ್ ಭಟ್ ದಂಪತಿ ಉಪಸ್ಥಿತರಿದ್ದರು. ಶ್ರೀ ಸತ್ಯಸಾಯಿ ಮಾನವಾಭ್ಯುದಯ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿಯಾಗಿದ್ದ ಬಿ.ಎಸ್ ನರಸಿಂಹ ಮೂರ್ತಿಯರು ಹಾಜರಿದ್ದರು. ಸ್ಥಳೀಯ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಹಿರಿಯರಾದ ಲೋಕಪ್ಪ ಗೌಡ, ಕಾನ ಈಶ್ವರ ಭಟ್, ಗೋವಿಂದ ಪ್ರಕಾಶ್, ಸುಬ್ರಾಯ ಪೈ ವಿಟ್ಲ, ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಸ್ತುತ 60 ದೇಶಗಳಲ್ಲಿ ಉಚಿತ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕತೆ ಕ್ಷೇತ್ರಗಳಲ್ಲಿ ಅಗಾಧವಾದ ಸೇವೆಗಳನ್ನು ಸಲ್ಲಿಸುತ್ತಾ ಬಂದಿರುವ ಸದ್ಗುರು ಶ್ರೀ ಮಧುಸೂದನ ಸಾಯಿಯವರು ‘ಒಂದು ವಿಶ್ವ – ಒಂದು ಕುಟುಂಬ’ ತತ್ತ್ವದಡಿ ಕೋಟ್ಯಾಂತರ ಜನಗಳ ಬಾಳಿಗೆ ಬೆಳಕಾಗಿದ್ದಾರೆ. ಶ್ರೀ ಮಡಿಯಾಲ ನಾರಾಯಣ ಭಟ್ ಉನ್ನತ ಶಿಕ್ಷಣ ಸಂಸ್ಥೆಗೆ ತಮ್ಮ ಸ್ವಂತ ಭೂಮಿಯನ್ನೇ ನೀಡಿದ ಶ್ರೀ ಮಡಿಯಾಲ ಸುರೇಶ್ ಭಟ್ ದಂಪತಿಗಳು ಈ ಬೃಹತ್ ಯೋಜನೆಗೆ ನೀಡಿರುವುದನ್ನು ಸ್ಮರಿಸಿಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here