ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿ ಚಟುವಟಿಕಾಧಾರಿತ ಶಿಶು ಶಿಕ್ಷಣ ಹಾಗೂ ಬುನಾದಿ ಶಿಕ್ಷಣದ ಬಗ್ಗೆ ಎರಡು ದಿನಗಳ ಜಿಲ್ಲಾ ಮಟ್ಟದ ಕಾರ್ಯಾಗಾರವು ಸಂಪನ್ನಗೊಂಡಿತು.
ವಿದ್ಯಾಭಾರತಿ ಕರ್ನಾಟಕದೊಂದಿಗೆ ಸಂಲಗ್ನಗೊಂಡ 44 ವಿದ್ಯಾಮಂದಿರಗಳ ಸಹಶಿಕ್ಷಕರಿಗೆ ಕಾರ್ಯಾಗರದ ಪ್ರಥಮ ದಿನದ ಉದ್ಘಾಟನೆ ನೆರವೇರಿಸಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಂ ಕೃಷ್ಣ ಭಟ್ ಇವರು ’ವ್ಯಕ್ತಿ ಜೀವನದ ಪ್ರಮುಖ ಘಟ್ಟದ ಅನುಭವ ಜನ್ಯ ಕಲಿಕೆ ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ದಿಶೆಯಿಂದ ನಿರಂತರ ತರಬೇತು ಶಿಕ್ಷಕರ ಕಾರ್ಯಕುಶಲತೆಯನ್ನು ವೃದ್ಧಿಸುತ್ತದೆ’ ಎಂದರು. ದಕ್ಷಿಣ ಮಧ್ಯಕ್ಷೇತ್ರದ ಶಿಶುಶಿಕ್ಷಣ ಚಟುವಟಿಕಾ ಪಠ್ಯ ವಿಷಯದ ಬಗ್ಗೆ ತರಬೇತು ನೀಡಿದರು.
ಶಾಲಾಧ್ಯಕ್ಷ ರಮೇಶ್ಚಂದ್ರ ಎಂ ಇವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಾಗಾರದ ಎರಡನೇಯ ದಿನ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರೊಂದಿಗೆ ’ಬುನಾದಿ ಶಿಕ್ಷಣದ ಪ್ರಸ್ತುತದ ಸವಾಲುಗಳು ಹಾಗೂ ಸಾಧ್ಯತೆಗಳ’ ಬಗ್ಗೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಇವರು ಸಂವಾದ ನಡೆಸಿ ಸಮಾಪನ ಮಾತುಗಳನ್ನಾಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಕಾರ್ಯನಿರ್ವಹಣಾಧಿಕಾರಿಗಳಾದ ವೆಂಕಟರಮಣ ರಾವ್, ಶಿಕ್ಷಣ ಸಂಯೋಜಕರಾದ ರಘುರಾಜ್ ಉಬರಡ್ಕ, ಶಾಲಾ ಸಂಚಾಲಕರಾದ ವಸಂತ ಸುವರ್ಣ, ಕೋಶಾಧಿಕಾರಿಗಳಾದ ಅಶೋಕ ಕುಂಬ್ಳೆ, ಪ್ರಾಥಮಿಕ ವಿಭಾಗದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಸಹಶಿಕ್ಷಕಿ ನಮಿತಾ ಹಾಗೂ ಸ್ವಾತಿಯವರು ಕಾರ್ಯಕ್ರಮ ನಿರೂಪಿಸಿದರು.