ಪುತ್ತೂರು: ಶ್ರೀ ಸಾಯಿ ಕಲಾ ಯಕ್ಷ ಬಳಗ ಡಾಕ್ಟರ್ ಶಿವರಾಮ ಕಾರಂತ ಬಾಲವನ ಪುತ್ತೂರು ತಂಡದಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಹಿರಿಯರ ನೆನಪು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸರ್ವೇ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀ ರಾಮ ಕಲ್ಲೂರಾಯರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬೆಂಗಳೂರು ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶಾರದ ಭಜನಾ ಮಂದಿರದ ಗೌರವ ಅಧ್ಯಕ್ಷರು ಸೀತಾರಾಮ ರೈ, ದಿ. ಡಾ. ಶ್ರೀಧರ ಭಂಡಾರಿ ಅವರ ಪುತ್ರಿ ಡಾ. ಅನಿಲಾ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದ ಡಾ. ತಾರಾನಾಥ ವರ್ಕಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ತಾರಾನಾಥ ವರ್ಕಾಡಿ ಇವರು ದಿವಂಗತ ಡಾ. ಶ್ರೀಧರ ಭಂಡಾರಿ ಪುತ್ತೂರು ಹಾಗು ದಿವಂಗತ ಗಂಗಾಧರ ಜೋಗಿ ಪುತ್ತೂರು ಇವರ ನೆನಪುಗಳನ್ನು ಹಂಚಿಕೊಂಡರು. ಬಳಿಕ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ತಾರಾನಾಥ ವರ್ಕಾಡಿ ಯವರನ್ನು ಸನ್ಮಾನಿಸಲಾಯಿತು. ಪುತ್ತೂರು ಶಾರದಾ ಭಜನಾ ಮಂದಿರದ ಕಾರ್ಯದರ್ಶಿ ಜಯಂತ್ ಉರ್ಲಾಂಡಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಕಾರ್ಯಕ್ರಮವನ್ನು ಶ್ರೀ ಸಾಯಿ ಕಲಾ ಯಕ್ಷ ಬಳಗದ ಪ್ರೇಮಾ ಕಿಶೋರ್ ಪ್ರಸ್ಥಾಪಿಸಿ, ಡಾ. ಅನನ್ಯ ಲಕ್ಷ್ಮಿ ಸಂದೀಪ್ ನಿರೂಪಣೆ ಮಾಡಿದರು. ಸಂದೇಶ್ ದೀಪ್ ರೈ ಕಲ್ಲಂಗಳ ಪ್ರಾರ್ಥನೆ ಮಾಡಿದರು. ಸಾಯಿಕಲಾ ಯಕ್ಷ ಬಳಗದ ಜ್ಯೋತಿ ಅಶೋಕ್ ಕೆದಿಲ ಧನ್ಯವಾದ ಸಮರ್ಪಿಸಿದರು. ತದನಂತರ ವೀರಮಣಿ ಕಾಳಗ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಹೇಮ ಸ್ವಾತಿ ಕುರಿಯ್ಯಾಜೆ, ರಚನಾ ಚಿದ್ಗಲ್, ಚೆಂಡೆ ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಹರಿಪ್ರಸಾದ್ ಶೆಟ್ಟಿ ಇಚ್ಲಂಪಾಡಿ, ಚಕ್ರತಾಳ ಚೈತಲಿ ಕಾಂಚೋದ್, ಮುಮ್ಮೇಳದಲ್ಲಿ ಶತ್ರುಘ್ನ ಜ್ಯೋತಿ ಅಶೋಕ್ ಕೆದಿಲ, ವೀರಮಣಿ ಡಾಕ್ಟರ್ ಅನನ್ಯ ಲಕ್ಷ್ಮಿ, ಹನುಮಂತ ಆಗಿ ತಾರಾನಾಥ ವರ್ಕಾಡಿ, ಈಶ್ವರ ಪ್ರೇಮಾ ಕಿಶೋರ್, ರುಕ್ಮಾಂಗ ಚೈತಾಲಿ, ಶ್ರೀ ರಾಮ ಜ್ಯೋತಿ ಅಶೋಕ್ ಭಾಗವಹಿಸಿದ್ದರು.
