ಪುತ್ತೂರು: ಮಾಲಕನ ಅರಿವಿಗೆ ಬಾರದೆ ಚಾಲಕ ಲಾರಿ ಅಡವಿಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ಬಗ್ಗೆ ಲಾರಿ ಮಾಲಕ ಅಡವು ಪಡೆದುಕೊಂಡವರಲ್ಲಿ ವಿಚಾರಿಸಲು ಹೋದಾಗ ಅವರಿಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಚಿಕ್ಕಮುಡ್ನೂರು ಗ್ರಾಮದ ಫರ್ವೀಜ್ ಎಂ.ಎಂಬವರ ಮಾಲಕತ್ವದ ಲಾರಿಯನ್ನು ಅದರ ಚಾಲಕ ಅಸಾಸುದ್ದೀನ್ ಫೈರೋಜ್ ಎಂಬವರು ಮಾ.29ರಂದು ಸರಕು ಸಾಗಾಣಿಕೆಯ ಉದ್ದೇಶದಿಂದ ಕೊಂಡೊಯ್ದು ಬಳಿಕ ಲಾರಿಯನ್ನು ಮತ್ತು ಬಾಡಿಗೆಯ ಹಣ ನೀಡಿರಲಿಲ್ಲ. ಈ ಬಗ್ಗೆ ಲಾರಿ ಮಾಲಕ ಪ್ರಶ್ನಿಸಿದಾಗ ಲಾರಿಯನ್ನು ಮಂಗಳೂರು ನೀರುಮಾರ್ಗದ ಕಿರಣ್ ಯಾನೆ ನೆಸ್ಲೆ ಕಿರಣ್ ಎಂಬವರಲ್ಲಿ ಅಡವು ಇರಿಸಿದ್ದೇನೆ ಎಂದು ಉತ್ತರಿಸಿದ್ದರು. ಅದರಂತೆ ಲಾರಿ ಮಾಲಕ ಫರ್ವೀಜ್ ಮತ್ತು ಅವರಿಗೆ ವಾಹನ ಖರೀದಿಗೆ ಸಾಲ ನೀಡಿದ ಸಂಸ್ಥೆಯವರು ಏ.3ರಂದು ಕಿರಣ್ ಅವರಲ್ಲಿ ಈ ಕುರಿತು ವಿಚಾರಿಸಿದಾಗ ಕಿರಣ್ ಅವರು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಲಾರಿ ಮಾಲಕ ಫರ್ವೀಜ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಲಾರಿ ಚಾಲಕ ಅಸಾಸುದ್ದೀನ್ ಫೈರೋಜ್ ಮತ್ತು ಕಿರಣ್ ಯಾನೆ ನೆಸ್ಲೆಕಿರಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.