ನೆಲ್ಯಾಡಿ: ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜೂ.20ರಂದು ಹುಂಡಿ (ಕಾಣಿಕೆ ಡಬ್ಬಿ) ಎಣಿಕೆ ವೇಳೆ ಬ್ಯಾಂಕ್ ಸಿಬ್ಬಂದಿಗಳೇ ಗೋಲ್ಮಾಲ್ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೂ.21ರಂದು ದೇವಸ್ಥಾನಕ್ಕೆ ಕೆನರಾ ಬ್ಯಾಂಕ್ನ ಹಿರಿಯ ಅಧಿಕಾರಿಗಳಿಬ್ಬರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕ್ಗೆ ಜಮೆ ಮಾಡುವ ನಿಟ್ಟಿನಲ್ಲಿ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಕೊಕ್ಕಡ ಶಾಖೆಯ ಇಬ್ಬರು ಸಿಬ್ಬಂದಿಗಳು ತಲಾ 100 ನೋಟುಗಳಂತೆ ಮಾಡಿದ್ದ ಬಂಡಲ್ಗಳನ್ನು ದೇವಸ್ಥಾನದ ಸಿಬ್ಬಂದಿಗಳು ಮರು ಎಣಿಕೆ ಮಾಡುವ ವೇಳೆ ಬಹುತೇಕ ಬಂಡಲ್ಗಳಲ್ಲಿ ಹೆಚ್ಚುವರಿ ನೋಟು ಇರುವುದು ಪತ್ತೆಯಾಗಿತ್ತು. ನೋಟು ಒದ್ದೆಯಾಗಿರುವುದರಿಂದ ಬಂಡಲ್ಗಳಲ್ಲಿ ಹೆಚ್ಚುವರಿ ನೋಟು ಬಂದಿದೆ ಎಂದು ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದರೂ ಬ್ಯಾಂಕ್ ಸಿಬ್ಬಂದಿಗಳು ಗೋಲ್ಮಾಲ್ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ನ ಪುತ್ತೂರು ರೀಜನಲ್ ಹಿರಿಯ ಅಧಿಕಾರಿಗಳಿಬ್ಬರು ಹಾಗೂ ಕೊಕ್ಕಡ ಶಾಖೆಯ ವ್ಯವಸ್ಥಾಪಕರು ಜೂ.೨೧ರಂದು ದೇವಸ್ಥಾನಕ್ಕೆ ಭೇಟಿ ನೀಡಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಸಿಬ್ಬಂದಿಗಳ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಪರಿಶೀಲನೆ ನಡೆಸಿ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಜರಾಯಿ ಇಲಾಖೆಗೆ ಪತ್ರ:
ದೇವಸ್ಥಾನದ ಹುಂಡಿ ಎಣಿಕೆ ವೇಳೆ ಬ್ಯಾಂಕ್ ಸಿಬ್ಬಂದಿಗಳು ಮಾಡಿರುವ ಗೋಲ್ಮಾಲ್ ಬಗ್ಗೆ ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಸುದ್ದಿಗೆ ತಿಳಿಸಿದ್ದಾರೆ.