ಪೆರಾಬೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಜೂ.23ರಂದು ಬೆಳಿಗ್ಗೆ ಪೆರಾಬೆ ಗ್ರಾ.ಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಜಿ.ಪಂ.ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಅವರು, ಕಾಂಗ್ರೆಸ್ ಸರಕಾರದ ನೀತಿಯಿಂದ ಬಡವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸರಕಾರದ ವಿರುದ್ಧ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಿಜೆಪಿ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೇಂತಾರು ಮಾತನಾಡಿ, ರಾಜ್ಯ ಸರಕಾರ ಕೃಷಿಕರ ಅಕ್ರಮ-ಸಕ್ರಮ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯನ್ನು ತಡೆಹಿಡಿದು ಅನ್ಯಾಯವೆಸಗಿದೆ ಎಂದು ಆರೋಪಿಸಿದರು. ಬಿಜೆಪಿ ದ.ಕ.ಜಿಲ್ಲಾ ಎಸ್.ಟಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಸ್. ಪೂವಪ್ಪ ನಾಯ್ಕ ಶಾಂತಿಗುರಿ ಸಂದರ್ಭೋಚಿತವಾಗಿ ಮಾತನಾಡಿದರು.
ಪೆರಾಬೆ ಶಕ್ತಿ ಕೇಂದ್ರದ ಪ್ರಮುಖ್ ಚಂದ್ರಶೇಖರ ಪೂಂಜ, ಕುಂತೂರು ಶಕ್ತಿ ಕೇಂದ್ರದ ಪ್ರಮುಖ್ ಸುಭೀಕ್ಷ ರತ್ನ ರೈ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಹಾಗೂ ಸದಸ್ಯರು, ಕುಂತೂರು-ಪೆರಾಬೆ ಬೂತ್ ಸಮಿತಿಯ ಅಧ್ಯಕ್ಷರಾದ ಶ್ರೀನಾಥ್ ಗೌಡ ಮಾಪಾಲ, ನಿತೀಶ್ ಏನಾಜೆ, ಹೇಮಚಂದ್ರ ಸುರುಳಿ, ಕಾರ್ಯದರ್ಶಿಗಳು, ಪೆರಾಬೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮೋಹನ್ ದಾಸ್ ರೈ ಪರಾರಿ, ಬೇಬಿ ಸಿ ಪಾಟಳಿ, ಸುಗುಣ ದಯಾನಂದ, ಗಂಗಾರತ್ನ ವಸಂತ್, ಪಕ್ಷದ ಪ್ರಮುಖರಾದ ಜನಾರ್ದನ್ ಶೆಟ್ಟಿ ಕಲ್ಲಡ್ಕ, ಸುಭಾನು ರೈ ಮರುವಂತಿಲ, ರಾಧಾಕೃಷ್ಣ ರೈ ಮನವಳಿಕೆ ಹಾಗೂ ಪಕ್ಷದ ಅನ್ಯಾನ್ಯ ಜವಾಬ್ದಾರಿ ವಹಿಸಿರುವ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.