ಪುತ್ತೂರು: ದ. ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಾಣಿಯನ್ ಸಮುದಾಯದ ಯುವ ಜನತೆಯ ಅಪೇಕ್ಷೆಯಂತೆ ಪೆರ್ಣೆ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಯುವಕರಿಗಾಗಿ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಗಾಣಿಗ ಪ್ರೀಮಿಯರ್ ಲೀಗ್ (ಜಿಪಿಎಲ್-2025)ಕ್ರಿಕೆಟ್ ಪಂದ್ಯಾಟದ ಟೈಟಲ್ ಅನಾವರಣ, ಲೋಗೋ ಬಿಡುಗಡೆ ಹಾಗೂ ಬ್ಯಾನರ್ ಅನಾವರಣ ಕಾರ್ಯಕ್ರಮಗಳು ಜೂ.22ರಂದು ಪುತ್ತೂರಿನ ‘ದಿ ಪುತ್ತೂರು ಕ್ಲಬ್’ ನ ಸಭಾಂಗಣದಲ್ಲಿ ನಡೆಯಿತು.

ಪಂದ್ಯಾಟದ ಟೈಟಲ್ ಅನಾವರಣಗೊಳಿಸಿದ ದುಬೈ ಖ್ಯಾತ ಉದ್ಯಮಿ ಶಿವಶಂಕರ್ ನೆಕ್ರಾಜೆ ಮಾತನಾಡಿ, ನಮ್ಮ ಸಮುದಾಯದ ಯುವಕರನ್ನು ಒಗ್ಗೂಡಿಸಲು ಕ್ರಿಕೆಟ್ ಪಂದ್ಯಾಟ ಉತ್ತಮ ಕಾರ್ಯಕ್ರಮವಾಗಿದೆ. ಸಮುದಾಯ ಬಾಂಧವರಾದ ನಾವೆಲ್ಲ ಒಂದೇ ಎಂಬ ಮನೋಭಾವನೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮುದಾಯವನ್ನು ಬೆಳೆಸಿಕೊಂಡು ಜೊತೆಯಾಗಿ ಬೆಳೆಯೋಣ ಎಂದ ಅವರು ಜಿಪಿಎಲ್ ಪಂದ್ಯಕೂಟದ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
8 ತಂಡಗಳ ಲೀಗ್ ಮಾದರಿಯ ಪಂದ್ಯಾಟ:
ಜಿಪಿಎಲ್ ಕ್ರಿಕೆಟ್ ಪಂದ್ಯಾಟವು ಲೀಗ್ ಮಾದರಿಯ ಪಂದ್ಯಾಟವಾಗಿದೆ. ಇದರಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಮೊದಲು ನೋಂದಾಯಿಸಿದ 120 ಸಮುದಾಯ ಬಾಂಧವರಿಗೆ ಈ ಪಂದ್ಯಾಟದಲ್ಲಿ ಆಡುವ ಅವಕಾಶವನ್ನು ಕಲ್ಪಿಸಲಾಗುವುದು. ಅ.26ರಂದು ನಡೆಯಲಿರುವ ಈ ಪಂದ್ಯಾಟದಲ್ಲಿ ಹರೀಶ್ ದೇರೆಬೈಲು ಮಾಲಕತ್ವದ ಪಾಟಾಳಿ ಚಾಲೆಂಜರ್ಸ್ ಮಂಗಳೂರು, ರಮೇಶ್ ಬಾಕಿತ್ತಿಮಾರ್ ಮಾಲಕತ್ವದ ವಾಣಿಯನ್ ವಾರಿಯರ್ಸ್ ಪುತ್ತೂರು, ದಿನೇಶ್ ಕುದ್ದುಪದವು ಮಾಲಕತ್ವದ ಪಾಟಾಳಿ ಹರಿಕೇನ್ಸ್ ಕುದ್ದುಪದವು, ಚಂದ್ರಶೇಖರ ಉದ್ದಂತಡ್ಕ ಮಾಲಕತ್ವದ ಪಾಟಾಳಿ ಪ್ಯಾಂಥರ್ಸ್ ಸುಳ್ಯ, ಗುರುರಾಜ್ ಸಿ.ಎಸ್ ಮತ್ತು ರದೀಶ್ ಸೀತಂಗೋಳಿ ಮಾಲಕತ್ವದ ವಾಣಿಯನ್ ಬ್ಲಾಸ್ಟರ್ರ್ಸ್ ಸೀತಂಗೋಳಿ, ಉದಯ ಕುಮಾರ್ ದಂಬೆ ಮಾಲಕತ್ವದ ಗಾಣಿಗ ಟೈಟಾನ್ಸ್ ವಿಟ್ಲ, ಶ್ರೀನಿವಾಸ ಎನ್ ಮತ್ತು ರಾಜೇಶ್ ಎನ್ ಮಾಲಕತ್ವದ ಝೂಯಿಸ್ ಗಾಣಿಗ ಸ್ಟ್ರೈಕರ್ರ್ಸ್ ಮಂಗಳೂರು ಹಾಗೂ ಸುನೀಲ್ ವಾಟೆ ಮಾಲಕತ್ವದ ವಾಣಿಯನ್ ಇಲೆವನ್ ಪೆರ್ಲ ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ ಎಂದು ಸಂಘದ ಕ್ರೀಡಾ ಕಾರ್ಯದರ್ಶಿ ರವಿಚಂದ್ರ ಭಟ್ರಕುಮೇರು ಮಾಹಿತಿ ನೀಡಿದರು.
ನಿವೃತ್ತ ರಬ್ಬರ್ ಬೋರ್ಡ್ ಅಧಿಕಾರಿ ಬಾಲಕೃಷ್ಣ ಮಂಗಳೂರು, ಪಂದ್ಯಕೂಟದ ಲೋಗೋ ಬಿಡುಗಡೆಗೊಳಿಸಿದರು. ಈಶ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಯಂ.ಗೋಪಾಲಕೃಷ್ಣ ಬ್ಯಾನರ್ ಅನಾವರಣಗೊಳಿಸಿದರು. ದ.ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ. ರಾಮ ಮುಗ್ರೋಡಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಶಂಕರ ಪಾಟಾಳಿ ಮುಕ್ರಂಪಾಡಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿರು. ಪಿಡಬ್ಲ್ಯುಡಿ ಗುತ್ತಿಗೆದಾರ ಬಾಲಚಂದ್ರ ಆಡ್ಕಾರ್, ಏಪಲ್ ಕಂಪನಿಯ ಸಾಫ್ಟವೇರ್ ಇಂಜಿನಿಯರ್ ದೀಕ್ಷಿತ್ ಬೆಳ್ಳಾರೆ, ಅಂತರಾಷ್ಟ್ರೀಯ ಕ್ರೀಡಾಪಟು ಚಂದ್ರಶೇಖರ ಕುಕ್ಕುಪುಣಿ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಮತ್ತು ತೀರ್ಪುಗಾರ್ತಿ ವನಿತಾ ಕಲ್ಮಡ್ಕ, ಪುತ್ತೂರು ವಾಣಿಯನ್/ಗಾಣಿಗ ಸಮುದಾಯ ಸೇವಾಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ವಿದ್ಯಾನಿಧಿ ಯೋಜನೆಯಡಿ ಸಮುದಾಯದ ಅರ್ಹ 11 ವಿದ್ಯಾರ್ಥಿಗಳಿಗೆ ಜಿಲ್ಲಾ ಸಂಘದ ವತಿಯಿಂದ ಧನ ಸಹಾಯ ವಿತರಿಸಲಾಯಿತು.
ಜ್ಯೋತಿ ಪ್ರವೀಣ್ ಸ್ವಾಗತಿಸಿದರು. ವಿಜೇತ್ ಕುಂಪಲ ಆಟಗಾರರ ನೋಂದಾವಣೆ ಹಾಗೂ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ಸಚಿತ್ ಕ್ರಿಕೆಟ್ ತಂಡಗಳ ಮಾಲಕರನ್ನು ಪರಿಚಯಿಸಿದರು. ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿ ಮನೋಹರ್ ವಂದಿಸಿದರು.