ಈ ಯೋಜನೆ ಮಕ್ಕಳ ಬಗೆಗಿನ ಕನಸುಗಳನ್ನು ಸಾಕಾರಗೊಳಿಸಲು ಬಲುಸುಲಭ: ಪ್ರಹ್ಲಾದ್ ಜೆ.ಶೆಟ್ಟಿ
ಈ ಯೋಜನೆ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲಿದೆ: ಸುದೀಪ್ ಕುಮಾರ್ ಶೆಟ್ಟಿ
ವಿಟ್ಲ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ. ಮಕ್ಕಳ ಪೋಷಕರ ಆರ್ಥಿಕ ಅನುಕೂಲಕ್ಕಾಗಿ “ವಿಶ್ವಾಸ ನಿಧಿ” ಯೋಜನೆಯನ್ನು ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಅನುಷ್ಠಾನಗೊಳಿಸಿದ್ದೇವೆ ಎಂದು ಮಾಣಿ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಜೆ.ಶೆಟ್ಟಿ ಹೇಳಿದರು.

ಅವರು ಮಾಣಿ ಪೆರಾಜೆ ಬಾಲವಿಕಾಸ ಅಂಗ್ಲಮಾಧ್ಯಮ ಶಾಲೆಯಲ್ಲಿ ಜೂ.22ರಂದು ನಡೆದ ಪೋಷಕರ ಸಭೆಯಲ್ಲಿ ನೂತನ ವಿಶ್ವಾಸ ನಿಧಿ ಯೋಜನೆಯ ಕುರಿತು ಅವರು ಮಾಹಿತಿ ನೀಡಿದರು.
ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಹಲವು ಕನಸುಗಳನ್ನು ಕಾಣುತ್ತಾರೆ, ಆದರೆ ಕೆಲವೊಂದು ಸಮಯ ಸಂದರ್ಭಗಳು ನಮ್ಮನ್ನು ಕಟ್ಟಿಹಾಕುತ್ತವೆ, ಆದರೆ ವಿಶ್ವಾಸ ನಿಧಿ ಯೋಜನೆಯಲ್ಲಿ ತೊಡಗಿಸಿಕೊಂಡವರು ಮಕ್ಕಳ ಬಗೆಗಿನ ಕನಸುಗಳನ್ನು ಸಾಕಾರಗೊಳಿಸಲು ಸುಲಭ ಸಾದ್ಯವಿದೆ, ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಚಿಂತನೆ ನಡೆಸಿ ವಿಶ್ವಾಸ ನಿಧಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಮಕ್ಕಳಿಗೂ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕು ಎನ್ನುವ ಕನಸನ್ನು ಹೊತ್ತ ಪ್ರಹ್ಲಾದ್ ಶೆಟ್ಟಿರವರ ಕನಸಿನ ಬಾಲವಿಕಾಸ ಶಾಲೆ, ಇದೀಗ ಪೋಷಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ವಿಶ್ವಾಸ ನಿಧಿ ಯೋಜನೆ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲಿದೆ ಎಂದರು.
ಶಾಲಾಮುಖ್ಯೋಪಾಧ್ಯಾಯಿನಿ ಸುಪ್ರಿಯಾ ಡಿ. ರವರು ವಿಶ್ವಾಸ ನಿಧಿ ಯೋಜನೆಯ ಬಗ್ಗೆ ವಿವರ ನೀಡಿ ಹತ್ತನೇ ತರಗತಿ ವರೆಗಿನ ಗುಣಾತ್ಮಕ ಶಿಕ್ಷಣವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ವಿಶ್ವಾಸ ನಿಧಿ ಯೋಜನೆ ಮಕ್ಕಳಿಗೆ ಹೆಚ್ಚು ಅನುಕೂಲಕರ ಎಂದ ಅವರು, ಯೋಜನೆಯಿಂದ ಸಿಗುವ ಉಪಯೋಗಗಳನ್ನು ಪೋಷಕರ ಮುಂದಿಟ್ಟರು.
ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿಯವರು ಮಾತನಾಡಿ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮಹಮ್ಮದ್ ಯಾಸೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವಾಸ ನಿಧಿಯ ವಿಶೇಷತೆ
ಪ್ರೀನರ್ಸರಿಯಿಂದ 7ನೇ ತರಗತಿ ವರೆಗಿನ ಮಕ್ಕಳ ಪೋಷಕರು, ಟ್ರಸ್ಟ್ ನಿಗದಿ ಪಡಿಸಿರುವ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಮುಂದೆ 10ನೇ ತರಗತಿವರೆಗೆ ಯಾವುದೇ ಹಣ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಿಶ್ವಾಸ ನಿಧಿಗೆ ಸೇರ್ಪಡೆಗೊಂಡ ಮಕ್ಕಳಿಗೆ ಪುಸ್ತಕ, ಯೂನಿಫಾರಂ, ಮಧ್ಯಾಹ್ನದ ಊಟದ ಶುಲ್ಕದಲ್ಲಿಯೂ ವಿಶೇಷ ರಿಯಾಯಿತಿ ಲಭಿಸಲಿದೆ.