ತೊನ್ನುರೊಗ / ವಿಟಿಲೈಗೊ ಎಂದರೇನು?

0

ಇಂದು ಜೂನ್ 25 ವಿಶ್ವ ತೊನ್ನುರೋಗ ದಿನ ಎಂದು ಪರಿಗಣಿಸಲಾಗಿದೆ. ತೊನ್ನುರೋಗ (ಬಿಳಿಕಲೆ / ಪಾಂಡುರೋಗ / ವಿಟಿಲೈಗೊ / ವಿಟಿಲಿಗೊ) ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಈ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸರಿಪಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.


ತೊನ್ನುರೊಗ / ವಿಟಿಲೈಗೊ ಎಂದರೇನು?
ಸೂರ್ಯನ ಬೆಳಕು ಹಾನಿಕಾರಕ ನೇರಳಾತೀತ (ultra violet rays) ಕಿರಣಗಳನ್ನು ಹೊಂದಿರುತ್ತದೆ, ಇದು ಚರ್ಮಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್-ಗೆ ಕಾರಣವಾಗಬಹುದು. ಈ ನೇರಳಾತೀತ ಕಿರಣಗಳಿಂದ ಹಾನಿಯಾಗದಂತೆ ತಡೆಯಲು, ನಮ್ಮ ಚರ್ಮವು ‘ಮೆಲನಿನ್’ ಎಂಬ ಅಂಶವನ್ನು ಉತ್ಪಾದಿಸುತ್ತದೆ. ಈ ’ಮೆಲನಿನ್’ ಕಪ್ಪು ಬಣ್ಣದ ಪದಾರ್ಥವಾಗಿದ್ದು, ನಮ್ಮ ಚರ್ಮದ ವರ್ಣ, ಇದು ಎಷ್ಟು ಪ್ರಮಾಣದಲ್ಲಿ ಇರುತ್ತದೆ ಅದರ ಮೇಲೆ ಅವಲಂಬಿಸುತ್ತದೆ. ವಿವಿಧ ಕಾರಣಗಳಿಂದ ವಿಟಿಲೈಗೋ ಇರುವವರಲ್ಲಿ ಈ ಮೆಲನಿನ್ ಅಂಶ ನಾಶವಾಗುವ ಕಾರಣಕ್ಕೆ, ಅವರ ಚರ್ಮವು ಬಿಳುಪಾಗುತ್ತದೆ.


ಇದು ಕುಷ್ಠರೋಗದ ಲಕ್ಷಣವೇ?:
ವಿಟಿಲೈಗೋ ಮತ್ತು ಕುಷ್ಠರೋಗಕ್ಕೆ ಸಂಬಂಧವಿಲ್ಲ. ಇವೆರಡೂ ಒಂದೇ ರೀತಿ ಕಾಣುವುದರಿಂದ ಅವು ಒಂದೇ ರೋಗ ಎಂದು ಜನರು ಭಾವಿಸುತ್ತಾರೆ.


ತೊನ್ನುರೋಗ ಹೇಗೆ ಬರುತ್ತದೆ?:
ತೊನ್ನುರೋಗ ಸಾಂಕ್ರಾಮಿಕವಲ್ಲ. ವಿಟಿಲೈಗೋದಿಂದ ಬಳಲುತ್ತಿರುವ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ, ಸ್ಪರ್ಶ ಅಥವಾ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವ ಮೂಲಕ ಇದು ಹರಡುವುದಿಲ್ಲ. ತೊನ್ನುರೋಗ ಅನೇಕ ಕಾರಣಗಳಿಂದ ಬರಬಹುದು. ಕೆಲವರಿಗೆ ಇದು ಅನುವಂಶಿಕವಾಗಿ ಬರುತ್ತದೆ, ಇತರರಿಗೆ ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ / ರೋಗನಿರೋಧಕ ಶಕ್ತಿಯ ವ್ಯತ್ಯಾಸದಿಂದ ಬರುತ್ತದೆ (ಆಟೋಇಮ್ಯೂನ್). ಇದು ಯವುದೇ ವಯಸ್ಸಿನಲ್ಲಿ ಬರಬಹುದು. ವಿಶ್ವದ ಜನಸಂಖ್ಯೆಯ 1% ಜನರು ವಿಟಿಲೈಗೊದಿಂದ ಬಳಲುತ್ತಿದ್ದಾರೆ.


ತೊನ್ನುರೋಗ ಮಕ್ಕಳಿಗೂ ಬರುತ್ತದೆಯೇ?:
ಹೌದು. ವಿಟಿಲೈಗೊ / ತೊನ್ನುರೋಗ ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ / ಮಕ್ಕಳಿಗೂ ಬರಬಹುದು.
ತೊನ್ನುರೋಗ ಆಹಾರದ ಮೂಲಕ ಗುಣವಾಗುತ್ತದೆಯೇ?
ತೊನ್ನುರೋಗ ಪೂರ್ತಿಯಾಗಿ ಆಹಾರದಿಂದ ಗುಣವಾಗದು. ಆದರೂ, ಸಮತೋಲನಯುಕ್ತ ಆಹಾರ ಆರೋಗ್ಯಕರ ಚರ್ಮಕ್ಕೆ ಸಹಾಯಮಾಡಬಹುದು.

ಕೆಲವರು ತೊನ್ನುರೋಗ ನಾಗದೋಷ ಅಥವ ಹಿಂದಿನ ಜನ್ಮದ ತಪ್ಪಿನಿಂದ ಆಗುತ್ತದೆ ಎಂದು ನಂಬುತ್ತಾರೆ. ಇದು ನಿಜವೇ?
ಇಲ್ಲ. ವಿಟಿಲೈಗೊ / ತೊನ್ನುರೋಗ ನಾಗದೋಷ ಅಥವಾ ಹಿಂದಿನ ಜನ್ಮದ ತಪ್ಪಿನಿಂದ ಆಗುವುದಿಲ್ಲ. ಇದು ಚರ್ಮದ ಮೆಲನಿನ್ ಅನ್ನುವ ಬಣವನ್ನು ಉತ್ಪಾದಿಸುವ ಕೋಶಗಳು (Melanocyte) ನಾಶದಿಂದ ಉಂಟಾಗುವ ವೈಜ್ಞಾನಿಕ ಕಾಯಿಲೆ. ಇದು ಅನುವಂಶಿಕ, ಪ್ರತಿರಕ್ಷಣಾ ವ್ಯವಸ್ಥೆಯ (immune system) ಅಸಮತೋಲನ ಅಥವ ಕೆಲವೊಂದು ಪರಸರೀಯ ಕಾರಣಗಳಿಂದ ಉಂಟಾಗಬಹುದು. ವಿಟಿಲೈಗೊ ಯಾವುದೇ ದೇವರ ಶಾಪ ಅಥವ ವೈಯಕ್ತಿಕ ತಪ್ಪಿನ ಫಲಿತಾಂಶವಲ್ಲ.


ತೊನ್ನುರೋಗ ಪೀಡಿತರು ಮದುವೆಯಾಗಬಹುದೇ?
ತೊನ್ನುರೋಗವನ್ನು ಔಷಽ ಮತ್ತು ಶಸಚಿಕಿತ್ಸೆಯಿಂದ ಗುಣಪಡಿಸಬಹುದು. ತೊನ್ನುರೋಗ ಇರುವವರೊಂದಿಗೆ ಇದ್ದರೆ ಅದು ಹರಡುವುದಿಲ್ಲ. ಹಾಗಾಗಿ ತೊನ್ನುರೋಗ ಪೀಡಿತರನ್ನು ಮದುವೆಯಾಗಲು ಯಾವುದೇ ಸಮಸ್ಯೆ ಇರುವುದಿಲ್ಲ. ಅವರು ಆರೋಗ್ಯವಂತರಾಗಿಯೇ ಇರುತ್ತಾರೆ.


ತೊನ್ನುರೊಗವನ್ನು ಗುಣಪಡಿಸಬಹುದೇ?
ಪ್ರಾರಂಭದಲ್ಲಿಯೇ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದರೆ, ಸಂಪೂರ್ಣ ಮುಕ್ತಿ ಸಾಧ್ಯವಿದೆ. ಮುಲಾಮುಗಳು, -ಟೊಥೆರಪಿ, ಎಕ್ಸೈಮೆರ್ ಲೇಸರ್ ಹಾಗು ಶಸಚಿಕಿತ್ಸೆಯ ಮೂಲಕ ಬಿಳಿ ಕಲೆಗಳನ್ನು ಮುಂಚಿನಂತೆ ಮಾಡಬಹುದು. ಇವರು ಯಾವುದೇ ಸಂದರ್ಭದಲ್ಲೂ ಕೀಳರಿಮೆಯನ್ನು ಹೊಂದಬೇಕಾಗಿಲ್ಲ. ಇವರು ಎಲ್ಲರಂತೆ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬಹುದು. ಅವರನ್ನು ಖಿನ್ನತೆಗೆ ಒಳಪಡಿಸದೆ, ಸಮಾನವಾಗಿ ಪರಿಗಣಿಸುವುದು ಹಾಗು ತೊನ್ನುರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ತೊನ್ನುರೋಗ ಕಾಯಿಲೆಯಿಂದ ಬಳಲುವವರನ್ನು ಬೆಂಬಲಿಸಲು ಸಮಾಜದ ಜವಾಬ್ದಾರಿಗಳು:
೧. ಮಾನಸಿಕ ಬೆಂಬಲ: ತೊನ್ನುರೋಗ ಕಾಯಿಲೆಯಿಂದ ಬಳಲುವವರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಅವರ ಸಮಸ್ಯೆಗಳನ್ನು ಕೇಳಿ, ಮಾತನಾಡಿ, ಅವರಿಗೆ ಧೈರ್ಯ ತುಂಬುವುದು ಅತ್ಯಂತ ಮುಖ್ಯವಾದ ಕೆಲಸ.
೨. ಅವಮಾನ ತರುವ ವರ್ತನೆ ತೊರೆದು ಸಹಾನುಭೂತಿ ವಹಿಸೋಣ: ಅವರನ್ನು ಹೀನಾಯವಾಗಿ ಕಾಣುವ / ದೂರವಿಟ್ಟುಕೊಳ್ಳುವ ಅಥವಾ ಅಸಮಾಧಾನ ವ್ಯಕ್ತಪಡಿಸುವ ವರ್ತನೆಗಳನ್ನು ಸಮಾಜದಿಂದ ನಿವಾರಿಸಿ ಸಹಾನುಭೂತಿಯನ್ನು ಬೆಳೆಸೋಣ.
೩. ಅವರ ಸಾಮಾನ್ಯ ಜೀವನ ಶೈಲಿಗೆ ಅವಕಾಶ: ಪಾಠಶಾಲೆ, ಉದ್ಯೋಗಸ್ಥಳ, ಆಟದ ಮೈದಾನ, ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಅವರು ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸೋಣ.
೪. ಅವರ ಯಶಸ್ಸುಗಳನ್ನು ಅಭಿನಂದಿಸೋಣ: ಅವರು ಸಾಧನೆ ಮಾಡಿದರೆ ಸಾರ್ವಜನಿಕವಾಗಿ ಅಭಿನಂದಿಸಿ, ಪ್ರಶಂಸಿಸಿ ಅವರಿಗೆ ಪ್ರೋತ್ಸಾಹ ನೀಡೋಣ.
೫. ಅರಿವು ಮೂಡಿಸೋಣ: ತೊನ್ನುರೋಗ ಕಾಯಿಲೆ ಹಂಚಿಕೊಳ್ಳುವುದರಿಂದ ಬಾಧೆಯಾಗದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ, ತಪ್ಪು ತಿಳುವಳಿಕೆ ನಿವಾರಿಸೋಣ.
೬. ವೈದ್ಯಕೀಯ ಸಲಾಹೆ ನೀಡಲು ಸಹಾಯ: ಅವರನ್ನು ತಕ್ಷಣ ತಜ್ಞ ವೈದ್ಯರ ಬಳಿಗೆ ಕರೆದೊಯ್ಯಲು ಸಹಾಯ ಮಾಡಿ, ಚಿಕಿತ್ಸೆ ಪಡೆದುಕೊಳ್ಳಲು ಪ್ರೇರೇಪಿಸೋಣ.

ಡಾ. ಸಚಿನ್ ಮನೋಹರ್ ಶೆಟ್ಟಿ, ಚರ್ಮ ತಜ್ಞರು, ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಸೆಂಟರ್, ಬೊಳ್ವಾರು, ಪುತ್ತೂರು

LEAVE A REPLY

Please enter your comment!
Please enter your name here