2025-26ರ ಹವಾಮಾನ ಆಧಾರಿತ ಬೆಳೆವಿಮೆ ನೋಂದಣಿ ಆರಂಭ – ಸಹಕಾರ ಸಂಘಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸುತ್ತೋಲೆ

0

ಪುತ್ತೂರು: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ 2025-26ನೇ ಸಾಲಿನ ನೋಂದಣಿಗೆ ಅಧಿಕೃತ ಆದೇಶ ಹೊರಬಿದ್ದಿದ್ದು, ವಿಮಾ ಕಂತು ಪಾವತಿಸಲು ಜುಲೈ 31 ಕಡೆಯ ದಿನವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಜೂ.25ರಂದು ಯೋಜನೆಯ ಸುತ್ತೋಲೆ ಬಂದಿದೆ.


ದಕ್ಷಿಣ ಕನ್ನಡ ಜಿಲ್ಲೆಗೆ ಈ ಹಿಂದಿನಂತೆ ಅಡಿಕೆ ಮತ್ತು ಕಾಳುಮೆಣಸು ಕೃಷಿಗೆ ಮಾತ್ರ ವಿಮಾ ಕಂತು ಪಾವತಿಸಲು ಅವಕಾಶವಿದ್ದು, ಅಡಿಕೆಗೆ ಎಕ್ರೆಗೆ ರೂ.2590/- ಮತ್ತು ಕಾಳುಮೆಣಸಿಗೆ ಎಕ್ರೆಗೆ ರೂ.951/- ನಿಗದಿಪಡಿಸಲಾಗಿದೆ. ವಿಮಾ ಕಂತು ಪಾವತಿಸಲು ಅಂತಿಮ ದಿನಾಂಕ ಮತ್ತು ವಿಮಾಕಂತು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯತ್‌ಗಳನ್ನು ವಿಮಾ ಘಟಕಗಳಾಗಿ ಸರ್ಕಾರದ ಆದೇಶದಲ್ಲಿ ಅಧಿಸೂಚಿಸಲಾಗಿದ್ದು, ಅಡಿಕೆ ಮತ್ತು ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಪಾಲ್ಗೊಳ್ಳಬಹುದಾಗಿದ್ದು, ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಛಿಕವಾಗಿದ್ದು, ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳದೇ ಇರಲು ಇಚ್ಛಿಸಿದಲ್ಲಿ ನೋಂದಣಿಯ ಅಂತಿಮ ದಿನಾಂಕದ ಒಂದು ವಾರದೊಳಗೆ ಬೆಳೆ ಸಾಲ ಪಡೆದ ಹಣಕಾಸು ಸಂಸ್ಥೆಗೆ ಮುಚ್ಚಳಿಕೆ ಪತ್ರವನ್ನು ನೀಡಬೇಕಾಗುತ್ತದೆ. ವಿಮಾ ಕಂತು ಪಾವತಿಸುವ ರೈತರು ಫ್ರುಟ್ ತಂತ್ರಾಂಶದ ನೋಂದಣಿ ಸಂಖೈಯನ್ನು ಹೊಂದಿರಬೇಕಿದ್ದು, ಸದರೀ ನೋಂದಣಿ ಸಂಖ್ಯೆಗೆ ಪಹಣಿ ವಿವರ ಜೋಡಣೆ ಆಗಿರಬೇಕು. ವಿಮೆ ಮಾಡಿಸಿರುವ ರೈತರಿಗೆ ವಿಮೆ ಮಾಡಲ್ಪಟ್ಟ ಬೆಳೆಗಳಿಗೆ 2025ನೇ ಜುಲೈ 1ರಿಂದ 2026ನೇ ಜೂನ್ 30ರವರೆಗೆ ವಿಮಾ ರಕ್ಷಣಾ ಅವಧಿ ಇರುತ್ತದೆ.


ವಿಮಾ ನಷ್ಟ ಪರಿಹಾರವು ಆಧಾರ್ ಪೇಮೆಂಟ್ ಸಿಸ್ಟಮ್ ಮೂಲಕ ಆಗುವುದರಿಂದ ವಿಮಾ ಅರ್ಜಿಯಲ್ಲಿ ಸಕ್ರಿಯ ಆಧಾರ್ ಮಾಹಿತಿಯನ್ನು ನೀಡಬೇಕಾಗಿದೆ. ಬೆಳೆ ಸಾಲ ಹೊಂದಿಲ್ಲದ ರೈತರು ಆಧಾರ್ ಮಾಹಿತಿಯೊಂದಿಗೆ ಜಮೀನಿನ ಪಹಣಿ ಪತ್ರ, ಉಳಿತಾಯ ಖಾತೆ ದಾಖಲೆಗಳು, ಸ್ವಯಂಘೋಷಣೆ ನಮೂನೆಗಳನ್ನು, ಪ್ರೀಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೋಂದಣಿ ಮಾಡಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಸಹಕಾರ ಸಂಘಗಳು, ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here