ಪುತ್ತೂರು ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ಶ್ರೀಶಾವಾಸವಿ ಆಯ್ಕೆ

0

ಪುತ್ತೂರು: ತುಳುನಾಡಿನ ಭಾಷಾ, ಸಾಹಿತ್ಯ, ಲಿಪಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಬಹುಮುಖ ಪ್ರತಿಭೆ ಶ್ರೀಶಾವಾಸವಿ ತುಳುನಾಡ್ (ವಿದ್ಯಾಶ್ರೀ ಎಸ್) ಅವರನ್ನು ಪುತ್ತೂರು ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ.

ಪವಿತ್ರ ಪಡುಮಲೆಯ ಪುಣ್ಯ ಭೂಮಿಯಲ್ಲಿ ಜನಿಸಿ, B.Sc. in Multimedia Technology ಪದವಿ ಪಡೆದಿರುವ ಶ್ರೀಶಾವಾಸವಿ, ತಮ್ಮ ತಾಯ್ನಾಡು ತುಳುನಾಡಿನ ಭಾಷೆ ಹಾಗೂ ಲಿಪಿಯ ವೈಭವವನ್ನು ಅರಿತು ಅದನ್ನು ಜನಮಾನಸದಲ್ಲಿ ಉಜ್ವಲಗೊಳಿಸಲು ನಿತ್ಯ ಶ್ರಮಿಸುತ್ತಿದ್ದಾರೆ.

2013ರಿಂದ ತುಳು ಲಿಪಿಯ ಅಭ್ಯಾಸ ಹಾಗೂ ಶಾಸನ ಅಧ್ಯಯನಕ್ಕೆ ತೊಡಗಿಕೊಂಡ ಶ್ರೀಶಾವಾಸವಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಆರಂಭವಾದ ವಾರಾಂತ್ಯ ತುಳು ಲಿಪಿ ತರಗತಿಗಳನ್ನು ಮುಂಬರುವ ದಶಕದವರೆಗೆ ಕಾರ್ಕಳ, ಉಡುಪಿ, ಕಾಸರಗೋಡು, ಪೈವಳಿಕೆ, ಮಂಗಳೂರು, ಮೂಡಬಿದ್ರೆ ಹಾಗೂ ಬೆಂಗಳೂರು ಸೇರಿದಂತೆ ನಾನಾ ಊರುಗಳಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ. ಅವರು ಅಂದು ‘ಏಕೈಕ ತುಳು ಲಿಪಿ ಶಿಕ್ಷಕಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಂಬೈ, ಸೂರತ್, ದುಬೈ, ಮಸ್ಕತ್‌ನಲ್ಲೂ ಆನ್‌ಲೈನ್ ತರಗತಿಗಳನ್ನು ನೀಡಿರುವ ಅವರು, ಆಕಾಶವಾಣಿಯಲ್ಲಿ ಭಾಷಣ, ತುಳುಪರ ಹೋರಾಟಗಳಲ್ಲಿ ಸಕ್ರಿಯ ಪಾಲ್ಗೊಳ್ಳುವ ಮೂಲಕ ಜನಮಾನಸ ಗೆದ್ದಿದ್ದಾರೆ. ಗ್ರಾಫಿಕ್ ಡಿಸೈನರ್ ಆಗಿರುವ ಅವರು ‘ತುಳು ಲಿಪಿಟ್ ಎನ್ನ ಪುದರ್ ಅಭಿಯಾನ’ದ ಮೂಲಕ ಶೀರ್ಷಿಕೆಗಳು, ಬ್ಯಾನರ್‌ಗಳು, ಪತ್ರಿಕೆಗಳಿಗೆ ವಿನ್ಯಾಸಗಳ ಮೂಲಕ ತುಳುವ ಸೇವೆ ಮಾಡುತ್ತಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರು ತುಳು, ಕನ್ನಡ, ತೆಲುಗು ಭಾಷೆಗಳಲ್ಲಿ ಕಥೆ, ಕಾದಂಬರಿ, ಲೇಖನಗಳನ್ನು ಬರೆಯುತ್ತಿದ್ದು, ‘ಸಪ್ತಭಾಷಾ ಕವಿ’ ಎಂಬ ಗೌರವವನ್ನೂ ಪಡೆದ ಅವರು, ‘ಸಿರಿಗಂಗೆ’, ‘ಉಡಲ ದುನಿಪು’, ‘ಗೇನೊದ ಬುಲೆ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಹತ್ತಕ್ಕೂ ಅಧಿಕ ಕೃತಿಗಳು ಮುದ್ರಣದ ಅಂಚಿನಲ್ಲಿದೆ. ‘ಪ್ರತಿಲಿಪಿ’ ಬರಹಗಾರರ ಡಿಜಿಟಲ್ ವೇದಿಕೆಯಲ್ಲಿ ಇವರ ಬಹುಪಾಲು ಸಾಹಿತ್ಯ ಪ್ರಕಟವಾಗಿದೆ. ಯಕ್ಷಗಾನ, ತಾಳಮದ್ದಳೆ, ನಾಟಕ, ಚಲನಚಿತ್ರ ಕ್ಷೇತ್ರದಲ್ಲಿಯೂ ಶ್ರೀಶಾವಾಸವಿ ಸಕ್ರಿಯರಾಗಿದ್ದು, ಚಲನಚಿತ್ರಗಳಿಗೆ ಸಾಹಿತ್ಯ ಹಾಗೂ ಸಹ ನಿರ್ದೇಶನದ ಜವಾಬ್ದಾರಿ ನಿಭಾಯಿಸಸುವುದರೊಂದಿಗೆ ಪೋಷಕನಟಿಯಾಗಿ ಹೊರಹೊಮ್ಮಿದ್ದಾರೆ.

2017ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ನೇಮಕಗೊಂಡ ಅವರು, ಇಂದು ‘ತುಳು ಅಪ್ಪೆಕೂಟ ಪುತ್ತೂರು’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ನಂದಲ, ಬರವು-ಸರವು’ ಎಂಬ ತುಳು ಲಿಪಿ ಪತ್ರಿಕೆಯಲ್ಲಿ ಸಂಪಾದಕರಾಗಿದ್ದವರು, ಪ್ರಸ್ತುತ ‘ಪೂವರಿ’ ಪತ್ರಿಕೆಯಲ್ಲಿ ಉಪಸಂಪಾದಕಿ ಹಾಗೂ ಅಂಕಣಕಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಪತ್ರಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.

ತುಳುವ ಮಹಾಸಭೆ ಪುನಶ್ಚೇತನದ ಹಾದಿಯಲ್ಲಿ:

1928ರ ಸೆಪ್ಟೆಂಬರ್ 23ರಂದು ಎಸ್.ಯು. ಪಣಿಯಾಡಿ ಅವರ ಶ್ರದ್ಧಾ ಮತ್ತು ಸಾಹಸದ ಫಲವಾಗಿ ಸ್ಥಾಪಿತಗೊಂಡ ತುಳುವ ಮಹಾಸಭೆ, ತನ್ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪುನಶ್ಚೇತನಗೊಳ್ಳುತ್ತಿರುವ ಮಹತ್ವದ ಘಟ್ಟದಲ್ಲಿದೆ. ಈ ಹೊಸ ಹಂತದಲ್ಲಿ, ಮಹಾಸಭೆ ಈ ಕೆಳಗಿನ ಮಹತ್ವದ ಗುರಿಗಳನ್ನು ಕೈಗೊಂಡಿದೆ.

ತುಳುನಾಡಿನ ಜನಪದ ಕಲಾ, ಸಾಹಿತ್ಯ ಪರಂಪರೆಯ ಉಜ್ಜೀವನ, ತುಳುನಾಡನ್ ಕಳರಿ – ಸಮರಕಲೆ ಮತ್ತು ಮರ್ಮ ಚಿಕಿತ್ಸೆ ತರಬೇತಿ ಕೇಂದ್ರಗಳ ಸ್ಥಾಪನೆ, ನಶಿಸಿದ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಜಾತಿ–ಮತ–ಭಾಷಾ ಸೌಹಾರ್ದತೆಯ ಬಲವರ್ಧನೆ, ಈ ಗುರಿಗಳನ್ನು ಸ್ಥಳೀಯ ಮಟ್ಟದಲ್ಲಿ ಸಾಧ್ಯವನ್ನಾಗಿಸಲು, ಅಲ್ಲಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪುತ್ತೂರು ತಾಲೂಕಿನಲ್ಲಿ ಶ್ರೀಶಾವಾಸವಿ ತುಳುನಾಡ್ ನೇತೃತ್ವದಲ್ಲಿ ಶೀಘ್ರದಲ್ಲೇ ವಿವಿಧ ಚಟುವಟಿಕೆಗಳು ಆರಂಭವಾಗಲಿವೆ.

LEAVE A REPLY

Please enter your comment!
Please enter your name here