ಪುತ್ತೂರು:ಕಡೇಶಿವಾಲಯ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೀನಾಕ್ಷಿ ಎಂಬವರ ಮನೆಗೆ ಸರಕಾರಿ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮತ್ತು ಸಚಿವರಿಗೂ ಮನವಿ ಮಾಡಿದ್ದರೂ ನ್ಯಾಯ ಸಿಗುವಂತೆ ಕಾಣುತ್ತಿಲ್ಲ.ಹಾಗಾಗಿ 15 ದಿನದೊಳಗೆ ರಸ್ತೆ ಮಾಡಿಕೊಡದಿದ್ದಲ್ಲಿ ಸಂಘಟನೆಯಿಂದ ಪ್ರತಿಭಟನೆ ಮೂಲಕ ರಸ್ತೆ ನಿರ್ಮಾಣ ಮಾಡಲಿದ್ದೇವೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮೀನಾಕ್ಷಿಯವರು ಕಡೇಶಿವಾಲಯ ಗ್ರಾಮದ ನೀರಕಜೆ ಎಂಬಲ್ಲಿ ವಾಸ್ತವ್ಯವಿದ್ದು 1.98 ಎಕ್ರೆ ಜಮೀನು ಹೊಂದಿರುತ್ತಾರೆ.ಅವರ ಪತಿ ಚಂದಪ್ಪ ನಾಯ್ಕ ಅವರ ನಿಧನದ ಬಳಿಕ ಜಮೀನು ಅವರ ಪತ್ನಿ ಮೀನಾಕ್ಷಿ, ಮಕ್ಕಳಾದ ನಮಿತ, ಅಕ್ಷತಾ ಮತ್ತು ಬಾಲಕೃಷ್ಣ ಯಾನೆ ಅಕ್ಷಯ ಅವರಿಗೆ ಪಹಣಿ ದಾಖಲಾಗಿದೆ.ಇತ್ತೀಚೆಗೆ ಬಾಲಕೃಷ್ಣ ಯಾನೆ ಅಕ್ಷಯ ಮರದಿಂದ ಬಿದ್ದು ನಡೆದಾಡಲು ಕಷ್ಟ ಆಗಿದೆ.ಮೀನಾಕ್ಷಿಯವರು ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಅವರ ಮನೆಗೆ ಆಂಬುಲೆನ್ಸ್ ಬರಲು ಅಸಾಧ್ಯವಾದಾಗ ಚಯರ್ನಲ್ಲಿ ಎತ್ತಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿತ್ತು.ಈ ಕುರಿತು ಅನೇಕ ಬಾರಿ ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಗೆ, ಪಂಚಾಯತ್ಗಳಿಗೆ ಮನವಿ ಮಾಡಲಾಗಿದೆ.ಆದರೆ ಸ್ಥಳೀಯ ವ್ಯಕ್ತಿಗಳು ಸರಕಾರಿ ಜಾಗವನ್ನು ಸ್ವಾಧಿನ ಮಾಡಿಕೊಂಡು ರಸ್ತೆ ಬಿಟ್ಟು ಕೊಡುತ್ತಿಲ್ಲ. ಈ ಕುರಿತು ಎಸಿ,ಡಿಸಿ, ಸಚಿವರ ತನಕವೂ ದೂರು ನೀಡಿ ಆಗಿದೆ.ಆದರೂ ಮೀನಾಕ್ಷಿಯವರು ಮೂಲಭೂತ ಸೌಕರ್ಯದಿಂದ ವಂಚಿರಾಗಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಣಿ ವಲಯದ ಮಹಿಳಾ ಅಧ್ಯಕ್ಷೆ ಅಕ್ಷತಾ,ಸಂಘಟನೆ ಸದಸ್ಯರಾದ ಸುಬ್ರಾಯ, ಪ್ರಶಾಂತ್,ಮೀನಾಕ್ಷಿ ಅವರ ಪುತ್ರ ಬಾಲಕೃಷ್ಣ ಯಾನೆ ಅಕ್ಷಯ ಉಪಸ್ಥಿತರಿದ್ದರು.