ಚುನಾವಣೆಯಿಂದ ಪ್ರಜಾಪ್ರಭುತ್ವದ ಬಗೆಗೆ ಅರಿವು : ಡಾ. ಚಂದ್ರಶೇಖರ್
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡಿಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಹಾಗೂ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಗಳ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್ ಅನ್ನು ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡಬಿದಿರೆಯ ಪಶುವೈದ್ಯ ಡಾ. ಚಂದ್ರಶೇಖರ್ ಅವರು ಮಾತನಾಡಿ ವಿದ್ಯಾರ್ಥಿ ಪರಿಷತ್ ಎಂಬುದು ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯ ನಡುವೆ ಕೊಂಡಿಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಚುನಾವಣೆಯನ್ನು ನಡೆಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಸಾಕಾರಗೊಳಿಸಿದಾಗ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಾಗಿದೆ. ಉತ್ತಮ ವಿದ್ಯಾರ್ಥಿ ನಾಯಕರು ಸಂಸ್ಥೆಯ ಪ್ರಗತಿಗೆ ಪೂರಕವಾದ ಮಹತ್ತರವಾದ ಕೆಲಸಗಳನ್ನು ಜತೆಗಿರುವ ವಿದ್ಯಾರ್ಥಿಗಳಿಂದ ಮಾಡಿಸಬಹುದು. ಕಾಲೇಜಿನ ಶಿಸ್ತು ಮತ್ತು ಘನತೆಯನ್ನು ಹೆಚ್ಚಿಸುವ ಕೆಲಸಗಳು ವಿದ್ಯಾರ್ಥಿ ನಾಯಕರಿಂದ ಆಗಬೇಕಾಗಿದೆ ಎಂದರು.
ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಾದ ಸುಧನ್ವ ಸುದರ್ಶನ್ ಶಾಲಾ ನಾಯಕನಾಗಿ, ರಕ್ಷಾ ಎಸ್. ಎಸ್ ಶಾಲಾ ನಾಯಕಿಯಾಗಿ, ಗೃಹಮಂತ್ರಿಯಾಗಿ 9ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್.ಜಿ, ಶಿಸ್ತು ಪಾಲನಾ ಮಂತ್ರಿಯಾಗಿ ವಂಶಿಕಾ ಬಿ. ರೈ, ಕ್ರೀಡಾ ಮಂತ್ರಿಯಾಗಿ ಭಾರ್ಗವ್ ಎಸ್. ರೈ, ಶಿಕ್ಷಣ ಮಂತ್ರಿಯಾಗಿ 8ನೇ ತರಗತಿಯ ವಿದ್ಯಾರ್ಥಿ ಶ್ರೀನಿಕ್ ಎಸ್. ಆಚಾರ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಅನ್ವಿತಾ.ಎಸ್, ಸಂವಹನ ಮಂತ್ರಿಯಾಗಿ 7ನೇ ತರಗತಿಯ ವಿದ್ಯಾರ್ಥಿನಿ ಹರ್ಷಲ್ ಡಿ.ರೈ, ಆರೋಗ್ಯ ಮಂತ್ರಿಯಾಗಿ ಸಾನ್ವಿ. ಜಿ, ನೀರಾವರಿ ಮಂತ್ರಿಯಾಗಿ ಸುಧನ್ವಾ ಕೆ, ವಿರೋಧ ಪಕ್ಷದ ನಾಯಕರಾಗಿ ತನ್ವಿ ಹಾಗೂ ಪ್ರಜನ್ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ನೇತೃತ್ವದಲ್ಲಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು.
ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷೆಯಾಗಿ ಆಯ್ಕೆಯಾದ ಶ್ರೀಲಕ್ಷ್ಮೀ ಸುರೇಶ್, ಉಪಾಧ್ಯಕ್ಷ ಎಸ್ ಚಿನ್ಮಯ್, ಕಾರ್ಯದರ್ಶಿ ಕೆ ಎಲ್ ಶಶಾಂಕ್ ಹಾಗೂ ಜೊತೆ ಕಾರ್ಯದರ್ಶಿ ವೈಷ್ಣವಿ ಎಸ್ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್ಇವರ ನೇತೃತ್ವದಲ್ಲಿ ಪ್ರತಿಜ್ಞಾ ವಿಧಿ ಕೈಗೊಂಡರು. ನಂತರ ನಾಲ್ಕು ಶಾಲಾ ಹೌಸ್ಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಐರಾವತ ಗುಂಪಿನ ನಾಯಕನಾಗಿ ಪ್ರಣಿತ್, ನಾಯಕಿಯಾಗಿ ವಿವಿಕ್ತಾ ರೈ, ಕಾಮಧೇನು ಗುಂಪಿನ ನಾಯಕನಾಗಿ ವಿಹಾನ್ ಕೃಷ್ಣ, ನಾಯಕಿಯಾಗಿ ಸಾನ್ವಿ.ಆರ್, ಅಮೃತ ಗುಂಪಿನ ನಾಯಕನಾಗಿ ಜ್ಯೋತಿರಾದಿತ್ಯ, ನಾಯಕಿಯಾಗಿ ಮನಸ್ವಿ, ಕಲ್ಪವೃಕ್ಷ ಗುಂಪಿನ ನಾಯಕನಾಗಿ ಪ್ರಿಯಾಂಶುರಾವ್, ನಾಯಕಿಯಾಗಿ ಮಂದಿರಾ ಕಜೆ ಇವರು ಅತಿಥಿಗಳಿಂದ ಗುಂಪಿನ ಬಾವುಟಗಳನ್ನು ಸ್ವೀಕರಿಸಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹಿರಣ್ಮೈ ಸ್ವಾಗತಿಸಿ ಭವಿಷ್ಯ ಅತಿಥಿಗಳ ಪರಿಚಯ ಮಾಡಿದರು. ಅದಿತಿ ವಂದಿಸಿದರು. ಕುವಿರಾ ಹಾಗೂ ಆದ್ಯತಾ ಕಾರ್ಯಕ್ರಮ ನಿರೂಪಿಸಿದರು.