ಕಾಣಿಯೂರು: ಯುವಜನತೆ ಒಳ್ಳೆಯ ಹವ್ಯಾಸಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಲ್ಲರೂ ಜಾಗೃತರಾಗುವ ಮೂಲಕ ಸಮಾಜವನ್ನು ದುಶ್ಚಟಗಳಿಂದ ಮುಕ್ತಗೊಳಿಸೋಣ ಎಂದು ಪುತ್ತೂರು ಜೆ ಎಂ ಎಫ್ ಸಿ ಹಾಗೂ ಪ್ರಧಾನ ಹಿರಿಯ ವ್ಯವಹಾರಿಕ ಸಿವಿಲ್ ನ್ಯಾಯಾಧಿಶರಾದ ಶಿವಣ್ಣ ಹೆಚ್. ಆರ್ ಹೇಳಿದರು.
ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕಾಣಿಯೂರು ಸರಕಾರಿ ಪ್ರೌಢ ಶಾಲೆ, ರಾಷ್ಟೀಯ ಸೇವಾ ಯೋಜನೆ ಆಶ್ರಯದಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣಲ್ಲಿ ಜೂ. 27ರಂದು ವಿಶ್ವ ಮಾದಕ ವಿರೋಽ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅದೆಷ್ಟೋ ಜನರ ಸಾವಿಗೆ ಕಾರಣವಾಗುತ್ತಿರುವ ಮಾದಕ ವಸ್ತುಗಳಿಗೆ ಜನರು ಆಕರ್ಷಿತರಾಗುತ್ತಿರುವುದು ದುರಂತ ಬಹುಮುಖ್ಯವಾಗಿ ಕಾಡುತ್ತಿರುವ ಈ ಡಗ್ಸ್ ಮಾಫಿಯಾ ಸೇರಿದಂತೆ ಕೆಟ್ಟ ಚಟಗಳಿಗೆ ಯುವಜನರು ಬಲಿಯಾದಲ್ಲಿ ಕುಟುಂಬವೇ ನಾಶವಾಗುತ್ತದೆ. ಈ ಜಾಲದ ಬಗ್ಗೆ ಅರಿತು ಯುವ ಸಮೂಹ ದೂರವಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಅಧ್ಯಕ್ಷ ನ್ಯಾಯವಾದಿ ಮಹೇಶ್ ಕೆ ಸವಣೂರು ಮಾತನಾಡಿ, ವಿದ್ಯಾರ್ಥಿಗಳು ಕುಟುಂಬದ ಕಣ್ಮಣಿಗಳಾಗಿದ್ದು, ತಂದೆ, ತಾಯಿಗಳ ಕನಸನ್ನು ನನಸು ಮಾಡಬೇಕು. ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಚಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ. ದುಶ್ಚಟ ಇರುವ ವ್ಯಕ್ತಿಯ ಮನೆಯಲ್ಲಿ ಎಲ್ಲರೂ ನರಕ ಯಾತನೆ ಅನುಭವಿಸಬೇಕಾಗುತ್ತದೆ. ಇಂತಹ ದುಶ್ಚಟದ ದಾಸರಾಗದೇ ಜೀವನದಲ್ಲಿ ಉನ್ನತ ಸಾಧನೆ ಮಾಡಿ ಈ ಸಮಾಜಕ್ಕೆ ಕೀರ್ತಿ ತರುವಂತಹ ವ್ಯಕ್ತಿಗಳು ನೀವಾಗಬೇಕು ಎಂದರು.
ಸವಣೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಕಿಶನ್ ಬಿ.ವಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿದ್ಯಾರ್ಥಿ ಜೀವನದಲ್ಲಿ ದುಶ್ಚಟ, ದುರಾಭ್ಯಾಸದ ದಾಸರಾಗದೇ ತಂದೆ ತಾಯಿ ಕಂಡಿರುವ ಕನಸನ್ನು ನನಸು ಮಾಡಲು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಯುವಜನತೆ ದೇಶದ ಶಕ್ತಿಯಾಗಿದ್ದು, ದುಶ್ಚಟಗಳಿಂದ ದೂರವಿರುವ ದೃಢ ಸಂಕಲ್ಪ ಮಾಡಿದರೆ ಬದುಕು ಸ್ವಾಸ್ಥ್ಯದಿಂದ ಕೂಡಿರುತ್ತದೆ ಎಂದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಗೆಳೆಯರೊಂದಿಗೆ ಬೆಳೆಯುವುದರ ಜೊತೆಗೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸ್ವಸ್ಥ ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಯಂತಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಆದರ್ಶ ವ್ಯಕ್ತಿತ್ವದೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಯುವ ಜನತೆ ಸಾಗಿದಾಗ ಸಂಸ್ಕಾರಯುತ ಜೀವನ ನಿರ್ಮಾಣವಾಗುತ್ತದೆ ಎಂದರು. ಕಾಣಿಯೂರು ಸರಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಹನುಮಂತ ಮೊಗೇರ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟದಿಂದ ದೂರ ಉಳಿಯಬೇಕು. ಚಟಗಳಿಗೆ ಬಲಿಯಾಗದೇ ಇದ್ದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು.
ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಪ್ರಗತಿ ಬಂಧು ಸ್ವಸಹಾಯ ಸಂಘದ ಕಾಣಿಯೂರು ಒಕ್ಕೂಟದ ಅಧ್ಯಕ್ಷ ಕುಸುಮಾಧರ ಅನಿಲ, ಕಾಣಿಯೂರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಲಕ್ಷ್ಮೀ ಕೆ.ಟಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವಿಶ್ವನಾಥ ಕೂಡಿಗೆ ನ್ಯಾಯವಾದಿ ಪ್ರಿಯಾಮಹೇಶ್, ತಾಲೂಕು ಕಾನೂನು ಸೇವೆಗಳ ಸಮಿತಿಯ ಜ್ಯೋತಿ ಉಪಸ್ಥಿತರಿದ್ದರು.
ಕಡಬ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ ಟ್ರಸ್ಟ್ ನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ದುಶ್ಚಟ ವ್ಯಕ್ತಿಗಳಿಂದ ಸಮಾಜದ ಮೇಲೆ ಅಡ್ಡ ಪರಿಣಾಮ ಬಿರುತ್ತದೆ. ಎಲ್ಲರೂ ಜಾಗೃತರಾಗುವ ಮೂಲಕ ಸಮಾಜವನ್ನು ದುಶ್ಚಟ ಗಳಿಂದ ಮುಕ್ತ ಗೊಳಿಸೋಣ ಎಂದರು. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಸುಧಾಕರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾಣಿಯೂರು ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯೋಜನೆಯ ಸವಣೂರು ಮೇಲ್ವಿಚಾರಕಿ ವೀಣಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಜಗದೀಶ್ ಬಾರಿಕೆ ವಂದಿಸಿದರು.