ಪುತ್ತೂರು: ಪ್ರವಾದಿ ಮುಹಮ್ಮದ್(ಸ.ಅ) ಅವರ ಕುಟುಂಬ ಪರಂಪರೆಯಾದ ಅಹ್ಲ್ಬೈತ್ ಕುಟುಂಬ ಅಂತ್ಯ ದಿನದವರೆಗೂ ಇರಲಿದ್ದು ಅವರನ್ನು ಗೌರವಿಸುವುದು, ಪ್ರೀತಿಸುವುದು ಸತ್ಯ ವಿಶ್ವಾಸಿಯ ಲಕ್ಷಣವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.
ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜೂ.27ರಂದು ರಾತ್ರಿ ನಡೆದ ನೂರೇ ಫಝಲ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೂರ್ವಿಕ ಪಂಡಿತರೇ ಅಲ್ಲಾಹನ ಪರೀಕ್ಷೆಗೆ ಒಳಪಟ್ಟಿದ್ದು ಅವರು ಅಲ್ಲಾಹನ ಪರೀಕ್ಷೆಯನ್ನು ತಮ್ಮ ಕ್ಷಮೆ, ತಾಳ್ಮೆಯ ಮೂಲಕ ಸಹಿಸಿದ್ದಾರೆ, ನಾವು ಕೂಡಾ ವಿವಿಧ ಸಂದರ್ಭಗಳಲ್ಲಿ ಅಲ್ಲಾಹನ ಪರೀಕ್ಷೆಗೆ ಒಳಗಾದಾಗ ಕ್ಷಮೆ, ತಾಳ್ಮೆಯಿಂದ ಇರಬೇಕು, ಅಲ್ಲಾಹು ಮತ್ತು ಪ್ರವಾದಿ(ಸ.ಅ) ಅವರ ಪ್ರೀತಿ ಸಂಪಾದನೆಯೇ ನಮ್ಮ ಆದ್ಯತೆಯಾಗಬೇಕು ಎಂದು ಅವರು ಹೇಳಿದರು. ಮಖಾಂ ಝಿಯಾರತ್ ನಡೆಸುವುದು ಪುಣ್ಯವೇರಿದ ಕಾರ್ಯವಾಗಿದ್ದು ನಮ್ಮ ಯಾವುದೇ ಕಾರ್ಯದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕ ಭಕ್ತಿ ಇದ್ದಾಗ ಅದನ್ನು ಅಲ್ಲಾಹು ಸ್ವೀಕರಿಸುತ್ತಾನೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎ.ಪಿ ಉಸ್ತಾದ್ ಅವರು ಮೊದಲಿಗೆ ಕೂರತ್ ತಂಙಳ್ ಮಖಾಂ ಝಿಯಾರತ್ ನಡೆಸಿದರು.

ಕೂರತ್ ತಂಙಳ್ ಶಕ್ತಿ ಏನೆಂದು ತಿಳಿದಿದೆ-ಸಿ.ಎಂ ಇಬ್ರಾಹಿಂ
ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಮಾತನಾಡಿ ಕೂರತ್ ತಂಙಳ್ ಅವರ ಶಕ್ತಿ ಏನೆಂದು ಅವರು ಜೀವಿಸಿರುವಾಗಲೇ ಎಲ್ಲರಿಗೂ ತಿಳಿದಿತ್ತು, ಅವರ ಮರಣಾನಂತರವೂ ಅವರ ಶಕ್ತಿ ಏನೆಂದು ತಿಳಿಯುತ್ತಿದೆ ಎಂದು ಹೇಳಿದರು.
ಲಕ್ಷಾಂತರ ಜನರ ಪಾಲಿನ ನಿಧಿಯಾಗಿದ್ದರು-ಶಾಫಿ ಸಅದಿ
ರಾಜ್ಯ ವಕ್ಫ್ ಮಂಡಳಿ ಉಪಾಧ್ಯಕ್ಷ ಶಾಫಿ ಸಅದಿ ಬೆಂಗಳೂರು ಮಾತನಾಡಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ಅವರು ಪ್ರಮುಖವಾಗಿ ಕರಾವಳಿ ಭಾಗದಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು, ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಅಸೀಮವಾದ ಸೇವೆ ಸಲ್ಲಿಸಿದ ನಾಯಕರಾಗಿದ್ದರು, ಕೂರತ್ ತಂಙಳ್ ಅವರ ಸನ್ನಿಧಾನಕ್ಕೆ ಬಂದ ಅದೆಷ್ಟೋ ಮಂದಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಭೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಬದಲಾಗಿದ್ದರು ಎಂದು ಹೇಳಿದರು. ನಾಡಿನ ಲಕ್ಷಾಂತರ ಜನರ ಪಾಲಿನ ನಿಧಿಯಾಗಿದ್ದ ಕೂರತ್ ತಂಙಳ್ ಬಡವರಿಗೆ, ನೊಂದವರಿಗೆ, ರೋಗಿಗಳಿಗೆ ಆಸರೆಯಾಗಿದ್ದರು ಎಂದು ಹೇಳಿದರು.
ಶಾಫಿ ಸಅದಿಗೆ ಗೌರವಾರ್ಪಣೆ:
ರಾಜ್ಯ ವಕ್ಫ್ ಮಂಡಳಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಾಫಿ ಸಅದಿ ಬೆಂಗಳೂರು ಅವರನ್ನು ಎ.ಪಿ ಉಸ್ತಾದ್ ಅವರು ಸನ್ಮಾನಿಸಿದರು.

ಎಸ್ವೈಎಸ್ ಫಂಡ್ ಹಸ್ತಾಂತರ:
ಉರೂಸ್ ಕಾರ್ಯಕ್ರಮಕ್ಕೆ ಎಸ್ವೈಎಸ್ ದಕ ಈಸ್ಟ್ ಜಿಲ್ಲೆ ವತಿಯಿಂದ ರೂ.6 ಲಕ್ಷ ಮೊತ್ತದ ಚೆಕ್ನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ಪುಸ್ತಕ ಬಿಡುಗಡೆ:
ಕೂರತ್ ತಂಙಳ್ ಅವರ ಜೀವನ ಚರಿತ್ರೆಯನ್ನೊಳಗೊಂಡ ಪುಸ್ತಕವನ್ನು ಎ.ಪಿ ಉಸ್ತಾದ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ದುವಾ ನೆರವೇರಿಸಿದರು. ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙಳ್ ಅಲ್ ಬುಖಾರಿ ಕೂರತ್ ಅಧ್ಯಕ್ಷತೆ ವಹಿಸಿದ್ದರು. ಮುಹ್ಯಿಸ್ಸುನ್ನ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್ ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಹಲವಾರು ಉಲಮಾ-ಉಮರಾ ಪ್ರಮುಖರು ಉಪಸ್ಥಿತರಿದ್ದರು. ಸಿರಾಜುದ್ದೀನ್ ಸಖಾಫಿ ಕನ್ಯಾನ ಸ್ವಾಗತಿಸಿದರು. ಜಮಾಲುದ್ದೀನ್ ಅಮಾನಿ ವಂದಿಸಿದರು.