ಪುತ್ತೂರು: ಪುತ್ತೂರು ಸೇರಿದಂತೆ ದೇಶದಾದ್ಯಂತ ತನ್ನ ಶಾಖೆಗಳನ್ನು ಹೊಂದಿದ್ದು, ಇಂಗ್ಲೆಂಡ್ನ ಪ್ರತಿಷ್ಠಿತ ಗ್ರೀನ್ ಆಸ್ಕರ್-ಐಶ್ಡನ್ ಪ್ರಶಸ್ತಿಯಿಂದ ವಿಶ್ವದಲ್ಲಿಯೇ 3ನೇ ಬಾರಿಗೆ ಗುರುತಿಸಲ್ಪಟ್ಟ ಭಾರತದ ಸೆಲ್ಕೋ ಸೋಲಾರ್ ಸಂಸ್ಥೆಯ ಸಾಧನೆಯನ್ನು ಕೇಂದ್ರ ಪರ್ಯಾಯ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ.
ವಿಕೇಂದ್ರೀಕೃತ ಸೌರ ವಿದ್ಯುತ್ ಬಳಕೆಯಿಂದ ಬಡತನ ನಿವಾರಿಸುವಲ್ಲಿ ಸೆಲ್ಕೋ ಸಂಸ್ಥೆಯ ನಿಲುವು ಹಾಗೂ ಕಳೆದ 3 ದಶಕಗಳಲ್ಲಿ ಸಂಸ್ಥೆ ಸಾಗುತ್ತಿರುವ ರೀತಿಯನ್ನು ಪ್ರಸ್ತಾಪಿಸಿದ ಅವರು, ದೆಹಲಿಯಲ್ಲಿರುವ ತಮ್ಮ ಕಚೇರಿಯಲ್ಲಿ ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಭಾಸ್ಕರ್ ಹೆಗಡೆ ಹಾಗೂ ಡಿಜಿಎಂ ಗುರುಪ್ರಕಾಶ ಶೆಟ್ಟಿ ಅವರನ್ನು ಅಭಿನಂದಿಸಿದರು, ಕೌಶಲ್ಯಾಧಾರಿತವಾದ ಉತ್ಪನ್ನಗಳ ಹಾಗೂ ಸರಕಾರದ ಬೇರೆ ಬೇರೆ ಯೋಜನೆಗಳ ಸಾಧ್ಯಾಸಾಧ್ಯತೆಗಳನ್ನು ವಿಸ್ತೃತವಾಗಿ ನೀಡುವಂತೆ ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಹರೀಶ್ ಹಂದೆ ಅವರ ವೈಜ್ಞಾನಿಕ ದೃಷ್ಟಿಕೋನ ಹಾಗೂ ದೂರ ದೃಷ್ಟಿಯ ಚಿಂತನೆಗಳನ್ನು ಶ್ಲಾಘಿಸಿ, ಸೆಲ್ಕೋಕ್ಕೆ ಸಂದ ಪ್ರಶಸ್ತಿ ನಮ್ಮ ರಾಜ್ಯಕ್ಕೆ ದೇಶಕ್ಕೆ ಅಭಿಮಾನದ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಂಧನ ಕ್ಷೇತ್ರದ ಸ್ವಾವಲಂಬಿತನಕ್ಕೆ ಹಾಗೂ ಆತ್ಮ ನಿರ್ಭರ ತತ್ವಕ್ಕೆ ನಿಮ್ಮ ಕೆಲಸ ಪೂರಕವಾಗಿದೆ ಎಂದು ಸಹ ಮೆಚ್ಚುಗೆ ವ್ಯಕ್ತಪಡಿಸಿದರು.