ಉಪ್ಪಿನಂಗಡಿ: ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದ.ಕ. ಜೀವನದಿಗಳಾದ ನೇತ್ರಾವತಿ- ಕುಮಾರಧಾರಗಳು ಮೈದುಂಬಿ ಹರಿಯುತ್ತಿವೆ.

ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯು ಸಮುದ್ರಮಟ್ಟಕ್ಕಿಂತ 26.8 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸ್ನಾನಘಟ್ಟದ ಬಳಿ ನದಿಗಿಳಿಯುವ 36 ಮೆಟ್ಟಿಲುಗಳಲ್ಲಿ 19 ಮೆಟ್ಟಿಲುಗಳು ಕಾಣುತ್ತಿದ್ದು, ಉಳಿದ ಮೆಟ್ಟಿಲುಗಳು ಮುಳುಗಡೆಯಾಗಿವೆ. ಮಧ್ಯಾಹ್ನ 11ರ ಬಳಿಕ ಕುಮಾರಾಧಾರ ನದಿಯಲ್ಲಿ ಹೆಚ್ಚಿನ ನೀರು ಬಂದಿದ್ದು, ಕುಮಾರಧಾರ ನದಿ ನೀರಿನ ಹರಿಯುವಿಕೆ ರಭಸದಿಂದ ಕೂಡಿರುವುದರಿಂದ ನದಿಗಳ ಸಂಗಮ ಸ್ಥಳದಲ್ಲಿ ಕುಮಾರಧಾರ ನದಿಯ ನೀರು ನೇತ್ರಾವತಿ ನದಿ ನೀರಿನ ಸರಾಗ ಹರಿಯುವಿಕೆಗೆ ತಡೆಯೊಡ್ಡಿದೆ.
ಸ್ಥಳದಲ್ಲಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ ಅವರ ನೇತೃತ್ವದ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ದಿನದ 24 ಗಂಟೆಯೂ ಮೊಕ್ಕಂ ಇದ್ದು, ಅನಾಹುತಗಳೇನಾದರೂ ನಡೆದರೆ ತುರ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಸನ್ನದ್ಧಗೊಂಡಿದೆ.