ಗುಂಡಿಗೆ ಎದೆ ಕೊಟ್ಟು ಹೋರಾಡಿದ ವೀರರ ನಾಡು ಭಾರತ-ರಾಜೇಶ್ ಪದ್ಮಾರ್
ಪುತ್ತೂರು: ದೇಶ ಕಂಡ ಕೆಲವು ಘಟನೆಗಳನ್ನು ನಾವು ಶಾಶ್ವತವಾಗಿ ನೆನಪಿಟ್ಟುಕೊಳ್ಳಬೇಕಿದೆ. ನಮ್ಮ ದೇಶದಿಂದ ದೋಚಿ ಆಳಲು ಹೊರಟ ಪರಕೀಯರ ವಿರುದ್ಧದ ಹೋರಾಟವೂ ಅವುಗಳಲ್ಲೊಂದು.ಕಾರ್ಗಿಲ್ ಯುದ್ದದಲ್ಲಿ ಒಂದೊಂದೇ ಶಿಖರವನ್ನು ನಮ್ಮ ತೆಕ್ಕೆಗೆ ತೆಗೆದುಕೊಂಡು ಗೆಲುವು ಪಡೆಯುವ ಯೋಜನೆ ನಮ್ಮ ಸೈನಿಕರದಾಗಿತ್ತು. ಭಾರತದ ಕ್ಷಾತ್ರ ಪರಂಪರೆಯ ಬಗೆಗಿನ ಅರಿವು ನಮಗಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕದ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಎನ್.ಸಿ.ಸಿ, ವಿದ್ಯಾರ್ಥಿ ಸಂಘ ಹಾಗೂ ಐಕ್ಯೂಸಿ ಘಟಕದ ಸಹಯೋಗದಲ್ಲಿ ನಡೆದ ಕಾರ್ಗಿಲ್ ಸಮರ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದರು. ದೇಶದ ಬಗ್ಗೆ ಯೋಚಿಸದೇ ವಿಲಾಸೀ ಜೀವನದಲ್ಲಿ ಮೈಮರೆಯುವುದು ಒಳಿತಲ್ಲ. ಧರ್ಮ, ಜನಾಂಗ, ಭಾಷೆ ಎಂದು ಭೇದ ಕಾಣದೇ ಭಾರತೀಯತೆಯ ಪ್ರಜ್ಞೆ ನಮ್ಮಲ್ಲಿರಬೇಕು . ಭಾರತ ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಭಾರತದ ನೈಜ ಇತಿಹಾಸವನ್ನು ನಾವು ಅರಿಯಬೇಕಿದೆ.ವಿದ್ಯಾರ್ಥಿ ಜೀವನದಲ್ಲೇ ದೇಶ ಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ ನಾಯಕ್.ಬಿ, ಐಕ್ಯೂಎಸಿ ಸಂಯೋಜಕಿ ಡಾ. ರವಿಕಲಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್.ಎಸ್ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ.ಎಂ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್ ನಿರೂಪಿಸಿದರು.