ಪುತ್ತೂರು: ಪುತ್ತೂರಿನ ಅಕ್ಷಯ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ‘ಒತ್ತಡ ನಿರ್ವಹಣೆ’ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಅಕ್ಷಯ ಪದವಿ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ರಶ್ಮಿ.ಕೆ ಭಾಗವಹಿಸಿದ್ದರು. ಮಾನಸಿಕ ಅಥವಾ ದೈಹಿಕ ಒತ್ತಡಗಳು ಯಾವುದೇ ಕಾರಣಗಳಿಂದ ಉಂಟಾದರೂ ನಿಯಮಿತವಾದ ದೈಹಿಕ ಚಟುವಟಿಕೆ, ಉತ್ತಮ ಆಹಾರಸೇವನೆ ಮತ್ತು ಮಾನಸಿಕ ವಿಶ್ರಾಂತಿಗಳಿಂದ ಒತ್ತಡ ರಹಿತ ಸಮತೋಲನದ ಬದುಕು ನಡೆಸಬಹುದು, ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಗುರಿಯನ್ನು ಆಯ್ಕೆಮಾಡಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲೆ ಗಂಗಾರತ್ನ ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಒತ್ತಡವನ್ನು ಕಡಿಮೆಮಾಡಿಕೊಳ್ಳಬೇಕು ಎಂದರು.
ವಿಜ್ಞಾನ ಸಂಘದ ಸಂಯೋಜಕಿ ದೀಪಶ್ರೀ ಕೆ.ಬಿ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸ್ತುತಿ.ಬಿ ಸ್ವಾಗತಿಸಿ ಮಹಮ್ಮದ್ ಅಸ್ಫಾಕ್ ವಂದಿಸಿದರು. ಸೌಜನ್ಯ ನಿರೂಪಿಸಿದರು.