ಪುತ್ತೂರು: ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ (ICAR) ವತಿಯಿಂದ ನವದೆಹಲಿಯಲ್ಲಿ ಸೆ. 29 ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಕೃಷಿ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರು ಭಾಗವಹಿಸಲಿದ್ದಾರೆ. ಸೆ. 28 ರಂದು ಅವರು ವಿಮಾನದ ಮೂಲಕ ದಿಲ್ಲಿ ಪ್ರಯಾಣಿಸಲಿದ್ದಾರೆ.
ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ (ICAR, DCR) ಸಹಭಾಗಿತ್ವದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಕಡಮಜಲು ರವರು ಗೇರು ಬೆಳೆಯ ಬಗ್ಗೆ ಸ್ವ-ಅನುಭವದ ವಿಚಾರ ಮಂಡಿಸಲಿದ್ದಾರೆ. ಗೇರು ಬೆಳೆಯ ವೈಜ್ಞಾನಿಕ ಪದ್ಧತಿಗಳ ಬಗ್ಗೆ ಪ್ರಯೋಗಾತ್ಮಕ ಕೃಷಿಯಲ್ಲಿ ಅವರು ತೊಡಗಿರುವ ಹಿನ್ನೆಲೆಯಲ್ಲಿ ಇದೇ ವಿಚಾರದಲ್ಲಿ ಅದರ ಸಾಧಕ-ಬಾಧಕಗಳ ಕುರಿತಾಗಿ ವಿಚಾರ ಮಂಡಿಸಿ, ಈ ಬಗ್ಗೆ ವಿಜ್ಞಾನಿಗಳೊಂದಿಗೆ ಹಾಗೂ ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ ನ ಉನ್ನತ ಮಟ್ಟದ ವೈಜ್ಞಾನಿಕ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ. ದಿನಕರ ಅಡಿಗ, ಪ್ರಧಾನ ವಿಜ್ಞಾನಿ ಡಾ. ರವಿಪ್ರಸಾದ್, ಹಿರಿಯ ವಿಜ್ಞಾನಿಗಳಾದ ಡಾI ಮೋಹನ ಜಿ.ಎಸ್., ಡಾI ಮಂಜುನಾಥ ಕೆ., ಡಾI ಬಾಲಸುಬ್ರಹ್ಮಣ್ಯ ಡಿ., ಡಾI ಜ್ಯೋತಿ ನಿಶಾದ್, ಡಾI ಅಶ್ವತಿ ಸಿ., ರವರೂ ಇದರಲ್ಲಿ ಭಾಗವಹಿಸಲಿದ್ದಾರೆ. ಈ ವಿಚಾರ ಸಂಕಿರಣ ನವದೆಹಲಿಯ ನ್ಯಾಷನಲ್ ಎಗ್ರಿಕಲ್ಚರ್ ಸೈನ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.